ಹರಿಹರ: ಉತ್ತಮ ಉದ್ಯೋಗ ಪಡೆಯಲು ಶೈಕ್ಷಣಿಕ ಅರ್ಹತೆಯ ಜೊತೆಗೆ ಮೃದು ಕೌಶಲಗಳು ಹಾಗೂ ಅಭ್ಯರ್ಥಿಯ ವ್ಯಕ್ತಿತ್ವವೂ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಮೃದು ಕೌಶಲ ಮತ್ತು ವ್ಯಕ್ತಿತ್ವ ವಿಕಸನ ಅಭಿವೃದ್ಧಿ ತರಬೇತುದಾರ ಸಲೀಂ ಮಲಿಕ್ ಎ.ಆರ್. ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯೂಎಸಿ ಸಹಯೋಗದಲ್ಲಿ ಪ್ರೇರಣಾ ಕೋಶದಿಂದ ಪದವಿ ವಿದ್ಯಾರ್ಥಿಗಳಿಗೆ ಗುರುವಾರ ಆಯೋಜಿಸಿದ್ದ ‘ಮೃದು ಕೌಶಲಗಳು ಮತ್ತು ವ್ಯಕ್ತಿತ್ವ ವಿಕಸನ’ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
‘ಈ ಹಿಂದೆ ಶೈಕ್ಷಣಿಕ ಅರ್ಹತೆಯೇ ಉನ್ನತ ಸಂಸ್ಥೆಗಳಲ್ಲಿ ಉದ್ಯೋಗ ಪಡೆಯಲು ಆಧಾರವಾಗಿತ್ತು. ಬದಲಾದ ಸನ್ನಿವೇಶದಲ್ಲಿ ಅಭ್ಯರ್ಥಿಯ ಮೃದು ಕೌಶಲಗಳೆನಿಸಿದ ಸಂವಹನ, ತಂಡದಲ್ಲಿ ಕೆಲಸ ಮಾಡುವ ದಕ್ಷತೆ, ಸಮಸ್ಯೆ ಪರಿಹರಿಸುವುದು, ಕೇಳಿಸಿಕೊಳ್ಳುವ ಮತ್ತು ಮಾತನಾಡುವ ನೈಪುಣ್ಯ, ಕಾರ್ಯ ಸಾಮರ್ಥ್ಯ ತೋರುವುದು, ವ್ಯಕ್ತಿತ್ವ ವಿಕಸನ, ನಾಯಕತ್ವ, ಆಂಗಿಕ ಭಾಷೆ, ಪ್ರಸ್ತುತತೆ, ಸಮಯದ ನಿರ್ವಹಣೆ ಗುಣಗಳನ್ನು ನಿರೀಕ್ಷಿಸಲಾಗುತ್ತಿದೆ’ ಎಂದು ಅವರು ವಿವರಿಸಿದರು.
‘ಉದ್ಯೋಗ, ಸ್ವಂತ ಉದ್ಯಮ, ವ್ಯಾಪಾರ ಆರಂಭಿಸುವವರಿಗೆ ಮೃದು ಕೌಶಲ ಅತ್ಯಗತ್ಯ’ ಪ್ರಾಚಾರ್ಯ ರಮೇಶ್ ಎಂ.ಎನ್. ಹೇಳಿದರು.
ಪ್ರೇರಣಾ ಕೋಶದ ಅಧಿಕಾರಿ ಬಸವರಾಜ್ ಬಿ.ಪಾಟೀಲ್, ಉದ್ಯೋಗ ಕೋಶದ ಸಂಯೋಜನಾಧಿಕಾರಿ ಬಾಬು ಕೆ.ಎ., ಆಂಗ್ಲ ಬಾಷಾ ವಿಭಾಗ ಮುಖ್ಯಸ್ಥ ಬಿ.ಕೆ.ಮಂಜುನಾಥ್, ಐಕ್ಯುಎಸಿ ಸಂಚಾಲಕ ಅನಂತನಾಗ್ ಎಚ್.ಪಿ., ಆಕಾಶ್ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.