ADVERTISEMENT

ಸಾಮಾಜಿಕ ಸಮೀಕ್ಷೆ 10 ದಿನ ಮುಂದುವರಿಸಿ: ಪಿ.ಜೆ. ಮಹಾಂತೇಶ್

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2025, 6:00 IST
Last Updated 6 ಅಕ್ಟೋಬರ್ 2025, 6:00 IST
ಪಿ.ಜೆ. ಮಹಾಂತೇಶ್
ಪಿ.ಜೆ. ಮಹಾಂತೇಶ್   

ಪ್ರಜಾವಾಣಿ ವಾರ್ತೆ

ಹರಿಹರ: ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ಕಾರ್ಯವನ್ನು ಮುಂದಿನ 10 ದಿನಗಳ ವರೆಗೆ ಮುಂದುವರೆಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ. ಕೃಷ್ಣಪ್ಪ ಸ್ಥಾಪಿತ) ತಾಲ್ಲೂಕು ಘಟಕದ ಸಂಚಾಲಕ ಪಿ.ಜೆ. ಮಹಾಂತೇಶ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಸೆ. 22 ರಿಂದ ಆರಂಭವಾಗಿರುವ ಸಮೀಕ್ಷಾ ಕಾರ್ಯ ಅ.7ರವರೆಗೆ ನಡೆಯಲಿದೆ. ಆದರೆ, ಶಾಲಾ– ಕಾಲೇಜುಗಳಿಗೆ ದಸರಾ ರಜೆ ನೀಡಿರುವುದರಿಂದ ಪೋಷಕರು ಕುಟುಂಬ ಸಮೇತ ತಮ್ಮ ಸ್ವಂತ ಊರುಗಳಿಗೆ, ಪ್ರವಾಸಕ್ಕೆ ತೆರಳಿದ್ದು, ಸಮೀಕ್ಷೆ ನಡೆಸುವ ಸರ್ಕಾರದ ಉದ್ದೇಶ ಪರಿಪೂರ್ಣವಾಗಿ ಈಡೇರುವುದಿಲ್ಲ. ದಲಿತ, ಹಿಂದುಳಿದ ವರ್ಗಗಳು ಹಾಗೂ ಬಡವರ ಪಾಲಿಗೆ ಮುಖ್ಯವಾದ ಈ ಸಮೀಕ್ಷೆ ಪರಿಪೂರ್ಣವಾಗಬೇಕಿದೆ. ಹೀಗಾಗಿ ಸಮೀಕ್ಷಾ ಕಾರ್ಯವನ್ನು ಅ.17ರವರೆಗೆ ಮುಂದುವರೆಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

ADVERTISEMENT

ಈ ಹಿಂದೆ ರಾಜ್ಯ ಸರ್ಕಾರದಿಂದ ನಡೆಸಿದ ಜಾತಿ ಸಮೀಕ್ಷೆಗಾಗಿ 158 ಕೋಟಿ ಅನುದಾನ ಖರ್ಚು ಮಾಡಲಾಯಿತು, ಆದರೆ, ಆ ಸಮೀಕ್ಷಾ ಕಾರ್ಯ ತಾರ್ಕಿಕ ಹಂತಕ್ಕೆ ತಲುಪಲಿಲ್ಲ. ಈ ಬಾರಿಯ ಸಮೀಕ್ಷಾ ಕಾರ್ಯ ತಾರ್ಕಿಕ ಹಂತಕ್ಕೆ ತಲುಪಿ, ದುರ್ಬಲ ವರ್ಗದವರನ್ನು ಮುಖ್ಯವಾಹಿನಿಗೆ ತರಬೇಕೆಂದು ಆಗ್ರಹಿಸಿದರು.

ಸ್ಥಿತಿವಂತರು, ಮನುಸ್ಮೃತಿ ಆರಾಧಕರು ಈ ಸಮೀಕ್ಷೆ ಯಶಸ್ವಿಯಾಗದಂತೆ ತಡೆಯಲು ಹುನ್ನಾರ ನಡೆಸಿದ್ದಾರೆ. ಬಡವರ ಪರ ಇರುವ ಈ ಸಮೀಕ್ಷಾ ಕಾರ್ಯಕ್ಕೆ ಎಲ್ಲಾ ಧರ್ಮ, ಜಾತಿ, ಪಂಗಡದವರು ಸಹಕರಿಸಿ ಯಶಸ್ವಿಗೊಳಿಸಬೇಕಾಗಿ ಕೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.