ಹರಪನಹಳ್ಳಿ: ಪಟ್ಟಣ ಸೇರಿ ತಾಲ್ಲೂಕಿನಾದ್ಯಂತ ಭಾನುವಾರ ಬಿರುಗಾಳಿ ಸಹಿತ ಆಲಿಕಲ್ಲು ಮಳೆ ಸುರಿಯಿತು.
ಬಿರುಗಾಳಿಗೆ ಹರಿಹರ ರಸ್ತೆಯಲ್ಲಿನ ಮರಗಳು ಧರೆಗುರುಳಿದ್ದು, ಆಶ್ರಯ ಮನೆಗಳ ತಗಡಿನ ಶೀಟ್ಗಳು ಹಾರಿಹೋಗಿವೆ.
ಸಾರಿಗೆ ಘಟಕದ ಸಮೀಪದಲ್ಲಿ ಬೃಹತ್ ಮರವೊಂದು ಬಿದ್ದಿದ್ದು, ಶಿವಮೊಗ್ಗ-ಹೊಸಪೇಟೆ ರಾಜ್ಯ ಹೆದ್ದಾರಿ– 25ರಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಯಿತು. ಹಿರೆಕೆರೆಯಿಂದ ಅನಂತನಹಳ್ಳಿವರೆಗೂ ದೊಡ್ಡ ಮರಗಳು ನೆಲಕ್ಕುರುಳಿವೆ. ಯಾವುದೇ ಪ್ರಾಣಹಾನಿಯಾಗಿಲ್ಲ. ರಸ್ತೆಯ ಅಕ್ಕಪಕ್ಕದಲ್ಲಿದ್ದ ಗೂಡಂಗಡಿಗಳ ತಗಡಿನ ಶೀಟ್ಗಳು ಹಾರಿಹೋಗಿವೆ.
ಅಂಗಡಿಯಲ್ಲಿದ್ದ ಸಾಮಗ್ರಿಗಳು ಹಾಳಾಗಿದ್ದು, ಯಾವುದೇ ಪ್ರಾಣಾಪಾಯ ಆಗಿಲ್ಲ. ಸ್ಥಳೀಯರು ಮತ್ತು ಪುರಸಭೆ ಸಿಬ್ಬಂದಿ ಧರೆಗುರುಳಿದ ಮರ ಕಡಿದು ತೆರವುಗೊಳಿಸುವವರೆಗೂ ವಾಹನಗಳು ಅಲ್ಲಿಯೇ ನಿಲ್ಲುವಂತಾಯಿತು. ಇದರಿಂದ ಅರ್ಧ ಗಂಟೆಗೂ ಹೆಚ್ಚು ಕಾಲ ಸಂಚಾರ ಅಸ್ತವ್ಯಸ್ತಗೊಂಡಿತು.
ಅನಂತನಹಳ್ಳಿಯ ಪ್ರಗತಿಪರ ರೈತ ವಿರೂಪಾಕ್ಷಪ್ಪ ಅವರ ತೋಟದಲ್ಲಿ ಉತ್ತಮವಾಗಿ ಕಾಯಿಕಟ್ಟಿದ್ದ ಮಾವಿನಕಾಯಿಗಳು ಆಲಿಕಲ್ಲು ಮಳೆಗೆ ಹಾನಿಯಾಗಿವೆ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟ ಆಗಿದೆ ಎಂದು ಅವರು ಅಳಲು ತೋಡಿಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.