ದಾವಣಗೆರೆ: ಅಮ್ಮೆಂಬಳ ಸುಬ್ಬರಾವ್ ಪೈ ಅವರಿಂದ ಚಿಕ್ಕ ಹಣಕಾಸು ಸಂಸ್ಥೆಯಾಗಿ ಆರಂಭಗೊಂಡ ಕೆನರಾ ಬ್ಯಾಂಕ್ ಪ್ರಸ್ತುತ ₹ 16.86 ಲಕ್ಷ ಕೋಟಿ ರೂಪಾಯಿಗಳಷ್ಟು ವ್ಯವಹಾರವನ್ನು ದಾಖಲಿಸಿ ದೇಶದ ಅಗ್ರ ರಾಷ್ಟ್ರೀಕೃತ ಬ್ಯಾಂಕ್ ಎನಿಸಿಕೊಂಡಿದೆ. ಕೆನರಾ ಬ್ಯಾಂಕ್ ಸದಾ ಸಮಾಜ ಸೇವೆಯಲ್ಲಿ ತನ್ನನ್ನು ಗುರುತಿಸಿಕೊಂಡು ಸಮಾಜದ ಋಣ ತೀರಿಸುತ್ತಿದೆ ಎಂದು ಕೆನರಾ ಬ್ಯಾಂಕಿನ ವಿಭಾಗೀಯ ಪ್ರಬಂಧಕ ಜಿ.ಜಿ. ದೊಡ್ಡಮನಿ ತಿಳಿಸಿದರು.
ಅವರು ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ಸ್ಟ್ರೆಚರ್ಗಳನ್ನು ಜಿಲ್ಲಾ ಸರ್ಜನ್ ಡಾ. ಜಯಪ್ರಕಾಶ್ ಅವರಿಗೆ ಹಸ್ತಾಂತರಿಸಿ ಮಾತನಾಡಿದರು.
ಜಿಲ್ಲಾ ಸರ್ಜನ್ ಡಾ.ಜಯಪ್ರಕಾಶ್, ‘ಕೆನರಾ ಬ್ಯಾಂಕಿನ ಸಮಾಜ ಸೇವೆ ಅನುಕರಣೀಯ. ಸಾರ್ವಜನಿಕರಿಗೆ ಹೆಚ್ಚಿನ ವೈದ್ಯಕೀಯ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ವೀಲ್ಚೇರ್ಸ್, ಸ್ಟ್ರೆಚರ್, ಪಲ್ಸ್ ಆಕ್ಸಿಮೀಟರ್ ಮುಂತಾದ ಸಲಕರಣೆಗಳನ್ನು ಕೆನರಾ ಬ್ಯಾಂಕ್ ನೀಡಿದೆ. ಇದು ಆಸ್ಪತ್ರೆಗೆ ಬರುವ ಬಡ ರೋಗಿಗಳಿಗೆ ನೆರವಾಗಲಿದೆ. ಹಾಗೆಯೇ ಕೆನರಾ ಬ್ಯಾಂಕ್ ಕೊರೊನಾ ಸಂತ್ರಸ್ತರಿಗೆ, ಪರಿಚಾರಕರಿಗೆ, ವಾರಿಯರ್ಗಳಿಗೆ ಆಹಾರ ಸೇವೆಯನ್ನೂ ಒದಗಿಸಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಆಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ ಡಾ.ಮಂಜುನಾಥ ಪಾಟೀಲ್, ವಿನಯಕುಮಾರ್, ಕೆನರಾ ಬ್ಯಾಂಕ್ ವಿಭಾಗೀಯ ಪ್ರಬಂಧಕ ಆರ್.ಶ್ರೀನಿವಾಸ್, ಹಿರಿಯ ಪ್ರಬಂಧಕ ಬಿ.ಎ.ಸುರೇಶ್ ಅವರೂ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.