ADVERTISEMENT

ಆರೋಗ್ಯ ಸಂಸ್ಥೆಗಳ ಮಾಹಿತಿ ಸಲ್ಲಿಸಿ

ಕೋವಿಡ್ ಲಸಿಕೆ: ಜಿಲ್ಲಾ ಟಾಸ್ಕ್‌ಫೋರ್ಸ್ ಸಭೆಯಲ್ಲಿ ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2020, 15:38 IST
Last Updated 5 ನವೆಂಬರ್ 2020, 15:38 IST
ದಾವಣಗೆರೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ‘ಅನಿಮೀಯ ಮುಕ್ತ ಭಾರತ’ ಕಾರ್ಯಕ್ರಮದ ಪೋಸ್ಟರ್ ಅನ್ನು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಬಿಡುಗಡೆ ಮಾಡಿದರು
ದಾವಣಗೆರೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ‘ಅನಿಮೀಯ ಮುಕ್ತ ಭಾರತ’ ಕಾರ್ಯಕ್ರಮದ ಪೋಸ್ಟರ್ ಅನ್ನು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಬಿಡುಗಡೆ ಮಾಡಿದರು   

ದಾವಣಗೆರೆ:ಮುಂಬರುವ ಕೋವಿಡ್-19 ಲಸಿಕಾ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಮೊದಲ ಆದ್ಯತೆಯಲ್ಲಿ ಆರೋಗ್ಯ ಸಿಬ್ಬಂದಿಗೆ ಲಸಿಕೆ ನೀಡಲು ಸರ್ಕಾರ ಸೂಚಿಸಿದ್ದು, ಜಿಲ್ಲೆಯ ಎಲ್ಲ ಕ್ಲಿನಿಕ್, ನರ್ಸಿಂಗ್ ಹೋಂ, ನರ್ಸಿಂಗ್ ಕಾಲೇಜು, ಪ್ಯಾರಾಮೆಡಿಕಲ್, ಪ್ರಯೋಗಾಲಯ ಸಿಬ್ಬಂದಿ ವಿವರವನ್ನು ಶೀಘ್ರ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಡಳಿತ ಕಚೇರಿಯಲ್ಲಿ ಗುರುವಾರ ನಡೆದಕೋವಿಡ್ ಲಸಿಕೆ ಜಿಲ್ಲಾ ಟಾಸ್ಕ್‌ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಕೆಪಿಎಂಇ ಕಾಯ್ದೆಯಡಿ ಒಟ್ಟು 740 ಆರೋಗ್ಯ ಸಂಸ್ಥೆಗಳು ನೋಂದಣಿ ಮಾಡಿಸಿಕೊಂಡಿದ್ದು, ಪ್ರಸ್ತುತ 560 ಸಕ್ರಿಯ ಸಂಸ್ಥೆಗಳಿವೆ. ಈಗಾಗಲೇ 422 ಸಂಸ್ಥೆಗಳ ವಿವರ ಪಡೆದು ದೃಢೀಕರಣ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಇನ್ನುಳಿದ 110 ಲ್ಯಾಬ್ ಮತ್ತು ಸ್ಕ್ಯಾನಿಂಗ್ ಕೇಂದ್ರಗಳ ಮಾಹಿತಿಯನ್ನು ಇನ್ನೊಂದೆರಡು ದಿನಗಳಲ್ಲಿ ನಿಗದಿಪಡಿಸಿರುವ ತಂಡಗಳು ಕಲೆ ಹಾಕಿ ಸಲ್ಲಿಸಬೇಕು ಎಂದು ಸೂಚಿಸಿದರು.

ADVERTISEMENT

ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಮೀನಾಕ್ಷಿ, ‘ಆರೋಗ್ಯ ಸಂಸ್ಥೆಗಳ ಮಾಹಿತಿ ಕಲೆ ಹಾಕಲು 5 ತಂಡಗಳನ್ನು ನೇಮಿಸಿದ್ದು, ಈ ತಂಡಗಳು ಪ್ರತಿದಿನ ಸಂಸ್ಥೆಗಳಿಗೆ ಭೇಟಿ ನೀಡಿ ವಿವರ ಪಡೆಯುತ್ತಿವೆ. ಅನೇಕ ಆಸ್ಪತ್ರೆ, ಸಂಸ್ಥೆಗಳು ಬಂದ್ ಆಗಿದ್ದು, ಇವುಗಳ ಮಾಹಿತಿಯನ್ನೂ ಪಡೆಯಲಾಗುತ್ತಿದೆ’ ಎಂದರು.

ಕೋವಿಡ್ ಪರೀಕ್ಷೆ ಹೆಚ್ಚಿಸಿ:ಎಲ್ಲ ತಾಲ್ಲೂಕುಗಳಲ್ಲಿ ಕೋವಿಡ್ ಪರೀಕ್ಷೆಯ ಸಂಖ್ಯೆಯನ್ನು ಹೆಚ್ಚಿಸಬೇಕು. ಬಟ್ಟೆ, ಬಂಗಾರದ ಅಂಗಡಿಗಳು, ಹೋಟೆಲ್‍ಗಳು ಹೀಗೆ ಜನನಿಬಿಡ ಸ್ಥಳಗಳಲ್ಲಿ ಕೋವಿಡ್ ಪರೀಕ್ಷೆಯನ್ನು ಮಾಡಬೇಕು. ಸಾರ್ವಜನಿಕರೂ ಸಹಕರಿಸಬೇಕು.ಜಿಲ್ಲೆಗೆ ಪ್ರತಿದಿನ 2,200 ಕೊರೊನಾ ಪರೀಕ್ಷೆಯ ಗುರಿ ನೀಡಲಾಗಿದ್ದು, 2500 ರಿಂದ 2800 ರವರೆಗೆ ಪರೀಕ್ಷೆ ನಡೆಸುವಂತೆ ಡಿಎಚ್‍ಒ ಹಾಗೂ ತಾಲ್ಲೂಕು ವೈದ್ಯಾಧಿಕಾರಿಗಳಿಗೆ ಜಿಲ್ಲಾಧಿಕಾರಿ ತಾಕೀತು ಮಾಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ಪದ್ಮ ಬಸವಂತಪ್ಪ, ‘ಕೊರೊನಾ ಪರೀಕ್ಷೆ ಸಂಬಂಧ ಆರೋಗ್ಯಾಧಿಕಾರಿಗಳು ತಾಲ್ಲೂಕು ಇಒಗಳಿಗೆ ಮಾಹಿತಿ ನೀಡಬೇಕು’ ಎಂದರು.

‘ಅನಿಮೀಯ ಮುಕ್ತ ಭಾರತ’ ಕಾರ್ಯಕ್ರಮದ ಪೋಸ್ಟರ್ ಅನ್ನು ಜಿಲ್ಲಾಧಿಕಾರಿ ಬಿಡುಗಡೆ ಮಾಡಿದರು.

ಸಭೆಯಲ್ಲಿ ಡಿಎಚ್‍ಒ ಡಾ.ನಾಗರಾಜ್, ಜಿಲ್ಲಾ ಶಸ್ತ್ರಚಿಕಿತ್ಸಕ ಜಯಪ್ರಕಾಶ್, ಡಿಎಸ್‍ಒ ಡಾ. ರಾಘವನ್, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ. ನಟರಾಜ್, ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಣುಕಾರಾಧ್ಯ, ಡಿಎಲ್‍ಒ ಡಾ.ಮುರಳೀಧರ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ವಿಜಯಕುಮಾರ್, ತಾಲ್ಲೂಕು ವೈದ್ಯಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.