ದಾವಣಗೆರೆ: ಅಗತ್ಯ ಸೇವೆಗಳು ಹಾಗೂ ಅಗತ್ಯ ವಸ್ತುಗಳ ಸರಬರಾಜು ಮಾಡಲು ಪಾಸ್ಗಳನ್ನು ಪಡೆಯಲು ಇಲ್ಲಿನ ಬಡಾವಣೆ ಠಾಣೆಯಲ್ಲಿ ನೂಕುನುಗ್ಗಲು ಉಂಟಾಯಿತು.
ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚಿಸಿದ್ದರೂ ಕೆಲವರು ಅದನ್ನು ಉಲ್ಲಂಘಿಸುತ್ತಿದ್ದುದನ್ನು ಕಂಡ ಪೊಲೀಸರು ಬುದ್ಧಿವಾದ ಹೇಳಿದರು. ಅಲ್ಲದೇ ಅದಕ್ಕೂ ಮೀರಿ ಪೊಲೀಸ್ ಠಾಣೆಗೆ ನುಗ್ಗುತ್ತಿದ್ದವರನ್ನು ಪೊಲೀಸರು ಲಾಠಿ ತೋರಿಸಿ ಬೆದರಿಸಿದರು.
ತರಕಾರಿ ಮಾರಾಟಗಾರರು, ಹಾಲು ಹಾಕುವವರು, ಕಿರಾಣಿ ಅಂಗಡಿಗಳ ಮಾಲೀಕರು, ವೈದ್ಯಕೀಯ ಪ್ರತಿನಿಧಿಗಳಿಗೆ ಪಾಸ್ ವಿತರಿಸುತ್ತಿದ್ದು, ಇದನ್ನು ಪಡೆಯಲು ಬೆಳಿಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತಿದ್ದರು. ಅಗತ್ಯ ಸೇವೆಗಳ ಸರಬರಾಜುದಾರರು ಹಾಗೂ ಅಗತ್ಯ ವಸ್ತುಗಳ ಸರಬರಾಜು ವಾಹನಗಳಿಗೆ ಪಾಸ್ ವಿತರಿಸುತ್ತಿದ್ದು, ಪಾಸ್ನಲ್ಲಿ ಹೆಸರು ಹಾಗೂ ವಾಹನಗಳ ಸಂಖ್ಯೆಯನ್ನು ನೋಂದಾಯಿಸಬೇಕಾಗುತ್ತದೆ.
‘ಮೂರು ದಿನಗಳಿಂದಲೂ ಪಾಸ್ ವಿತರಣೆ ಮಾಡುತ್ತಿದ್ದು, ಸೋಮವಾರ 150 ಪಾಸ್ಗಳನ್ನು ವಿತರಿಸಿದ್ದೇವೆ. ಅಗತ್ಯ ವಸ್ತುಗಳನ್ನು ಸರಬರಾಜು ಮಾಡುವವರ ಆಧಾರ್ ಕಾರ್ಡ್ ಹಾಗೂ ಫೋಟೊಗಳನ್ನು ಪಡೆದು ಪಾಸ್ ನೀಡುತ್ತಿದ್ದೇವೆ’ ಎಂದು ಪಾಸ್ ವಿತರಕರೊಬ್ಬರು ತಿಳಿಸಿದರು.
‘ಅಗತ್ಯ ವಸ್ತುಗಳ ವಿತರಣೆಗೆ ಬೇರೆ ಜಿಲ್ಲೆ ಅಥವಾ ತಾಲ್ಲೂಕಿಗೆ ಹೋಗುವ ಗಾಡಿಗಳಿಗೆ ಪಾಸ್ ವಿತರಿಸುತ್ತಿದ್ದೇವೆ. ತಹಶೀಲ್ದಾರ್ ಕಚೇರಿ, ಎಪಿಎಂಸಿಯಲ್ಲೂ ಪಾಸ್ ವಿತರಣೆ ಮಾಡಲಾಗುತ್ತಿದೆ. ಹಳ್ಳಿಯಿಂದ ತರಕಾರಿ ತರುವವರಿಗೆ ಸಡಿಲಿಕೆ ಇದೆ. ಯಾರೂ ಗೊಂದಲ ಮಾಡಿಕೊಳ್ಳಬಾರದು. ಆದರೆ ವಿನಾಕಾರಣ ಸಂಚರಿಸಬಾರದು’ ಎಂದು ನಗರ ಡಿಎಸ್ಪಿ ಯು.ನಾಗೇಶ್ ಐತಾಳ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.