
ಹೊನ್ನಾಳಿ: ಭಾರತದ ಸಂಸ್ಕೃತಿಯನ್ನು ವಿಶ್ವಕ್ಕೆ ಸಾರಿದ ಮಹಾನ್ ಸಂತ ಸ್ವಾಮಿ ವಿವೇಕಾನಂದರು ಎಂದು ದಾವಣಗೆರೆ ಸೈನ್ಸ್ ಫೌಂಡೇಷನ್ನ ಸಂಚಾಲಕ ಎಂ. ಗುರುಸಿದ್ದಸ್ವಾಮಿ ಹೇಳಿದರು.
ಶುಕ್ರವಾರ ಪಟ್ಟಣದ ಎಸ್ಜೆವಿಪಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ 163ನೇ ಜಯಂತಿ ಹಾಗೂ ರಾಷ್ಟ್ರೀಯ ಯುವದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಬಾಲ್ಯದಲ್ಲಿಯೇ ತೀಕ್ಷ್ಣ ಬುದ್ಧಿ ಹೊಂದಿದ್ದ ವಿವೇಕಾನಂದರು ಅಷ್ಟೇ ಧೈರ್ಯವಂತರೂ ಆಗಿದ್ದರು. ದೇವರ ಹುಡುಕಾಟದಲ್ಲಿದ್ದ ಅವರು ಗುರು ರಾಮಕೃಷ್ಣ ಪರಮಹಂಸರ ಜೊತೆ ತಮ್ಮ ಸಂದೇಹಗಳನ್ನು ಹಂಚಿಕೊಂಡಿದ್ದರು. ಅವರಿಂದ ಉತ್ತರ ಕಂಡುಕೊಂಡು ಮಹಾನ್ ಸಂತರಾದರು’ ಎಂದರು.
ಮೇರಾ ಯುವ ಭಾರತ್ ಸಂಸ್ಥೆಯ ಜಿಲ್ಲಾ ಸಂಯೋಜಕ ಯೋಗೀಶ್ ಹೊಸಕೆರೆಮಠ್ ಮಾತನಾಡಿ, ವಿಮರ್ಶಾತ್ಮಕ ಆಲೋಚನೆ, ಜಾತ್ಯತೀತ ಮನೋಭಾವ ವಿವೇಕಾನಂದರನ್ನು ಚಿಂತಕರನ್ನಾಗಿಸಿತು ಎಂದು ಹೇಳಿದರು.
ಭಾರತಕ್ಕೆ ವಿಶ್ವಮಾನ್ಯತೆ ತಂದುಕೊಟ್ಟ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ ಎಂದು ವಿದ್ಯಾಪೀಠದ ನಿರ್ದೇಶಕ ಎಂ.ಪಿ.ಎಂ. ಚನ್ನಬಸಯ್ಯ ತಿಳಿಸಿದರು.
ದಾವಣಗೆರೆ ಜಿಲ್ಲಾ ಬಾಲಭವನದ ಸಂಯೋಜಕಿ ಎಸ್.ಬಿ. ಶಿಲ್ಪಾ, ಕಾಲೇಜಿನ ಉಪನ್ಯಾಸಕ ರವೀಂದ್ರನಾಥ್ ಮಾತನಾಡಿದರು. ಪ್ರಾಂಶುಪಾಲರಾದ ಮಮತಾ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರು, ಪ್ರಶಿಕ್ಷಣಾರ್ಥಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.