ಹರಿಹರ: ‘ಇತ್ತೀಚಿಗೆ ಮಠದ ಬಗ್ಗೆ ಕೆಲವರು ಅಪಪ್ರಚಾರ ಮಾಡಿದ್ದು, ಸತ್ಯಕ್ಕೆ ದೂರವಾಗಿದೆ. ಲೆಕ್ಕ ಪರಿಶೋಧಕರ ಸಲಹೆಯಂತೆ ಕೆಲವು ಆಸ್ತಿ ನೋಂದಣಿ ಮಾಡಿಸಲಾಗಿದೆ. ಇದರಲ್ಲಿ ಯಾವುದೇ ದುರುದ್ದೇಶವಿಲ್ಲ. ಭಕ್ತರಿಗೆ ಏನೇ ಅನುಮಾನಗಳಿದ್ದರೂ ನೇರವಾಗಿ ಮಠಕ್ಕೆ ಬಂದು ಚರ್ಚಿಸಬೇಕು. ಹಾದಿ ಬೀದಿಯಲ್ಲಿ ಮಾತನಾಡಬಾರದು’ ಎಂದುವಾಲ್ಮೀಕಿ ಗುರುಪೀಠದ ಪೀಠಾಧಿಪತಿ ಪ್ರಸನ್ನಾನಂದ ಸ್ವಾಮೀಜಿ ಮನವಿ ಮಾಡಿದರು.
ತಾಲ್ಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ಹಮ್ಮಿಕೊಳ್ಳಲಿರುವ ನಾಲ್ಕನೇ ವಾಲ್ಮೀಕಿ ಜಾತ್ರಾ ಮಹೋತ್ಸವದ ಸಂಬಂಧ ಬುಧವಾರ ನಡೆದಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಈ ವರ್ಷವೂ ಜಾತ್ರೆ ಹಲವು ವಿಶೇಷತೆಗಳಿಂದ ಕೂಡಿದೆ. ಸಮಾಜ ಸಂಘಟನೆ ಹಾಗೂ ಜಾಗೃತಿಗಾಗಿ ವಿವಿಧ ಗೋಷ್ಠಿಗಳಿರುತ್ತವೆ. ಒಂದು ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಿಸಿರುವ ವಾಲ್ಮೀಕಿ ರಥವನ್ನು ಜಾತ್ರೆಯಲ್ಲಿ ಲೋಕಾರ್ಪಣೆ ಮಾಡಲಾಗುವುದು. ಜಾತ್ರಾ ಸಮಿತಿ ಅಧ್ಯಕ್ಷರಾಗಿ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.
ಮಾಜಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ‘ಸಮಾಜ ಮತ್ತು ಮಠದ ಆಂತರಿಕ ವಿಷಯಗಳನ್ನು ಬಹಿರಂಗವಾಗಿ ಜಾಲತಾಣಗಳಲ್ಲಿ ಚರ್ಚಿಸುವುದು, ಇಲ್ಲಸಲ್ಲದ ಆರೋಪ ಮಾಡುವುದು ಸರಿಯಲ್ಲ. ಯಾವುದೇ ಅನುಮಾನಗಳಿದ್ದರೆ ಮಠಕ್ಕೆ ಭೇಟಿ ನೀಡಿ ಪರಿಹರಿಸಿಕೊಳ್ಳಬೇಕು’ ಎಂದರು.
ಲೇಖಕ ಹರ್ತಿಕೋಟೆ ವೀರೇಂದ್ರಸಿಂಹ ಜಾತ್ರಾ ಸಮಿತಿ ಸಂಯೋಜಕರಾಗಿ ಆಯ್ಕೆಯಾದರು. ಚಳ್ಳಕೆರೆ ಶಾಸಕ ಎಸ್. ರಘುಮೂರ್ತಿ, ಮಠದ ಆಡಳಿತಾಧಿಕಾರಿ ಟಿ.ಓಬಳಪ್ಪ, ಜಿ.ಟಿ.ಚಂದ್ರಶೇಖರಪ್ಪ, ಕೆ.ಪಿ.ಪಾಲಯ್ಯ, ಬಿ.ವೀರಣ್ಣ, ಡಾ.ವಾಲ್ಮೀಕಿ, ಹಾಸನ ಮಹೇಶ್, ವಿಜಯಪುರ ರಾಮಣ್ಣ, ಗದಗದ ಸಣ್ಣವೀರಪ್ಪ, ಹೊನ್ನಾಳಿ ಚಂದ್ರಪ್ಪ, ಹಾವೇರಿ ನಾಗರಾಜ್, ಹೊದಿಗೆರೆ ರಮೇಶ್, ಡಾ.ಎ.ಬಿ.ರಾಮಚಂದ್ರಪ್ಪ, ಕೆ.ಬಿ.ಮಂಜಣ್ಣ, ಆನಂದಪ್ಪ, ರಂಗಪ್ಪ, ಜಿಗಳಿ ಪ್ರಕಾಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.