ADVERTISEMENT

ಬೇಡಿಕೆ ಈಡೇರಿಕೆಗೆ ಅಂಗವಿಕಲರ ಆಗ್ರಹ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2021, 2:19 IST
Last Updated 26 ಫೆಬ್ರುವರಿ 2021, 2:19 IST
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಾವಣಗೆರೆಯ ಜಯದೇವ ವೃತ್ತದಲ್ಲಿ ದಾವಣಗೆರೆ ಜಿಲ್ಲಾ ಕಿವುಡರ ಸಂಘದ ಸದಸ್ಯರು ಗುರುವಾರ ಪ್ರತಿಭಟನೆ ನಡೆಸಿದರು
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಾವಣಗೆರೆಯ ಜಯದೇವ ವೃತ್ತದಲ್ಲಿ ದಾವಣಗೆರೆ ಜಿಲ್ಲಾ ಕಿವುಡರ ಸಂಘದ ಸದಸ್ಯರು ಗುರುವಾರ ಪ್ರತಿಭಟನೆ ನಡೆಸಿದರು   

ದಾವಣಗೆರೆ: ಶ್ರವಣ ಹಾಗೂ ವಾಕ್ ದೋಷವುಳ್ಳ ಅಂಗವಿಕಲರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಗರದ ಜಯದೇವ ವೃತ್ತದಲ್ಲಿ ದಾವಣಗೆರೆ ಜಿಲ್ಲಾ ಕಿವುಡರ ಸಂಘದ ನೇತೃತ್ವದಲ್ಲಿಶ್ರವಣದೋಷವುಳ್ಳ ಅಂಗವಿಕಲರು ಗುರುವಾರ ಪ್ರತಿಭಟನೆ ನಡೆಸಿದರು.

ವಿವಿಧ ಬೇಡಿಕೆಗಳ ಫಲಕಗಳನ್ನು ಹಿಡಿದು ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಅಂಗವಿಕಲರು ತಮ್ಮ ಸಂಜ್ಞೆ ಮೂಲಕವೇ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಸುಮಾರು 5 ಸಾವಿರ ಶ್ರವಣದೋಷವುಳ್ಳ ಅಂಗವಿಕಲರಿದ್ದಾರೆ. ಆದರೆ ಈ ಶ್ರವಣದೋಷವುಳ್ಳವರಿಗೆ ಸರ್ಕಾರ ಯಾವುದೇ ಸೌಲಭ್ಯ ನೀಡುತ್ತಿಲ್ಲ. ಬೇಡಿಕೆ ಈಡೇರಿಕೆಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಶೀಘ್ರ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ಜಿಲ್ಲೆಯ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ‘ಡಿ’ ಗ್ರೂಪ್ ಮತ್ತು ಅಟೆಂಡರ್ ಹುದ್ದೆ ನೀಡಬೇಕು. ಕಳಪೆ ಗುಣಮಟ್ಟದ ಶ್ರವಣಸಾಧನ ಮತ್ತು ತ್ರಿಚಕ್ರ ವಾಹನ ನೀಡುತ್ತಿರುವ ಅಂಗವಿಕಲರ ಕಲ್ಯಾಣಾಧಿಕಾರಿಯನ್ನು ಶೀಘ್ರ ವಜಾಗೊಳಿಸಬೇಕು. ಜಿಲ್ಲಾ ಪಂಚಾಯಿತಿ ಹಾಗೂ ಇತರೆ ಇಲಾಖೆಗಳಿಂದ ಕೇವಲ ದೈಹಿಕ ಅಂಗವಿಕಲರಿಗೆ ತ್ರಿಚಕ್ರ ವಾಹನ ನೀಡಲಾಗುತ್ತಿದೆ ವಿನಾಶ್ರವಣದೋಷವುಳ್ಳವರಿಗೆ ಯಾವುದೇ ಸೌಲಭ್ಯ ನೀಡುತ್ತಿಲ್ಲ. ಜಿಲ್ಲೆಯ ಪ್ರಮುಖ ಕಚೇರಿಗಳಲ್ಲಿ ಸಂಜ್ಞೆ ಭಾಷೆ ತಜ್ಞರನ್ನು ನೇಮಿಸಿಶ್ರವಣದೋಷವುಳ್ಳವರ ಜೊತೆ ಸಂವಹನಕ್ಕೆ ಅವಕಾಶ ಮಾಡಿಕೊಡಬೇಕು. 2019ರಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 70 ಶ್ರವಣದೋಷವುಳ್ಳ ಅಂಗವಿಕಲರಿಗೆ ಸಾಲ ಸೌಲಭ್ಯ, ಉದ್ಯೋಗ ನೀಡುವುದಾಗಿ ಹೇಳಿ ಕೇವಲ 7 ಜನರಿಗೆ ಸಾಲ ನೀಡಲಾಗಿದೆ. ಉಳಿದವರಿಗೂ ಸೌಲಭ್ಯ ಕಲ್ಪಿಸಿ ಎಂದು ಒತ್ತಾಯಿಸಿದರು.

ಬಳಿಕ ಜಿಲ್ಲಾಧಿಕಾರಿಗೆ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಕಿವುಡರ ಸಂಘದ ಗೌರವ ಉಪಾಧ್ಯಕ್ಷ ಎನ್. ಗಣೇಶ್, ಅಧ್ಯಕ್ಷ ಆಸೀಫ್, ಉಪಾಧ್ಯಕ್ಷ ಮಂಜುನಾಥ, ಪ್ರಧಾನ ಕಾರ್ಯದರ್ಶಿ ರಾಜಶೇಖರ್, ಗಿರೀಶ್‌ ಬಿ.ಟಿ., ನಾಗರಾಜ, ಪೂಜಾ, ಶ್ರುತಿ ಕೆ.ಎಂ. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.