ಮಲೇಬೆನ್ನೂರು: ಸಮೀಪದ ಉಕ್ಕಡಗಾತ್ರಿಯ ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಲು ಹೋಗಿದ್ದಾಗ ನೀರಿನ ಸೆಳವಿಗೆ ಸಿಲುಕಿ ಇಬ್ಬರು ಸಹೋದರಿಯರು ನಾಪತ್ತೆಯಾಗಿರುವ ಘಟನೆ ಭಾನುವಾರ ನಡೆದಿದೆ.
ಮಾಯಕೊಂಡ ಹೋಬಳಿಯ ಹುಚ್ಚವ್ವನಹಳ್ಳಿ ಗ್ರಾಮದ ವೀರಾಚಾರಿ ಅವರ ಪುತ್ರಿಯರಾದ ಚೈತ್ರಾ (19), ಪುಷ್ಪಾ (17) ನಾಪತ್ತೆಯಾದವರು.
ಚೈತ್ರಾ ಅವರನ್ನು ಹೊಳಲ್ಕೆರೆ ತಾಲ್ಲೂಕಿನ ಗುಂಡೇರಿಗ್ರಾಮದ ಕಾರ್ತಿಕ್ ಅವರ ಜೊತೆ ವಿವಾಹ ಮಾಡಿಕೊಡಲಾಗಿತ್ತು. ಪುಷ್ಪಾ ದಾವಣಗೆರೆಯ ಕಾಲೇಜೊಂದರಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು.
‘ಕುಟುಂಬ ಸಮೇತ ಸುಕ್ಷೇತ್ರಕ್ಕೆ ಬಂದಿದ್ದ ಯಾತ್ರಾರ್ಥಿಗಳು ಸ್ನಾನ ಮಾಡಲು ನದಿಗೆ ಇಳಿದಿದ್ದಾರೆ. ಸೆಳವಿನ ರಭಸಕ್ಕೆ ಸಿಲುಕಿ ನೋಡ ನೋಡುತ್ತಿದ್ದಂತೆ ಮುಳುಗಿ ಕಣ್ಮರೆಯಾದರು. ಅವರನ್ನು ಎಳೆದು ತರಲು ಆಗಲಿಲ್ಲ’ ಎಂದು ಪ್ರತ್ಯಕ್ಷ ದರ್ಶಿಗಳು ಮಾಹಿತಿ ನೀಡಿದರು.
ತಹಶೀಲ್ದಾರ್ ಡಾ. ಎಂ. ಬಿ. ಅಶ್ವತ್ಥ, ಪಿಎಸ್ಐ ರವಿಕುಮಾರ್ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ಅಗ್ನಿಶಾಮಕ ದಳದ ತುರ್ತು ಸೇವಾ ಸಿಬ್ಬಂದಿ ನಾಪತ್ತೆಯಾದವರ ಹುಡುಕಾಟ ಆರಂಭಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.