ADVERTISEMENT

ಮೂರು ತಿಂಗಳ ವೇತನ ಬಾಕಿ: ಆಸ್ಪತ್ರೆ ಸಿಬ್ಬಂದಿಯಿಂದ ಸಾಂಕೇತಿಕ ಧರಣಿ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2023, 5:48 IST
Last Updated 19 ಡಿಸೆಂಬರ್ 2023, 5:48 IST
ಹರಿಹರ: ಬಾಕಿ ವೇತನ ಪಾವತಿಗೆ ಆಗ್ರಹಿಸಿ ಹರಿಹರದ ಸಾರ್ವಜನಿಕ ಆಸ್ಪತ್ರೆಯ ಮುಂಭಾಗದಲ್ಲಿ ಸೋಮವಾರ ಗುತ್ತಿಗೆ ಆಧಾರಿತ ದಿನಗೂಲಿ ಕಾರ್ಮಿಕರು ಧರಣಿ ನಡೆಸಿದರು.
ಹರಿಹರ: ಬಾಕಿ ವೇತನ ಪಾವತಿಗೆ ಆಗ್ರಹಿಸಿ ಹರಿಹರದ ಸಾರ್ವಜನಿಕ ಆಸ್ಪತ್ರೆಯ ಮುಂಭಾಗದಲ್ಲಿ ಸೋಮವಾರ ಗುತ್ತಿಗೆ ಆಧಾರಿತ ದಿನಗೂಲಿ ಕಾರ್ಮಿಕರು ಧರಣಿ ನಡೆಸಿದರು.   

ಹರಿಹರ: ಗುತ್ತಿಗೆದಾರರಿಂದ ಮೂರು ತಿಂಗಳ ವೇತನ ಪಾವತಿ ಮಾಡದ್ದರಿಂದ ನಗರದ ಸಾರ್ವಜನಿಕ ಆಸ್ಪತ್ರೆಯ ಗುತ್ತಿಗೆ ಆಧಾರಿತ ದಿನಗೂಲಿ ನೌಕರರ ಸಂಘದಿಂದ ಸೋಮವಾರ ಸಾಂಕೇತಿಕ ಧರಣಿ ನಡೆಸಲಾಯಿತು.

‘ಆ. 11ರಂದು ರಾಯಚೂರಿನ ದೀಕ್ಷಾ ಕನ್ಸಲ್ಟೆನ್ಸಿ ಸಂಸ್ಥೆಯು ಗುತ್ತಿಗೆ ಪಡೆದಿದೆ. ಆಗಸ್ಟ್‌ ತಿಂಗಳ 21 ದಿನದ ವೇತನ ಪಾವತಿಸಿದ್ದು ಬಿಟ್ಟರೆ, ಇದುವರೆಗೂ ಯಾವುದೇ ಸಿಬ್ಬಂದಿಗೆ ಮೂರು ತಿಂಗಳಿಂದ ವೇತನ ನೀಡಿಲ್ಲ’ ಎಂದು ಸಂಘದ ಗೌರವಾಧ್ಯಕ್ಷ ಎಚ್.ಕೆ.ಕೊಟ್ರಪ್ಪ ದೂರಿದರು.

‘ಸಿಬ್ಬಂದಿ ಪಿಎಫ್ ಮತ್ತು ಇಎಸ್‌ಐ ಸೌಲಭ್ಯದ ಕಂತುಗಳನ್ನು ಜಮಾ ಮಾಡಿರುವರೋ ಇಲ್ಲವೋ, ಎಷ್ಟು ಜಮಾ ಮಾಡಿದ್ದಾರೆ ಎನ್ನುವ ಬಗ್ಗೆ ಯಾವುದೇ ಮಾಹಿತಿಯನ್ನು ಗುತ್ತಿಗೆದಾರರು ನೀಡುವುಲ್ಲ. ಕೂಡಲೇ ಅವರು ಸಂಪೂರ್ಣ ಮಾಹಿತಿಯನ್ನು ಒದಗಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ವೇತನವಿಲ್ಲದೆ ದಿನಗೂಲಿ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಕೂಡಲೇ ಗುತ್ತಿಗೆದಾರರು ವೇತನ ನೀಡಬೇಕು. ತಪ್ಪಿದಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು’ ಎಂದು ಎಚ್ಚರಿಸಿದರು.

‘ನೌಕರರ ಖಾತೆಗೆ ಬಾಕಿ ವೇತನ ಪಾವತಿ ಮಾಡದಿದ್ದರೆ ಮುಷ್ಕರ ಮಾಡಲಾಗುವುದು. ಮುಷ್ಕರದಿಂದ ಸಾರ್ವಜನಿಕರಿಗೆ ಆಗುವ ತೊಂದರೆ ಮತ್ತು ಅನನುಕೂಲತೆಗಳಿಗೆ ಗುತ್ತಿಗೆದಾರರೇ ಹೊಣೆಗಾರರಾಗುತ್ತಾರೆ’ ಎಂದು ಸಂಘದ ಅಧ್ಯಕ್ಷ ಜಿ.ಕೆ.ಪಂಚಾಕ್ಷರಿ ಹೇಳಿದರು.

ಆಸ್ಪತ್ರೆಯ ಮುಖ್ಯ ಆಡಳಿತ ವೈದ್ಯಾಧಿಕಾರಿ ಎಲ್.ಹನುಮಾನಾಯ್ಕ ಅವರು ಧರಣಿ ಸ್ಥಳಕ್ಕೆ ಭೇಟಿ ನೀಡಿ, ಗುತ್ತಿಗೆದಾರರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ‘ಕೂಡಲೇ ಸಿಬ್ಬಂದಿ ಬೇಡಿಕೆಯನ್ನು ಈಡೇರಿಸಬೇಕು’ ಎಂದು ಸೂಚಿಸಿದರು.

ಗುತ್ತಿಗೆ ಆಧಾರಿತ ದಿನಗೂಲಿ ಸಿಬ್ಬಂದಿ ಎಂ.ಲಿಂಗರಾಜ್, ಎಂ.ದುರುಗೇಶ್, ಎನ್.ಮಂಜು, ಹೊಳೆಸಿರಿಗೆರೆ ಮಂಜು, ಎಂ.ಆರ್.ಚೇತನ್ ಕುಮಾರ್, ಕೋಟೇಶ್, ರಜನಿಕಾಂತ್, ಎಚ್.ಟಿ.ಕುಮಾರ್, ವೀರೇಂದ್ರ ಪಾಟೀಲ್, ಚಂದ್ರಶೇಖರ್, ಲಕ್ಷ್ಮಿಬಾಯಿ, ಹೀರಿಬಾಯಿ, ಶಾಂತಾಬಾಯಿ, ಹನುಮೀ ಬಾಯಿ, ವಿಜಯಲಕ್ಷ್ಮಿ, ಜ್ಯೋತಿ, ಮಂಗಳಾ, ಕರಿಬಸಮ್ಮ, ಶಿಲ್ಪಾ, ರತ್ನಮ್ಮ, ಧರ್ಮೀಬಾಯಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.