ADVERTISEMENT

ಪಾರ್ಕಿಂಗ್‌: ದಂಡ ವಿಧಿಸಲು ಸೂಚನೆ

ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2024, 16:10 IST
Last Updated 9 ಡಿಸೆಂಬರ್ 2024, 16:10 IST
ದಾವಣಗೆರೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಮಾತನಾಡಿದರು –ಪ್ರಜಾವಾಣಿ ಚಿತ್ರ
ದಾವಣಗೆರೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಮಾತನಾಡಿದರು –ಪ್ರಜಾವಾಣಿ ಚಿತ್ರ   

ದಾವಣಗೆರೆ: ನಗರ ವ್ಯಾಪ್ತಿಯ ನಿಷೇಧಿತ ಪ್ರದೇಶದಲ್ಲಿ ನಿಲುಗಡೆ ಮಾಡುವ ವಾಹನಗಳಿಗೆ ಮುಲಾಜಿಲ್ಲದೇ ದಂಡ ವಿಧಿಸಿ. ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳನ್ನು ಜಪ್ತಿ ಮಾಡಿ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಪೊಲೀಸರಿಗೆ ಸೂಚನೆ ನೀಡಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ನಗರ ವ್ಯಾಪ್ತಿಯಲ್ಲಿ ಸಂಚಾರ ಸಮಸ್ಯೆ ವಿಪರೀತವಾಗಿದೆ. ನಿಷೇಧಿತ ಪ್ರದೇಶದಲ್ಲಿ ವಾಹನ ನಿಲುಗಡೆ ಮಾಡಲಾಗುತ್ತಿದೆ. ಪಾದಚಾರಿ ಮಾರ್ಗದಲ್ಲಿಯೂ ವಾಹನಗಳು ನಿಲುಗಡೆಯಾಗುತ್ತಿದ್ದು, ಜನರಿಗೆ ತೊಂದರೆ ಉಂಟಾಗುತ್ತಿದೆ. ಚಿಗಟೇರಿ ಜಿಲ್ಲಾ ಆಸ್ಪತ್ರೆ ಹಾಗೂ ಹೈಸ್ಕೂಲ್ ಮೈದಾನದ ಹತ್ತಿರ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು’ ಎಂದು ಹೇಳಿದರು.

ADVERTISEMENT

‘ಟ್ರ್ಯಾಕ್ಟರ್, ಲಾರಿ ಸೇರಿ ಭಾರಿ ಸರಕು ಸಾಗಣೆ ವಾಹನಗಳು ಹಗಲು ಹೊತ್ತು ನಗರದಲ್ಲಿ ಸಂಚರಿಸುತ್ತಿವೆ. ಭಾರಿ ವಾಹನಗಳ ಸಂಚಾರಕ್ಕೆ ಸಮಯ ನಿಗದಿಪಡಿಸಬೇಕು. ಜಾನುವಾರು ರಸ್ತೆಯ ಮೇಲೆ ಓಡಾಡುತ್ತಿದ್ದು, ಅಪಘಾತಗಳಿಗೆ ಕಾರಣವಾಗುತ್ತಿವೆ. ಏಕಮುಖ ರಸ್ತೆಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಆಗುತ್ತಿದೆ. ಸಿಗ್ನಲ್‌ಗಳಲ್ಲಿ ಸವಾರರು ಅಡ್ಡಾದಿಡ್ಡಿ ಸಂಚರಿಸುತ್ತಾರೆ’ ಎಂದರು.

‘ಸುಸ್ಥಿತಿ ಪ್ರಮಾಣ ಪತ್ರ ಹೊಂದದ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಅವಧಿ ಮೀರಿದ ವಾಹನಗಳು ರಸ್ತೆಯ ಮೇಲಿವೆ. ಇದರಿಂದ ವಾಹನ ದಟ್ಟಣೆ ಹೆಚ್ಚಾಗುತ್ತಿವೆ. ಸುಸ್ಥಿತಿ ಪ್ರಮಾಣ ಪತ್ರ ನವೀಕರಣಕ್ಕೂ ವಾಹನ ಮಾಲೀಕರು ಆಸಕ್ತಿ ತೋರುತ್ತಿಲ್ಲ. ಇಂತಹ ವಾಹನಗಳನ್ನು ಪತ್ತೆ ಮಾಡಿ ಕನಿಷ್ಠ 100 ವಾಹನಗಳನ್ನಾದರೂ ಜಪ್ತಿ ಮಾಡಿ’ ಎಂದು ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

‘ಕಟ್ಟಡ ನಿರ್ಮಾಣ ಸಾಮಗ್ರಿಗಳಾದ ‘ಎಂ ಸ್ಯಾಂಡ್’, ಮರಳು, ಸಿಮೆಂಟ್, ಇಟ್ಟಿಗೆಗಳನ್ನು ಸಾಗಣೆ ಮಾಡುವ ವಾಹನಗಳು ಹೊದಿಕೆ ಹಾಕಿಕೊಳ್ಳದೇ ಸಾಗುತ್ತಿವೆ. ಈ ವಾಹನಗಳ ಹಿಂಭಾಗ ಚಾಲನೆ ಮಾಡುವ ದ್ವಿಚಕ್ರ ವಾಹನ ಚಾಲಕರ ಕಣ್ಣಿಗೆ ದೂಳು, ಮಣ್ಣಿನ ಕಣಗಳು ಬಿದ್ದು ಅಪಘಾತ ಸಂಭವಿಸುತ್ತಿವೆ. ಇಂತಹ ವಾಹನಗಳ ವಿರುದ್ಧ ಸಂಚಾರ ಪೊಲೀಸರು ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.

‘ಖಾಸಗಿ ಬಸ್, ಭಾರಿ ವಾಹನ, ಶಾಲಾ-ಕಾಲೇಜು ಬಸ್‌ಗಳು ಹಾಗೂ ಆಟೊಗಳು ಕರ್ಕಶ ಶಬ್ದ ಮಾಡುತ್ತಿವೆ. ಭಾರಿ ಶಬ್ದ ಹೊಮ್ಮಿಸುವ ಹಾರನ್‌ಗಳನ್ನು ಅಳವಡಿಸಿಕೊಂಡಿವೆ. ಹಿರಿಯ ನಾಗರಿಕರು ಹಾಗೂ ಆಸ್ಪತ್ರೆ ಪ್ರದೇಶದಲ್ಲಿ ಶಬ್ದ ಮಾಲಿನ್ಯ ಹೆಚ್ಚಾಗುತ್ತಿದೆ. ಇಂತಹ ವಾಹನ ಚಾಲಕರಿಗೆ ದಂಡ ವಿಧಿಸಬೇಕು’ ಎಂದರು.

ಮೇಯರ್‌ ಕೆ.ಚಮನ್ ಸಾಬ್, ಉಪ ಮೇಯರ್‌ ಸೋಗಿ ಶಾಂತಕುಮಾರ್, ಹೆಚ್ಚುವರಿ ಪೊಲೀಸ್ ಅಧಿಕಾರಿಗಳಾದ ವಿಜಯಕುಮಾರ್ ಎಂ.ಸಂತೋಷ್, ಮಂಜುನಾಥ, ‘ಸ್ಮಾರ್ಟ್ ಸಿಟಿ’ ವ್ಯವಸ್ಥಾಪಕಿ ನಿರ್ದೇಶಕ ವೀರೇಶ್, ಆರ್‌ಟಿಒ ಪ್ರಮುತೇಶ್, ಪಾಲಿಕೆ ವಿರೋಧ ಪಕ್ಷದ ನಾಯಕ ಪ್ರಸನ್ನಕುಮಾರ್ ಹಾಜರಿದ್ದರು.

ಮಂಡಿಪೇಟೆಯಲ್ಲಿ ತರಕಾರಿ ಕಸ ಹೆಚ್ಚು. ಈ ಕಸ ತೆರವುಗೊಳಿಸಲು ಕಷ್ಟವಾಗಿದೆ. ರಿಂಗ್‌ ರಸ್ತೆ ಕಾಮಗಾರಿ ಪೂರ್ಣಗೊಂಡರೆ ನಗರದಲ್ಲಿ ಭಾರಿ ವಾಹನ ದಟ್ಟಣೆ ಕಡಿಮೆಯಾಗಲಿದೆ
ರೇಣುಕಾ ಪಾಲಿಕೆ ಆಯುಕ್ತೆ

ನೋಟಿಸ್‌ ರವಾನೆ: ಎಸ್‌ಪಿ ನಿಷೇಧಿತ ಪ್ರದೇಶ ಹಾಗೂ ಅಡ್ಡದಿಡ್ಡಿ ವಾಹನ ನಿಲುಗಡೆ ಮಾಡುವವರನ್ನು ಸಿ.ಸಿ.ಟಿವಿ ಕ್ಯಾಮೆರಾದಲ್ಲಿ ಪತ್ತೆಹಚ್ಚಿ ಮನೆಗೆ ದಂಡದ ನೋಟಿಸ್‌ ರವಾನಿಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಉಮಾ ಪ್ರಶಾಂತ್‌ ತಿಳಿಸಿದರು. ‘ಚಾಮರಾಜಪೇಟೆ ಮಂಡಿಪೇಟೆ ಚೌಕಿಪೇಟೆ ಸುತ್ತ ಪಾರ್ಕಿಂಗ್ ವ್ಯವಸ್ಥೆಯಲ್ಲಿ ತುಂಬಾ ಸಮಸ್ಯೆ ಉಂಟಾಗಿದೆ. ನಿಷೇಧಿತ ಪ್ರದೇಶದಲ್ಲಿ ವಾಹನ ನಿಲುಗಡೆ ಮಾಡಿದವರಿಗೆ ಪೊಲೀಸರು ದಂಡ ವಿಧಿಸುತ್ತಿದ್ದಾರೆ. ದ್ವಿಚಕ್ರ ವಾಹನ ಚಾಲಕರು ಹಾಗೂ ಆಟೊ ಚಾಲಕರಿಂದ ಈ ನಿಯಮ ಹೆಚ್ಚು ಉಲ್ಲಂಘನೆ ಆಗುತ್ತಿದೆ’ ಎಂದು ಹೇಳಿದರು. ‘ಹದಡಿ ರಸ್ತೆಯಲ್ಲಿ ಜಕಾತಿ ರದ್ದುಪಡಿಸಿದ ಬಳಿಕ ಸಣ್ಣ ಅಂಗಡಿಗಳು ತರಕಾರಿ ಹಾಗೂ ಹಣ್ಣಿನ ಅಂಗಡಿಗಳು ಹೆಚ್ಚಾಗಿವೆ. ಪಾದಚಾರಿಗಳು ಓಡಾಡಲು ಕಿರಿಕಿರಿ ಉಂಟಾಗುತ್ತಿದೆ. ಆಟೊಗಳಲ್ಲಿ ನಿಗದಿಗಿಂತ ಹೆಚ್ಚು ಜನರಿಗೆ ಸೇವೆ ನೀಡಲಾಗುತ್ತಿದೆ. ಇಂತಹ ಆಟೊಗಳನ್ನು ಪತ್ತೆ ಮಾಡಿ ದಂಡ ವಿಧಿಸಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.