ದಾವಣಗೆರೆ: ಇಲ್ಲಿನ ಪಿ.ಬಿ. ರಸ್ತೆಯಲ್ಲಿ ಸಂಚಾರ ನಿಯಮ ಉಲ್ಲಂಘಿಸಿದವರಿಂದ ಹಣ ವಸೂಲಿ ಮಾಡಿ ರಸೀದಿ ನೀಡದೆ ಜೇಬಿಗಿಳಿಸಿದ ವಿಡಿಯೊ ಹರಿದಾಡಿದ್ದು, ಅದರ ಆಧಾರದಲ್ಲಿ ಸಂಚಾರ ಪೊಲೀಸ್ ಠಾಣೆಯ ಎಎಸ್ಐ ಜಯಣ್ಣ ಮತ್ತು ಹೆಡ್ಕಾನ್ಸ್ಟೆಬಲ್ ರವಿ ಎಂಬಿಬ್ಬರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಕರ್ತವ್ಯದಿಂದ ಅಮಾನತು ಮಾಡಿದ್ದಾರೆ.
ಪಿ.ಬಿ. ರಸ್ತೆಯ ಡಿಆರ್ಆರ್ ಹೈಸ್ಕೂಲ್ ಬಳಿ ಸೆ.24ರಂದು ವಾಹನ ತಪಾಸಣೆ ಮಾಡುವ ವೇಳೆ ಹೆಲ್ಮೆಟ್ ಧರಿಸದೇ ಬಂದ ಬೈಕನ್ನು ಹೆಡ್ಕಾನ್ಸ್ಟೆಬಲ್ ನಿಲ್ಲಿಸಿದ್ದರು. ಆತ ದಂಡ ಕಟ್ಟಲು ದುಡ್ಡಿಲ್ಲ ಎಂದಾಗ ‘ತೆಗಿ ಪರ್ಸ್ ಎಷ್ಟಿದೆ ಎಂದು ಕೇಳಿ ₹ 600 ತೆಗೆದುಕೊಳ್ಳುತ್ತಾರೆ. ಅದಕ್ಕೆ ಯಾವುದೇ ರಸೀದಿ ನೀಡದೇ ಬೈಕ್ನವರನ್ನು ಬಿಡುತ್ತಾರೆ. ಅಲ್ಲೇ ಸಂಚಾರ ಪೊಲೀಸ್ ಠಾಣೆಯ ವಾಹನ ನಿಂತಿರುತ್ತದೆ. ಇದಿಷ್ಟು ಇರುವ ವಿಡಿಯೊ ವೈರಲ್ ಆಗಿತ್ತು.
ಈ ವಿಡಿಯೊ ಆಧಾರದಲ್ಲಿ ಇಬ್ಬರನ್ನು ಅಮಾನತು ಮಾಡಲಾಗಿದೆ. ಮುಂದಿನ ವಿಚಾರಣೆ ನಡೆಯಲಿದೆ ಎಂದು ಎಸ್ಪಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.