ADVERTISEMENT

ಸುಸಂಸ್ಕೃತ ಸಮಾಜದಿಂದ ನೆಮ್ಮದಿಯ ಜೀವನ: ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಶ್ರೀ

ದೈವಜ್ಞ ಸೊಸೈಟಿಯ ರಜತಮಹೋತ್ಸವದ ಕಟ್ಟಡ ಉದ್ಘಾಟಿಸಿದ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಶ್ರೀ

​ಪ್ರಜಾವಾಣಿ ವಾರ್ತೆ
Published 27 ಜೂನ್ 2022, 5:36 IST
Last Updated 27 ಜೂನ್ 2022, 5:36 IST
ದಾವಣಗೆರೆಯ ದೈವಜ್ಞ ಕ್ರೆಡಿಟ್‌ ಕೋ ಆಪರೇಟಿವ್ ಸೊಸೈಟಿಯ ರಜತಮಹೋತ್ಸವದ ಕಟ್ಟಡ ಉದ್ಘಾಟನೆ, ದೈವಜ್ಞ ಕೈಪಿಡಿಯನ್ನು ಬಿಡುಗಡೆ ಕಾರ್ಯಕ್ರಮವನ್ನು ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಸ್ವಾಮೀಜಿ ಉದ್ಘಾಟಿಸಿದರು
ದಾವಣಗೆರೆಯ ದೈವಜ್ಞ ಕ್ರೆಡಿಟ್‌ ಕೋ ಆಪರೇಟಿವ್ ಸೊಸೈಟಿಯ ರಜತಮಹೋತ್ಸವದ ಕಟ್ಟಡ ಉದ್ಘಾಟನೆ, ದೈವಜ್ಞ ಕೈಪಿಡಿಯನ್ನು ಬಿಡುಗಡೆ ಕಾರ್ಯಕ್ರಮವನ್ನು ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಸ್ವಾಮೀಜಿ ಉದ್ಘಾಟಿಸಿದರು   

ದಾವಣಗೆರೆ: ಸಮಾಜ ಶ್ರೀಮಂತವಾಗಬೇಕು ನಿಜ. ಆದರೆ ಶ್ರೀಮಂತಿಕೆಗಿಂತ ಸುಸಂಸ್ಕೃತ ಸಮಾಜ ನಿರ್ಮಾಣವಾಗುವುದು ಮುಖ್ಯ ಎಂದು ಸಚ್ಚಿದಾನಾಂದ ಜ್ಞಾನೇಶ್ವರ ಭಾರತಿ ಸ್ವಾಮೀಜಿ ಹೇಳಿದರು.

ದೈವಜ್ಞ ಸಮಾಜ ಸಂಘದ ಅಂಗಸಂಸ್ಥೆಯಾದ ದೈವಜ್ಞ ಕ್ರೆಡಿಟ್‌ ಕೋ ಆಪರೇಟಿವ್ ಸೊಸೈಟಿಯ ರಜತಮಹೋತ್ಸವದ ಕಟ್ಟಡ ಉದ್ಘಾಟಿಸಿ, ದೈವಜ್ಞ ಕೈಪಿಡಿಯನ್ನು ಬಿಡುಗಡೆಗೊಳಿಸಿ ಭಾನುವಾರ ನರಹರಿ ಶೇಟ್‌ ಸಭಾಭವನದಲ್ಲಿ ಅವರು ಮಾತನಾಡಿದರು.

ಸುಸಂಸ್ಕೃತ ಸಮಾಜ ಇದ್ದಾಗ ಸುಖ, ಶಾಂತಿ, ನೆಮ್ಮದಿ ಇರಲು ಸಾಧ್ಯ ಎಂದು ವಿಶ್ಲೇಷಿಸಿದರು.

ADVERTISEMENT

‘ನಾವು ಬೆಳೆಯುತ್ತಿರುವುದಕ್ಕೆ ಸಾಕ್ಷಿಯಾಗಿ ಬೆಳ್ಳಿಹಬ್ಬ ಬಂದಿದೆ. ಮುಂದೆ ಸುವರ್ಣ ಮಹೋತ್ಸವ, ಅಮೃತ ಮಹೋತ್ಸವ, ಶತಮಾನೋತ್ಸವ ಕಾಣಲಿ. ಈಗ ಸೊಸೈಟಿ ಆಗಿರುವುದು ಸುವರ್ಣ ಮಹೋತ್ಸವದ ಹೊತ್ತಿಗೆ ಬ್ಯಾಂಕ್ ಅಗಿ ಪರಿವರ್ತನೆಯಾಗಲಿ’ ಎಂದು ಹಾರೈಸಿದರು.

ದೈವಜ್ಜ ಕ್ರೆಡಿಟ್ ಕೊ ಆಪರೇಟಿವ್ ಸೊಸೈಟಿ ಬೆಳ್ಳಿ ಹಬ್ಬ ಆಚರಿಸಲು ಅನೇಕರು ಪ್ರೇರಕರಾಗಿ ಕೆಲಸ ಮಾಡಿದ್ದಾರೆ. ಅಂಗವಿಕಲರಿಗೆ ಪರಿಕರಗಳನ್ನು ನೀಡಿದ್ದಾರೆ. ಸಮಾಜದ ಮಕ್ಕಳಿಗೆ ಶಿಕ್ಷಣಕ್ಕಾಗಿ ಪ್ರೋತ್ಸಾಹವನ್ನು ಕೊಟ್ಟಿದ್ದಾರೆ. ಕೊರೊನಾ ಕಾಲದಲ್ಲಿ ಫುಡ್ ಕಿಟ್‌ಗಳನ್ನು ವಿತರಿಸಲಾಗಿದೆ. ಇದು ಸಮಾಜವೊಂದು, ಸಂಸ್ಥೆಯೊಂದು ಮಾಡಬಹುದಾದ ಮಾದರಿ ಕೆಲಸ ಎಂದು ಶ್ಲಾಘಿಸಿದರು.

ಎಲ್ಲರ ಪ್ರಯತ್ನದಿಂದ ಸೊಸೈಟಿ ಬಹಳಷ್ಟು ಬೆಳೆದಿದೆ. ಇನ್ನೂ ಬೆಳೆಯಬೇಕಿದೆ. ಮುಂದೆ ಸೊಸೈಟಿ ಹೋಗಿ ಬ್ಯಾಂಕ್‌ ಆಗಬೇಕಿದೆ. ದೈವಜ್ಞ ಸಮಾಜದಲ್ಲಿ ಒಬ್ಬರೂ ಬಡವರು ಇಲ್ಲದಂತೆ ಎಲ್ಲರ ಅಭಿವೃದ್ಧಿ ಮಾಡಬೇಕಿದೆ ಎಂದು ಸೊಸೈಟಿಯ ಸಂಸ್ಥಾಪಕ ಶಂಕರ್‌ ಎನ್‌. ವಿಠ್ಠಲಕರ್‌ ತಿಳಿಸಿದರು.

ಬುದ್ಧಿವಂತ ಮತ್ತು ಪ್ರಜ್ಞಾವಂತ ಸಮಾಜವಾಗಿರುವ ದೈವಜ್ಞರು ಎಲ್ಲರಂತೆ ತಮ್ಮ ಸಮಾಜಕ್ಕೂ ಹಣಕಾಸು ಸಂಸ್ಥೆಯನ್ನು ಕಟ್ಟಿಕೊಂಡು ಸಮಾಜದ ಅಭಿವೃದ್ಧಿಗೆ ದುಡಿಯುತ್ತಿರುವುದು ಉತ್ತಮ ವಿಚಾರ ಎಂದು ಪಾಲಿಕೆ ಸದಸ್ಯ ಸೋಗಿ ಶಾಂತಕುಮಾರ್‌ಹೇಳಿದರು.

ಅಖಿಲ ಕರ್ನಾಟಕ ದೈವಜ್ಞ ಬ್ರಾಹ್ಮಣ ಸಮಾಜದ ಅಧ್ಯಕ್ಷ ರಾಮು ರಾಯ್ಕರ, ಮಾಜಿ ಶಾಸಕ ಗಂಗಾಧರ ಭಟ್‌, ದೈವಜ್ಞ ಸಮಾಜದ ಜಿಲ್ಲಾಧ್ಯಕ್ಷ ಸತ್ಯನಾರಾಯಣ ಆರ್‌. ರಾಯ್ಕರ್‌, ಕಾರ್ಯದರ್ಶಿ ವಿಠಲ್‌ ಭಟ್‌ ಅವಾಜಿ ಮಾತನಾಡಿದರು. ವ್ಯವಸ್ಥಾಪಕರಾದ ಸುಮನಾ ಆರ್‌. ಪ್ರಾಸ್ತಾವಿಕವಾಗಿ ಮಾತನಾಡಿದರು.

ಸೊಸೈಟಿಯ ಅಧ್ಯಕ್ಷ ಪ್ರಶಾಂತ ವಿ. ವೆರ್ಣೇಕರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ರಾಜೀವ ವಿ. ವೆರ್ಣೇಕರ, ನಿರ್ದೇಶಕರಾದ ಮಂಜುನಾಥ್‌ ವಿ. ಕುಡತರ್‌ಕರ್‌, ಸತೀಶ್‌ ಎಸ್‌. ಸಾನು, ಚಂದ್ರಹಾಸ ಕುರ್ಡೇಕರ್‌, ವಾಸುದೇವ ರಾಯ್ಕರ್‌, ದೀಪಕ್‌ ಎನ್‌.ಶೇಟ್‌, ರಾಘವೇಂದ್ರ ಎನ್‌. ದಿವಾಕರ್‌, ರಾಘವೇಂದ್ರ ಎಸ್‌. ಕುರ್ಡೇಕರ್‌, ವಿಜಯ ಎಸ್‌. ವಿಠ್ಠಲ್‌ಕರ್‌, ಶ್ವೇತಾ ಜಿ. ಶೇಟ್‌, ಶಿವಮೊಗ್ಗದ ವಿನಯಾ ರಾಯ್ಕರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.