ದಾವಣಗೆರೆ: ‘ಸಚಿವ ಸ್ಥಾನದ ಆಕಾಂಕ್ಷಿಗಳಾಗಿರುವ ಉಮೇಶ ಕತ್ತಿ ಹಾಗೂ ಮುರುಗೇಶ ನಿರಾಣಿ ಅವರು ನನ್ನ ಸ್ನೇಹಿತರು. ಬೆಂಗಳೂರಿಗೆ ಹೋದಾಗ ಅವರನ್ನು ಭೇಟಿ ಮಾಡಿ ಪ್ರತ್ಯೇಕ ಸಭೆ ನಡೆಸದಂತೆ ತಿಳಿ ಹೇಳುತ್ತೇನೆ’ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ‘ಮುರುಗೇಶ ನಿರಾಣಿ ಪರ ನೀವು ನಿಲ್ಲುವಿರಾ’ ಎಂಬ ಪತ್ರಕರ್ತರ ಪ್ರಶ್ನೆಗೆ, ‘ನಾನು ಯಾರ ಪರವೂ ಇಲ್ಲ; ವಿರೋಧವೂ ಇಲ್ಲ. ರಾಜಕೀಯ ಬೆಳವಣಿಗೆಯಲ್ಲಿ ನಿರಾಣಿ ಪಾತ್ರವಿಲ್ಲ. ಉಮೇಶ ಕತ್ತಿ ಅವರು ಹಿರಿಯ ಶಾಸಕರಾಗಿದ್ದು, ಮಂತ್ರಿ ಆಗಬೇಕು ಎಂಬ ಆಸೆ ಇದೆ. ಆದರೆ, ಪಕ್ಷದಲ್ಲಿ ಯಾರಿಗೂ ಯಡಿಯೂರಪ್ಪ ಬಗ್ಗೆ ಅಸಮಾಧಾನ ಇಲ್ಲ’ ಎಂದು ಉತ್ತರಿಸಿದರು.
‘ಕೊರೊನಾ ಸಂದರ್ಭದಲ್ಲೂ ತಮ್ಮ ವಯಸ್ಸಿಗೆ ಮೀರಿ ಕಾರ್ಯನಿರ್ವಹಿಸುತ್ತಿರುವ ಯಡಿಯೂರಪ್ಪ ಪಕ್ಷದ ಪ್ರಶ್ನಾತೀತ ನಾಯಕ. ಮುಂದಿನ ಮೂರು ವರ್ಷವೂ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ಕೊರೊನಾ ತಣ್ಣಗಾದ ಬಳಿಕ ಸಂಪುಟ ವಿಸ್ತರಣೆ ವೇಳೆ ಅವಕಾಶ ಮಾಡಿಕೊಡಬಹುದು’ ಎಂದು ಅಭಿಪ್ರಾಯಪಟ್ಟರು.
‘ಶಾಸಕ ಬಸನಗೌಡ ಯತ್ನಾಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವುದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳೀನ್ಕುಮಾರ್ ಕಟೀಲು ಅವರಿಗೆ ಬಿಟ್ಟ ವಿಚಾರ’ ಎಂದು ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.