ADVERTISEMENT

ಯುಗಾದಿ ಹಬ್ಬಕ್ಕೆ ಮಾವು, ಬೇವು ಖರೀದಿ ಜೋರು

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2019, 14:04 IST
Last Updated 5 ಏಪ್ರಿಲ್ 2019, 14:04 IST
ದಾವಣಗೆರೆಯ ಮಾರುಕಟ್ಟೆಗೆ ಯುಗಾದಿ ಹಬ್ಬಕ್ಕೆ ಅಗತ್ಯ ವಸ್ತುಗಳನ್ನು ಖರೀದಿಸಲು ಶುಕ್ರವಾರ ಅಪಾರ ಸಂಖ್ಯೆಯಲ್ಲಿ ಜನ ಬಂದಿದ್ದರು.
ದಾವಣಗೆರೆಯ ಮಾರುಕಟ್ಟೆಗೆ ಯುಗಾದಿ ಹಬ್ಬಕ್ಕೆ ಅಗತ್ಯ ವಸ್ತುಗಳನ್ನು ಖರೀದಿಸಲು ಶುಕ್ರವಾರ ಅಪಾರ ಸಂಖ್ಯೆಯಲ್ಲಿ ಜನ ಬಂದಿದ್ದರು.   

ದಾವಣಗೆರೆ: ‘ವಿಳಂಬಿ’ಯಿಂದ ‘ವಿಕಾರಿ’ ಸಂವತ್ಸರಕ್ಕೆ ಶನಿವಾರ ಕಾಲಿಡುತ್ತಿದ್ದು, ನಗರದಲ್ಲಿ ಯುಗಾದಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಜನ ಮಾರುಕಟ್ಟೆಗಳಲ್ಲಿ ಬೇವು–ಬೆಲ್ಲ, ಮಾವಿನ ಎಲೆಗಳನ್ನು ಖರೀದಿಸುತ್ತಿರುವುದು ಕಂಡುಬಂತು.

ಹಿಂದೂ ಧರ್ಮದಲ್ಲಿ ಯುಗಾದಿ ಹಬ್ಬವನ್ನು ಹೊಸ ವರ್ಷವನ್ನಾಗಿ ಆಚರಿಸಲಾಗುತ್ತದೆ. ವರ್ಷದ ಮೊದಲನೇ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಜನ ಅಣಿಯಾದರು.

ನಗರದ ಮಾರುಕಟ್ಟೆಗಳಲ್ಲಿ ಸಂಜೆ ಜನಸಂದಣಿ ಕಂಡುಬಂತು. ರೈತರು ಮಾವು–ಬೇವಿನ ಎಲೆಗಳನ್ನು ತಂದು ರಸ್ತೆ ಪಕ್ಕದಲ್ಲಿಟ್ಟು ಮಾರಾಟ ಮಾಡುತ್ತಿದ್ದರು. ಇನ್ನೊಂದೆಡೆ ಮಕ್ಕಳು ಸಹ ಅತ್ತಿಂದಿತ್ತ ಅಲೆದಾಡುತ್ತ ಉಡುದಾರಗಳನ್ನು ಮಾರಾಟ ಮಾಡಿದರು. ಹೊಸ ವರ್ಷಕ್ಕೆ ಹೊಸ ಉಡುದಾರವನ್ನು ಹಾಕಿಕೊಳ್ಳುವುದು ವಾಡಿಕೆ. ಹೀಗಾಗಿ ಉಡುದಾರ ಖರೀದಿಯೂ ಭರದಿಂದ ಸಾಗಿತ್ತು. ಒಂದು ಉಡುದಾರವನ್ನು ಐದು ರೂಪಾಯಿಗೆ ಮಾರಾಟ ಮಾಡಲಾಗುತ್ತಿತ್ತು.

ADVERTISEMENT

ಮಾವಿನ ಸೊಪ್ಪು ಹಾಗೂ ಕಹಿ ಬೇವಿನ ಸೊಪ್ಪಿನ ಕಟ್ಟನ್ನು ₹ 10ಗೆ ಕೊಡಲಾಗುತ್ತಿತ್ತು. ಯುಗಾದಿ ಹಬ್ಬದ ಪೂಜೆಗಾಗಿ ಬಿಲ್‌ಪತ್ರೆಯ ಒಂದು ಮಾರು ಮಾಲೆಗೆ ₹ 20 ಹಾಗೂ ದವನ್‌ದ ಸೊಪ್ಪನ್ನು ₹ 10ಕ್ಕೆ ಮಾರಾಟ ಮಾಡಲಾಗುತ್ತಿತ್ತು.

ಹಬ್ಬದ ಪೂಜೆಗೆ ಬೇಕಾಗಿದ್ದ ಒಂದು ಮಾರು ಸೇವಂತಿಗೆ ಹೂವನ್ನು ₹ 70ರಿಂದ ₹ 80 ಹಾಗೂ ಒಂದು ಮಾರು ಬಟನ್‌ ಸೇವಂತಿಗೆ ಹೂವನ್ನು ₹ 80ಕ್ಕೆ ಜನ ಖರೀದಿಸುತ್ತಿದ್ದರು. 250 ಗ್ರಾಂ ಗುಲಾಬಿ ಹೂವಿಗೆ ವ್ಯಾಪಾರಿಗಳು ₹ 80 ಹೇಳುತ್ತಿದ್ದರು. ಹೂವು–ಹಣ್ಣುಗಳ ಖರೀದಿಯ ಭರಾಟೆಯೂ ಜೋರಾಗಿತ್ತು.

ಹಬ್ಬಕ್ಕೆ ಅಗತ್ಯ ಹೊಸ ಬಟ್ಟೆಗಳನ್ನೂ ಖರೀದಿಸಲು ಜನ ಮುಂದಾಗಿದ್ದರಿಂದ ಜವಳಿ ಅಂಗಡಿಗಳಲ್ಲೂ ಜನದಟ್ಟಣೆ ಹೆಚ್ಚಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.