ದಾವಣಗೆರೆ: ಹರಿಹರ ತಾಲ್ಲೂಕಿನ ಮಲೇಬೆನ್ನೂರಿನ ಶ್ರೀನಿವಾಸ್ ಎಂ.ಪಿ. ಅವರು ಯುಪಿಎಸ್ಸಿ ಪರೀಕ್ಷೆಯಲ್ಲಿ 235ನೇ ರ್ಯಾಂಕ್ ಪಡೆದಿದ್ದಾರೆ.
ತಂದೆ ಪ್ರಸನ್ನ ಅವರು ಹುಬ್ಬಳ್ಳಿಯ ನೈರುತ್ಯ ರೈಲ್ವೆಯಲ್ಲಿ ಎಕ್ಸ್ಪ್ರೆಸ್ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದು, ಅವರ ಜೊತೆಗೆ ವಾಸವಾಗಿದ್ದಾರೆ. 1992ರ ಜುಲೈ 3ರಂದು ಜನಿಸಿದ ಶ್ರೀನಿವಾಸ್, ಬೆಂಗಳೂರಿನ ಆರ್.ವಿ. ಕಾಲೇಜಿನಲ್ಲಿ ಎಂಜಿನಿಯರಿಂಗ್ ಪಡೆದು, ವಾಷಿಂಗ್ಟನ್ ಯೂನಿವರ್ಸಿಟಿಯಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಬಳಿಕ ಕೆಲ ವರ್ಷಗಳ ಕಾಲ ಅಲ್ಲಿನ ರಸೆಲ್ ಇನ್ವೆಸ್ಟ್ಮೆಂಟ್ನಲ್ಲಿ ಕರ್ತವ್ಯ ನಿರ್ವಹಿಸಿದರು.
ಎಂಜಿನಿಯರಿಂಗ್ ವಿದ್ಯಾರ್ಥಿಯಾದರೂ ಕನ್ನಡ ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ್ದ ಶ್ರೀನಿವಾಸ್ ಅವರು, ಕನ್ನಡ ಸಾಹಿತ್ಯವನ್ನೇ ಮುಖ್ಯ ವಿಷಯವನ್ನು ಆಯ್ಕೆ ಮಾಡಿಕೊಂಡಿದ್ದರು. ತಂದೆ–ತಾಯಿ ಮುಂಚಿನಿಂದಲೂ ಸಾಹಿತ್ಯ ಓದಿಸುತ್ತಿದ್ದರು. ನಾಲ್ಕೂವರೆ ವರ್ಷಗಳ ಕಾಲ ಸತತ ಪರಿಶ್ರಮದೊಂದಿಗೆ 5ನೇ ಪ್ರಯತ್ನದಲ್ಲಿ ಯಶಸ್ಸು ಸಾಧಿಸಿದ್ದಾರೆ. 4ನೇ ಪ್ರಯತ್ನದಲ್ಲಿ ಸಂದರ್ಶನದವರೆಗೆ ಹೋಗಿದ್ದರು.
‘ಪ್ರಜಾವಾಣಿ’ ಅಚ್ಚುಮೆಚ್ಚು: ‘ನಾನು ಮೊದಲಿನಿಂದಲೂ ಪ್ರಜಾವಾಣಿ ಹಾಗೂ ಡೆಕ್ಕನ್ ಹೆರಾಲ್ಡ್ ಪತ್ರಿಕೆ ಓದುತ್ತಿದ್ದೇನೆ. ಸಾಹಿತ್ಯ ಪುರವಣಿಯಲ್ಲಿ ಅನೇಕ ವಿಷಯಗಳು ಪರೀಕ್ಷೆಯಲ್ಲಿ ಅನುಕೂಲಕ್ಕೆ ಬಂದವು. ಸಂಪಾದಕೀಯ ಪುಟದಲ್ಲಿನ ಎಲ್ಲಾ ವಿಷಯಗಳನ್ನು ಅಭ್ಯಸಿಸಿದ್ದೇನೆ’ ಎಂದು ಶ್ರೀನಿವಾಸ್ ಮೆಚ್ಚುಗೆ ವ್ಯಕ್ತಪಡಿಸಿದರು.
‘ನನ್ನ ಸಾಧನೆಗೆ ತಂದೆ–ತಾಯಿಯ ಪರಿಶ್ರಮವೇ ಕಾರಣ. ಜೀವನದಲ್ಲಿ ಏನಾದರೂ ಸಾಧನೆ ಮಾಡುವಂತೆ ಅವರು ನನ್ನನ್ನು ಪ್ರೇರೇಪಿಸಿದರು. ಮುಖ್ಯವಾಗಿ ನಮ್ಮ ತಾತ ಶಿಕ್ಷಕರಾಗಿದ್ದು, ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಅವರಿಂದ ತರಬೇತಿ ಪಡೆದೆ’ ಎಂದು ಹೇಳಿದರು.
‘ತಂದೆ ರೈಲ್ವೆ ಇಲಾಖೆಯಲ್ಲಿ, ಒಬ್ಬ ದೊಡ್ಡಪ್ಪ ಪೊಲೀಸ್ ಅಧಿಕಾರಿ, ಮತ್ತಿಬ್ಬರು ಸರ್ಕಾರಿ ಸೇವೆಯಲ್ಲಿದ್ದರು. ಅದೇ ಧ್ಯೇಯ ಇಟ್ಟುಕೊಂಡು ಓದಿದೆ. ಸಿಯಾಟಲ್ನಲ್ಲಿ ಓದಿದರೂ ತಾಯ್ನಾಡು ನನ್ನನ್ನು ಸೆಳೆಯಿತು. ಇಲ್ಲೇ ಇದ್ದು ಸಾಧನೆ ಮಾಡಬೇಕು ಎಂದು ಕಷ್ಟಪಟ್ಟು ಓದಿದೆ’ ಎಂದರು.
ಓದಿನ ಜೊತೆಗೆ ಆಟ: ‘ಓದಿನ ಜೊತೆಗೆ ಆಟದಲ್ಲೂ ತೊಡಗುತ್ತಿದ್ದೆ. ಓಟದಲ್ಲೂ ಆಸಕ್ತಿ ಇತ್ತು. ಸತತವಾಗಿ ಓದಿನಲ್ಲಿ ತೊಡಗುತ್ತಿದ್ದೆ. ಆಟದ ಜೊತೆಗೆ ಬೇರೆ ಕೆಲಸಗಳನ್ನೂ ಮಾಡುತ್ತಿದ್ದೆ. ಓದಿನ ಜೊತೆಗೆ ಉತ್ತಮ ವ್ಯಕ್ತಿತ್ವದ ಗುರಿಯನ್ನು ಇಟ್ಟುಕೊಂಡಿದ್ದೆ’ ಎಂದು ಹೇಳುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.