ನ್ಯಾಮತಿ: ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದ್ದು ಬೆಳೆಗಳ ಬೆಳೆವಣಿಗೆಗೆ ಯೂರಿಯಾ ರಸಗೊಬ್ಬರ ಅಗತ್ಯವಾಗಿದ್ದು, ಗೊಬ್ಬರದ ಅಭಾವದಿಂದ ಪರದಾಡುವಂತಾಗಿದೆ.
ತಾಲ್ಲೂಕಿನ ನೂರಾರು ಎಕರೆಯಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದು, ಕೆಲವರು ಬೆಳೆಗಳಿಗೆ ಒಂದು ಬಾರಿ ಗೊಬ್ಬರ ಹಾಕಿದ್ದರೆ, ಕೆಲವರು ಒಂದು ಬಾರಿಯೂ ರಸಗೊಬ್ಬರ ಹಾಕಿಲ್ಲ. ಹೀಗಿರುವಾಗ ರಸಗೊಬ್ಬರ ಮಾರುಕಟ್ಟೆಯಲ್ಲಿ ಸಿಗದೆ ಇರುವುದು ತುಂಬಾ ತೊಂದರೆಯಾಗಿದೆ.
‘ಕೃಷಿ ಅಧಿಕಾರಿಗಳು ಮುಂಜಾಗ್ರತೆವಿಸಿ ಅಗತ್ಯ ದಾಸ್ತಾನು ಇರಿಸಿಕೊಳ್ಳದೇ ತೊಂದರೆ ಮಾಡಿದ್ದಾರೆ’ ಎಂದು ರೈತರು ದೂರಿದ್ದಾರೆ.
ಪಟ್ಟಣದ ರಸಗೊಬ್ಬರ ವರ್ತಕ ನುಚ್ಚಿನ ಜಂಬಪ್ಪ ಅಂಡ್ ಸನ್ಸ್ ಅಂಗಡಿಯ ಮುಂದೆ ರೈತರು ರಸಗೊಬ್ಬರಕ್ಕಾಗಿ ಸಾಲು ಹಚ್ಚಿ ನಿಂತಿದ್ದರು. ಅಂಗಡಿಯಲ್ಲಿರುವ ದಾಸ್ತಾನು ಮುಗಿಯುವರೆಗೆ ಪ್ರತಿಯೊಬ್ಬ ರೈತರಿಗೆ ಎರಡು ಚೀಲ ಕೊಡಲಾಯಿತು. ಇನ್ನು ಕೆಲವು ರೈತರು ರಸಗೊಬ್ಬರ ಸಿಗದೆ ಅಂಗಡಿಯ ಮುಂದೆ ಸಾಲಾಗಿ ನಿಂತಿರುವುದು ಕಂಡು ಬಂದಿತು.
ಕಳೆದ ಬಾರಿಯ ದಾಸ್ತಾನು ಮತ್ತು ಈ ಬಾರಿಯ ಸರಬರಾಜು ಒಟ್ಟೂಗೂಡಿಸಿ ರೈತರಿಗೆ ಗೊಬ್ಬರ ವಿತರಿಸಲಾಗಿದೆ. ಸರ್ಕಾರದಿಂದ ಯೂರಿಯಾ ಗೊಬ್ಬರ ಸರಬರಾಜು ಆಗುವವರೆಗೆ ನಾವೇನೂ ಮಾಡಲಾಗುವುದಿಲ್ಲ ಎಂದು ವರ್ತಕ ವಾಗೀಶ ನುಚ್ಚಿನ ಹೇಳಿದರು.
ಮಳೆ ಜಾಸ್ತಿಯಾಗಿರುವುದರಿಂದ ಯೂರಿಯಾ ಗೊಬ್ಬರದ ಅವಶ್ಯಕತೆ ಬಹಳ ಇದೆ. ರೈತರಿಗೆ ಸಾಕಾಗುವಷ್ಟು ಯೂರಿಯಾ ಗೊಬ್ಬರ ಸಿಗುವಂತೆ ಶಾಸಕರು ಮತ್ತು ಕೃಷಿ ಅಧಿಕಾರಿಗಳು ಗಮನಹರಿಸಬೇಕು ಎಂದು ರೈತಸಂಘ ಮತ್ತು ಹಸಿರುಸೇನೆ ತಾಲ್ಲೂಕು ಘಟಕದ ಕಾರ್ಯಾಧ್ಯಕ್ಷ ಹೊಸಮನೆ ಮಲ್ಲಿಕಾರ್ಜುನ ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.