ADVERTISEMENT

‘ವಚನ ಸರಳ, ಪಾಲಿಸಲು ಕಷ್ಟ’

ಬಸವ ಬೆಳಗು ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ಎಂ.ಜಿ. ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2020, 3:55 IST
Last Updated 23 ನವೆಂಬರ್ 2020, 3:55 IST
ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ಆಯೋಜಿಸಿದ್ದ ಬಸವ ಬೆಳಗು ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಂ.ಜಿ ಈಶ್ವರಪ್ಪ ಅವರಿಗೆ ಸನ್ಮಾನಿಸಲಾಯಿತು
ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ಆಯೋಜಿಸಿದ್ದ ಬಸವ ಬೆಳಗು ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಂ.ಜಿ ಈಶ್ವರಪ್ಪ ಅವರಿಗೆ ಸನ್ಮಾನಿಸಲಾಯಿತು   

ದಾವಣಗೆರೆ: ಶರಣ, ಶರಣೆಯರ ಸಾಹಿತ್ಯ ಬಹಳ ಸರಳವಾದುದು. ಯಾರೇ ಓದಿದರೂ ಅರ್ಥವಾಗುವಂಥದ್ದು. ಆದರೆ ಅದನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಲು, ಪಾಲಿಸಲು ಹೋದಾಗ ವಚನಗಳು ನಾವು ತಿಳಿದಷ್ಟು ಸರಳವಲ್ಲ ಎಂಬುದು ಗೊತ್ತಾಗುತ್ತದೆ. ಅಂತರಂಗ, ಬಹಿರಂಗ ಶುದ್ಧಿ, ಬದ್ಧತೆ, ಪ್ರಾಮಾಣಿಕತೆ ಇಲ್ಲದೇ ಪಾಲನೆ ಸಾಧ್ಯವಿಲ್ಲ ಎಂದು ಜನಪದ ತಜ್ಞ ಡಾ.ಎಂ.ಜಿ. ಈಶ್ವರಪ್ಪ ಹೇಳಿದರು.

ಜಾಗತಿಕ ಲಿಂಗಾಯುತ ಮಹಾಸಭಾ ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಭಾನುವಾರ ಕುವೆಂಪು ಭವನದಲ್ಲಿ ನಡೆದ ‘ಬಸವ ಬೆಳಗು’ ಕರ್ನಾಟಕ ರಾಜ್ಯೋತ್ಸವ ಮತ್ತು ಚಿನ್ಮಯ ಜ್ಞಾನಿ ಚನ್ನಬಸವಣ್ಣ ಜಯಂತಿ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಕಾವ್ಯ ಕ್ಷೇತ್ರಕ್ಕೆ ಸೀಮಿತವಾಗಿದ್ದ ಸಾಹಿತ್ಯವನ್ನು ಸಾಮಾಜಿಕ ಕ್ಷೇತ್ರಕ್ಕೆ ತಂದವರು ಶರಣರು. ಬಸವಣ್ಣಾದಿ ಶರಣರು ಜಾತಿಭೇದವಿಲ್ಲದ, ಲಿಂಗಭೇದವಿಲ್ಲದ ಸಮ ಸಮಾಜವನ್ನು ಕಟ್ಟಲು ಪ್ರಯತ್ನಿಸಿದರು ಎಂದು ವಿವರಿಸಿದರು.

ADVERTISEMENT

ಚಿನ್ಮಯ ಜ್ಞಾನಿ ಚನ್ನಬಸವಣ್ಣರ ಬಗ್ಗೆ ಎಂ.ಬಿ.ನಾಗರಾಜ್ ಕಾಕನೂರು ಉಪನ್ಯಾಸ ನೀಡಿ, ‘ವಚನಗಳಲ್ಲಿ ಪ್ರಸನ್ನ ಶೈಲಿ, ಬೆಳಗು ಶೈಲಿ ಮತ್ತು ಶಾಸ್ತ್ರಶೈಲಿ ಎಂಬ ಮೂರು ಶೈಲಿಗಳಿವೆ. ಬಸವಣ್ಣನ ವಚನಗಳು ಪ್ರಸನ್ನ ಶೈಲಿಯಾದರೆ ಅಲ್ಲಮಪ್ರಭು ಅವರದ್ದು ಬೆಳಕಿನ ಶೈಲಿ. ಚನ್ನ ಬಸವಣ್ಣರದ್ದು ಶಾಸ್ತ್ರ ಶೈಲಿ. ವಚನಗಳ ಬೆಳಕಿನಲ್ಲಿ ಬಸವಣ್ಣ ತೈಲ ಆದರೆ, ಚನ್ನಬಸವಣ್ಣ ಬತ್ತಿ. ಅಲ್ಲಮ ಪ್ರಭುಗಳು ಜ್ಯೋತಿ’ ಎಂದು ವಿವರಿಸಿದರು.

ಬಸವ ಬಳಗದ ವಿ.ಸಿದ್ದರಾಮಣ್ಣ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಎಚ್‌.ಎಸ್‌. ಮಂಜುನಾಥ ಕುರ್ಕಿ ನುಡಿನಮನ ಸಲ್ಲಿಸಿದರು. ಯಾದವ ಮಹಾಸಭಾ ಅಧ್ಯಕ್ಷ ಬಾಡದ ಆನಂದರಾಜ್‌, ಹುಚ್ಚಪ್ಪ ಅವರೂ
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.