ಹರಿಹರ: ಪಂಚಮಸಾಲಿ ಸಮುದಾಯದವರ ಸಮಾಗಮಕ್ಕೆ ಸಾಕ್ಷಿಯಾದ ಇಲ್ಲಿನ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಆವರಣದಲ್ಲಿ ಮುಕ್ತಾಯಗೊಂಡ ಹರಜಾತ್ರೆಯ ಸ್ವಚ್ಛತಾ ಕಾರ್ಯದಲ್ಲಿ ಪೀಠದ ವಚನಾನಂದ ಶ್ರೀಗಳು ಕೈಜೋಡಿಸಿ ಗಮನ ಸೆಳೆದರು.
ನಾಡಿನ ವಿವಿಧೆಡೆಯಿಂದ ಸಾವಿರಾರು ಭಕ್ತರು ಹರಜಾತ್ರೆಯಲ್ಲಿ ಭಾಗವಹಿಸಿದ್ದರು. ಅವರೆಲ್ಲರಿಗೆ ದಾಸೋಹ, ಕುಡಿಯುವ ನೀರು, ವಸತಿ ಸೌಲಭ್ಯ ಒದಗಿಸಿದ್ದರಿಂದ ಗಣನೀಯ ಪ್ರಮಾಣದ ತ್ಯಾಜ್ಯ ಸೃಷ್ಟಿಯಾಗಿತ್ತು. ಸೋಮವಾರ ಬೆಳಿಗ್ಗೆ ನಗರಸಭೆ ಪೌರ ಕಾರ್ಮಿಕರು ತಮ್ಮ ಸ್ವಚ್ಚತಾ ಪರಿಕರಗಳೊಂದಿಗೆ ಗುರುಪೀಠಕ್ಕೆ ಆಗಮಿಸಿದ್ದರು. ಅವರೊಂದಿಗೆ ವಚನಾನಂದ ಶ್ರೀಗಳು ಹಾಗೂ ಭಕ್ತರೂ ಕಸ ಗುಡಿಸಿದರು.
ವೇದಿಕೆ ಮುಂಭಾಗದ ಪೆಂಡಾಲ್ ಹಾಗೂ ಅದರ ಸುತ್ತಮುತ್ತ ದಾಸೋಹ ನಡೆದ ಸ್ಥಳದಲ್ಲಿ ಹೆಚ್ಚಿನ ತ್ಯಾಜ್ಯ ಸಂಗ್ರಹವಾಗಿತ್ತು. ಪೌರ ಕಾರ್ಮಿಕರು ಮತ್ತು ಭಕ್ತರು ನಾವು ಸ್ವಚ್ಛ ಮಾಡುತ್ತೇವೆ ಬಿಡಿ ಎಂದರೂ ಶ್ರೀಗಳು ಒಂದು ಗಂಟೆ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿ ಪೌರ ಕಾರ್ಮಿಕರು ಹಾಗೂ ಭಕ್ತರಲ್ಲಿ ಕಾಯಕದ ಮಹತ್ವ ಸಾರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.