ADVERTISEMENT

ಹರಿಹರ| ವಾಲ್ಮೀಕಿ ಜಾತ್ರೆಯಲ್ಲಿ ವೈಚಾರಿಕತೆ ಬೆಳೆಸಲು ಆದ್ಯತೆ: ಬಸನಗೌಡ ದದ್ದಲ್

​ಪ್ರಜಾವಾಣಿ ವಾರ್ತೆ
Published 10 ಜನವರಿ 2026, 2:55 IST
Last Updated 10 ಜನವರಿ 2026, 2:55 IST
ಹರಿಹರ ತಾಲ್ಲೂಕಿನ ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ ಗುರುವಾರ ಸಭೆ ನಡೆಯಿತು
ಹರಿಹರ ತಾಲ್ಲೂಕಿನ ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ ಗುರುವಾರ ಸಭೆ ನಡೆಯಿತು   

ಹರಿಹರ: ತಾಲ್ಲೂಕಿನ ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ಆವರಣದಲ್ಲಿ ಫೆ.8 ಮತ್ತು 9 ರಂದು ನಡೆಯುವ ವಾಲ್ಮೀಕಿ ಜಾತ್ರೆಯಲ್ಲಿ ಸಮುದಾಯದ ಜನರಲ್ಲಿ ವೈಚಾರಿಕತೆ, ಜಾಗೃತಿ ಬೆಳೆಸಲು ಆದ್ಯತೆ ನೀಡಲಾಗುವುದು ಎಂದು ಕರ್ನಾಟಕ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆದ ಜಾತ್ರಾ ಸಮಿತಿಯ ಅಧ್ಯಕ್ಷ ಬಸನಗೌಡ ದದ್ದಲ್ ತಿಳಿಸಿದರು. 

‘ಸಾಂಪ್ರದಾಯಿಕ ಜಾತ್ರೆಗಳೆಂದರೆ ಧಾರ್ಮಿಕ ಕಾರ್ಯಕ್ರಮಗಳು ಮಾತ್ರ ನಡೆಯುತ್ತವೆ. ಆದರೆ, ವಾಲ್ಮೀಕಿ ಜಾತ್ರೆಯಲ್ಲಿ ಧಾರ್ಮಿಕತೆಯನ್ನು ಬೆಳೆಸುವ ಜೊತೆಗೆ ಜನರನ್ನು ಸಂಕಷ್ಟಕ್ಕೆ ದೂಡುವ ಮೌಢ್ಯತೆ, ಕಂದಾಚಾರಗಳನ್ನು ಕಿತ್ತೊಗೆಯುವ ದೃಷ್ಟಿಯಿಂದ ಜಾಗೃತಿ ಮೂಡಿಸಲಾಗುತ್ತದೆ’ ಎಂದು ಮಠದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಮಾಹಿತಿ ನೀಡಿದರು. 

ಮಠದ 28ನೇ ವಾರ್ಷಿಕೋತ್ಸವ, ಲಿಂಗೈಕ್ಯ ಪುಣ್ಯಾನಂದಪುರಿ ಶ್ರೀಗಳ 19ನೇ ಪುಣ್ಯಾರಾಧನೆ, ಪ್ರಸನ್ನಾನಂದ ಶ್ರೀಗಳ 18ನೇ ವರ್ಷದ ಪಟ್ಟಾಧಿಕಾರ ಮಹೋತ್ಸವವನ್ನೂ ಇದೇ ಸಂದರ್ಭದಲ್ಲಿ ಆಚರಿಸಲಾಗುವುದು ಎಂದರು. 

ADVERTISEMENT

ಫೆ.8 ರಂದು ಬೆಳಿಗ್ಗೆ ವಾಲ್ಮೀಕಿ ಭಾವಚಿತ್ರದ ಮೆರವಣಿಗೆ, ಧ್ವಜಾರೋಹಣ, ಸರ್ವಧರ್ಮ ಸಾಮೂಹಿಕ ವಿವಾಹ, ಬುಡಕಟ್ಟು ವಸ್ತು ಪ್ರದರ್ಶನ, ಉದ್ಯೋಗ, ಕೃಷಿ ಮೇಳ ನಂತರ ಮಹಿಳಾ, ನೌಕರರ, ಯುವಕರ, ವೈದ್ಯರ, ವಕೀಲರ ಗೋಷ್ಠಿಗಳು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ರಾತ್ರಿ ಹಾಸನದ ಕಲಾವಿದರಿಂದ ಸಂಪೂರ್ಣ ರಾಮಾಯಣ ನಾಟಕ ಪ್ರದರ್ಶನವಿದೆ ಎಂದರು.  

ಫೆ.9 ರಂದು ಬೆಳಿಗ್ಗೆ 6ಕ್ಕೆ ಸ್ವಚ್ಛತಾ ಕಾರ್ಯ, 7 ರಿಂದ 8.30ರ ವರೆಗೆ ಗುರುಗಳ ದರ್ಶನ, 9ಕ್ಕೆ ನಾಡಿನ ಮಠಾಧೀಶರ ಸಮ್ಮುಖದಲ್ಲಿ ವಾಲ್ಮೀಕಿ ರಥೋತ್ಸವ, 9ರಿಂದ ಧರ್ಮಸಭೆ, ಮಧ್ಯಾಹ್ನ 12ಕ್ಕೆ ಜನಜಾಗೃತಿಗಾಗಿ ಜಾತ್ರಾ ಮಹೋತ್ಸವ ಸಭೆ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಪಕ್ಷ ನಾಯಕರು, ಸಚಿವರು, ಸಂಸದರು, ಶಾಸಕರು ಭಾಗವಹಿಸುವರು, ರಾಜ್ಯದ ವಿವಿಧೆಡೆಯಿಂದ 5 ಲಕ್ಷ ಜನ ಆಗಮಿಸುವ ನಿರೀಕ್ಷೆ ಇದೆ ಎಂದರು. 

ಪೀಠಾಧಿಪತಿ ಪ್ರಸನ್ನಾನಂದ ಶ್ರೀ, ಜಾತ್ರಾ ಸಮಿತಿ ಸಂಚಾಲಕ ಪಂಪಾಪತಿ, ರಾಯಚೂರು ಸಂಸದ ಜಿ.ಕುಮಾರ ನಾಯಕ, ಶಾಸಕ ಟಿ.ರಘುಮೂರ್ತಿ, ಮಠದ ಧರ್ಮದರ್ಶಿಗಳಾದ ಬಿ.ವೀರಣ್ಣ, ಕೆ.ಬಿ.ಮಂಜಣ್ಣ, ಹೊದಿಗೆರೆ ರಮೇಶ್, ಜಿಗಳಿ ಆನಂದ ಹಾಗೂ ಇತರರು ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.