ADVERTISEMENT

ಹರಿಹರ | ರಾಜನಹಳ್ಳಿ ವಾಲ್ಮೀಕಿ ಜಾತ್ರೆಗೆ ಕ್ಷಣಗಣನೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2026, 6:38 IST
Last Updated 8 ಫೆಬ್ರುವರಿ 2026, 6:38 IST
ಹರಿಹರ ತಾಲ್ಲೂಕಿನ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ನಡೆಯುವ ಮಹರ್ಷಿ ವಾಲ್ಮೀಕಿ ಜಾತ್ರೆಯ ಸಿದ್ಧತೆಯನ್ನು ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಪ್ರಸನ್ನಾನಂದ ಶ್ರೀಗಳೊಂದಿಗೆ ಶನಿವಾರ ಪರಿಶೀಲಿಸಿದರು. ಜಾತ್ರಾ ಸಮಿತಿ ಸಂಚಾಲಕ ಎಂ.ಜಿ.ಪಂಪಾಪತಿ, ಧರ್ಮದರ್ಶಿ ಕೆ.ಬಿ.ಮಂಜುನಾಥ ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು
ಹರಿಹರ ತಾಲ್ಲೂಕಿನ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ನಡೆಯುವ ಮಹರ್ಷಿ ವಾಲ್ಮೀಕಿ ಜಾತ್ರೆಯ ಸಿದ್ಧತೆಯನ್ನು ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಪ್ರಸನ್ನಾನಂದ ಶ್ರೀಗಳೊಂದಿಗೆ ಶನಿವಾರ ಪರಿಶೀಲಿಸಿದರು. ಜಾತ್ರಾ ಸಮಿತಿ ಸಂಚಾಲಕ ಎಂ.ಜಿ.ಪಂಪಾಪತಿ, ಧರ್ಮದರ್ಶಿ ಕೆ.ಬಿ.ಮಂಜುನಾಥ ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು   

ಹರಿಹರ: ತಾಲ್ಲೂಕಿನ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಫೆ.8 ಮತ್ತು 9 ರಂದು ನಡೆಯುವ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಶನಿವಾರ ಅಂತಿಮ ಸಿದ್ಧತೆಗಳು ಭರದಿಂದ ನಡೆದವು.

ಜಾತ್ರಾ ಮಹೋತ್ಸವದ ಜೊತೆಗೆ ಮಠದ 28ನೇ ವಾರ್ಷಿಕೋತ್ಸವ, ಲಿಂ.ಪುಣ್ಯಾನಂದ ಶ್ರೀಗಳ 19ನೇ ಪುಣ್ಯಾರಾಧನೆ ಹಾಗೂ ಪ್ರಸನ್ನಾನಂದ ಶ್ರೀಗಳ 18ನೇ ವರ್ಷದ ಪಟ್ಟಾಧಿಕಾರ ಮಹೋತ್ಸವೂ ನಡೆಯುತ್ತಿದೆ. ಗಣ್ಯರು ಸೇರಿದಂತೆ ನಾಡಿನ ವಿವಿಧೆಡೆಯಿಂದ ಲಕ್ಷಕ್ಕೂ ಅಧಿಕ ಜನರು ಕಾಯ್ರಕ್ರಮಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್ ಹಾಗೂ ತಜ್ಞರು ಸ್ಥಳಕ್ಕೆ ಶನಿವಾರ ಭೇಟಿ ನೀಡಿ ವೇದಿಕೆಗಳು, ಮಹಾಮಂಟಪದ ಭದ್ರತೆ ಪರಿಶೀಲಿಸಿದರು. 

ಜಾಗೃತವಾದ ಸಮುದಾಯಗಳು ಸದಾ ಜೀವಂತವಾಗಿರುತ್ತವೆ ಎಂಬ ಆಶಯದೊಂದಿಗೆ ಆಯೋಜಿಸಲಾಗಿರುವ ಈ ಜಾತ್ರೆಯು ರಾಜ್ಯದ ನಾಲ್ಕನೇ ಅತಿ ದೊಡ್ಡ ಸಮುದಾಯವಾದ ಬೇಡ, ವಾಲ್ಮೀಕಿ, ನಾಯಕ ಬುಡಕಟ್ಟು ಸಮುದಾಯವನ್ನು ಶೈಕ್ಷಣಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಸಂಘಟಿಸುವ ಮಹಾ ವೇದಿಕೆಯಾಗಿದೆ. ಸಮುದಾಯದ ಸಾಂವಿಧಾನಿಕ ಹಕ್ಕುಗಳ ಹೋರಾಟದ ಕೇಂದ್ರಬಿಂದುವಾಗಿದೆ ಎಂದು ಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ADVERTISEMENT

ಹೆಲಿಪ್ಯಾಡ್ ಸಿದ್ಧ: ಮುಖ್ಯಮಂತ್ರಿ ಸಿದ್ದರಾಮಯ್ಯ, ವಿರೋಧಪಕ್ಷ ಹಾಗೂ ಆಡಳಿತ ಪಕ್ಷದ ಮುಖಂಡರು ಸೇರಿದಂತೆ ಹೆಲಿಕಾಪ್ಟರ್‌ಗಳಲ್ಲಿ ಆಗಮಿಸುವ ಸಮಾಜದ ಸಚಿವರು, ಗಣ್ಯರಿಗಾಗಿ ಮಠದ ಸಮೀಪದಲ್ಲೇ 2 ಹೆಲಿಪ್ಯಾಡ್ ನಿರ್ಮಿಸಲಾಗಿದೆ.

ಮಠದ ಆವರಣಕ್ಕೆ ಸಿಂಗಾರ: ಲಿಂಗೈಕ್ಯ ಶ್ರೀಗಳ ಗದ್ದುಗೆ, ಮಠದ ಕಟ್ಟಡ, ಶಾಲೆ, ವಿದ್ಯಾರ್ಥಿ ನಿಲಯ ಸೇರಿದಂತೆ 25 ಎಕರೆ ವಿಸ್ತಾರ ಪ್ರದೇಶದಲ್ಲಿರುವ ಮಠದ ಆವರಣದ ಎಲ್ಲಾ ಕಟ್ಟಡಗಳನ್ನು ಸಿಂಗರಿಸಿ, ದೀಪಾಲಂಕಾರ ಮಾಡಲಾಗಿದೆ.

ಭೋಜನ: ಬೆಳಗಿನ ಉಪಹಾರಕ್ಕೆ ಟೊಮೆಟೊ ಬಾತ್, ಮಧ್ಯಾಹ್ನದ ಊಟಕ್ಕೆ ಹೆಸರುಬೇಳೆ ಪಾಯಸ, ಅನ್ನ, ಸಾಂಬಾರ್, ರಾತ್ರಿಗೆ ಶ್ಯಾವಿಗೆ ಮತ್ತು ಸಬ್ಬಕ್ಕಿ ಪಾಯಸದ ಊಟವನ್ನು ಸಿದ್ಧಪಡಿಸಲಾಗುತ್ತಿದೆ. ಅಡುಗೆ ತಯಾರಿಸುವವರು, ಬಡಿಸುವವರು ಸೇರಿ 500ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 34 ಊಟದ ಕೌಂಟರ್ ತೆರೆಯಲಾಗಿದೆ.

ಇಂದಿನ ಕಾರ್ಯಕ್ರಮಗಳು ಬೆಳಿಗ್ಗೆ 7ಕ್ಕೆ ರಾಜನಹಳ್ಳಿ ಗ್ರಾಮದಿಂದ ಮಠದವರೆಗೆ ಮಹರ್ಷಿ ವಾಲ್ಮೀಕಿ ಭಾವಚಿತ್ರದ ಭವ್ಯ ಮೆರವಣಿಗೆಯೊಂದಿಗೆ ಜಾತ್ರೆಗೆ ಚಾಲನೆ. 8ಕ್ಕೆ ಧ್ವಜಾರೋಹಣ ಶಾಸಕ ಬಸನಗೌಡ ದದ್ದಲ್ ಹಾಗೂ ಮಲ್ಲಪ್ಪ ನಾಯಕ ಭಾಗವಹಿಸುವರು. ಇದೇ ವೇಳೆ ಕೃಷಿ ವಸ್ತು ಪ್ರದರ್ಶನ ಉದ್ಯೋಗ ಮೇಳ ಹಾಗೂ ಸರ್ವಧರ್ಮ ಸಾಮೂಹಿಕ ವಿವಾಹ ಮಹೋತ್ಸವಗಳನ್ನು ಶಾಸಕ ಬಿ.ಪಿ. ಹರೀಶ್ ಸೇರಿದಂತೆ ಗಣ್ಯರು ಉದ್ಘಾಟಿಸಲಿದ್ದಾರೆ. ಬೆಳಿಗ್ಗೆ 10.30ಕ್ಕೆ ‘ಬುಡಕಟ್ಟು ಮಹಿಳೆ: ಸಬಲೀಕರಣ’ ಮಹಿಳಾ ಗೋಷ್ಠಿಯನ್ನು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಉದ್ಘಾಟಿಸುವರು. ಮಧ್ಯಾಹ್ನ 12.30ಕ್ಕೆ ನೌಕರರ ಗೋಷ್ಠಿಯನ್ನು ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಷಡಾಕ್ಷರಿ ಉದ್ಘಾಟಿಸುವರು. ಮಧ್ಯಾಹ್ನ 2.30ಕ್ಕೆ ವೈದ್ಯರ ಗೋಷ್ಠಿ ಹಾಗೂ ಸಂಜೆ 4:30ಕ್ಕೆ ಎಲ್.ಜಿ.ಹಾವನೂರು ಸ್ಮರಣಾರ್ಥ ಕಾನೂನು ವಿಚಾರ ಸಂಕಿರಣ ನಡೆಯಲಿದ್ದು ಸಚಿವ ಎಚ್.ಕೆ.ಪಾಟೀಲ್ ಭಾಗವಹಿಸುವರು. ರಾತ್ರಿ 7ರಿಂದ ‘ಬಿಸ್‌ಬಾಸ್’ ಖ್ಯಾತಿಯ ರಘು ಮತ್ತು ಮಾಳು ನಿಪನಾಳು ಮುಂತಾದವರು ಹಾಗೂ ವಿವಿಧ ರಾಜ್ಯಗಳ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಳ್ಳಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.