
ಹರಿಹರ (ದಾವಣಗೆರೆ): ‘ಅಮಾನವೀಯವಾಗಿರುವ ವೈದಿಕ ಪದ್ಧತಿಯಿಂದಾಗಿ ಶೂದ್ರ ವರ್ಗದವರ ಜೊತೆಗೆ ಮಹಿಳೆಯರ ಶೋಷಣೆ ಎಗ್ಗಿಲ್ಲದೆ ನಡೆದಿದೆ’ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಸೋಮವಾರ ಇಲ್ಲಿ ಹೇಳಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ಸ್ಥಳೀಯ ಘಟಕ, ಸ್ಫೂರ್ತಿ ಚಾರಿಟಬಲ್ ಟ್ರಸ್ಟ್ ಇಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಮಹಾಪರಿನಿರ್ವಾಣ ದಿನದ ನಿಮಿತ್ತ ಆಯೋಜಿಸಿದ್ದ ‘ಸದ್ಭಾವನ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
‘ವೈದಿಕ ಪದ್ಧತಿ ಜಾರಿಯಲ್ಲಿದ್ದ ಕಾರಣಕ್ಕೆ ಈ ಹಿಂದೆ ಶೂದ್ರ ವರ್ಗದವರು ಗ್ರಾಮ ಪ್ರವೇಶಿಸುವಾಗ ತಮ್ಮ ಹಿಂದೆ ಪೊರಕೆ ಕಟ್ಟಿಕೊಳ್ಳಬೇಕಿತ್ತು. ಶಿಕ್ಷಣ, ಆರೋಗ್ಯ, ಧರ್ಮಾಚರಣೆಯಿಂದ ದೂರ ಇಡಲಾಗಿತ್ತು. ಎಲ್ಲ ಸಮುದಾಯದ ಮಹಿಳೆಯರನ್ನೂ ವೈದಿಕ ಪದ್ಧತಿಯಡಿ ಗುಲಾಮಗಿರಿಗೆ ತಳ್ಳಿ ಕೀಳಾಗಿ ಕಾಣಲಾಗುತ್ತಿತ್ತು’ ಎಂದು ತಿಳಿಸಿದರು.
‘ಸಂವಿಧಾನದ ಕಾರಣದಿಂದ ಶೂದ್ರ ವರ್ಗದವರ ಜೊತೆಗೆ ಎಲ್ಲ ಸಮುದಾಯದ ಮಹಿಳೆಯರಿಗೂ ನಿಜವಾದ ಸ್ವಾತಂತ್ರ್ಯ ಸಿಕ್ಕಿದೆ. ಹೆಣ್ಣು ಮಕ್ಕಳಿಗೆ ಸಮಾನ ಅವಕಾಶ ಕಲ್ಪಿಸಿರುವುದರಿಂದಲೇ ಅವರು ಸಾಂವಿಧಾನಿಕ ಹುದ್ದೆಗಳನ್ನು ಪಡೆಯಲು ಸಾಧ್ಯವಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.