ದಾವಣಗೆರೆಯಲ್ಲಿ ಚಲಿಸುತ್ತಿದ್ದ ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ ದೃಶ್ಯ
ದಾವಣಗೆರೆ: ಚಲಿಸುತ್ತಿದ್ದ ರೈಲಿನಿಂದ ಕೆಳಗಿಳಿಯುವಾಗ ಆಯತಪ್ಪಿ ಹಳಿಗೆ ಬೀಳುತ್ತಿದ್ದ ಪ್ರಯಾಣಿಕನನ್ನು ರೈಲ್ವೆ ರಕ್ಷಣಾ ದಳದ (ಆರ್ಪಿಎಫ್) ಸಿಬ್ಬಂದಿ ರಕ್ಷಿಸಿದ ಘಟನೆ ಭಾನುವಾರ ತಡರಾತ್ರಿ ನಡೆದಿದೆ.
ವಿಜಯಪುರ ಜಿಲ್ಲೆಯ ಹಿಟ್ಟಿನಹಳ್ಳಿಯ ಎಚ್.ಎನ್.ಪ್ರಶಾಂತ್ (25) ರಕ್ಷಿಸಲ್ಪಟ್ಟ ಪ್ರಯಾಣಿಕ. ಆರ್ಪಿಎಫ್ ಹೆಡ್ ಕಾನ್ಸ್ಟೆಬಲ್ ಸತೀಶ್ ಅವರು ಪ್ರಯಾಣಿಕನನ್ನು ರಕ್ಷಿಸಿದ್ದಾರೆ.
ಪ್ರಶಾಂತ್ ಅವರು ಯಶವಂತಪುರ–ವಿಜಯಪುರ ರೈಲಿನಲ್ಲಿ ಬೆಂಗಳೂರಿನಿಂದ ಭಾನುವಾರ ಪ್ರಯಾಣಿಸುತ್ತಿದ್ದರು. ರಾತ್ರಿ 11.32ಕ್ಕೆ ಈ ರೈಲು ದಾವಣಗೆರೆಗೆ ಬಂದಿತ್ತು. ಅಂಗವಿಕಲರಾಗಿರುವ ಪ್ರಶಾಂತ್ ರೈಲಿನಿಂದ ಕೆಳಗೆ ಇಳಿಯಲು ಮುಂದಾಗಿದ್ದರು. ಈ ವೇಳೆ ಅವರು ಆಯತಪ್ಪಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಯಾಣಿಕ ಮೆಟ್ಟಿಲಿನಿಂದ ಜಾರುತ್ತಿರುವುದನ್ನು ಗಮನಿಸಿದ ಹೆಡ್ಕಾನ್ಸ್ಟೆಬಲ್ ಸತೀಶ್ ತಕ್ಷಣ ಸಹಾಯಕ್ಕೆ ಧಾವಿಸಿದ್ದಾರೆ. ಕೆಳಗೆ ಬೀಳುತ್ತಿದ್ದ ಅವರನ್ನು ಹಿಡಿಕೊಂಡಿದ್ದಾರೆ. ಸ್ಥಳದಲ್ಲಿದ್ದ ಸಾರ್ವಜನಿಕರೂ ಕೈಜೋಡಿಸಿದ್ದಾರೆ. ಘಟನೆಯಿಂದ ಆಘಾತಗೊಂಡಿದ್ದ ಪ್ರಯಾಣಿಕನಿಗೆ ಆತ್ಮಸ್ಥೈರ್ಯ ತುಂಬಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.