ಜಗಳೂರು: ಸ್ವಗ್ರಾಮದಲ್ಲೇ ಪಡಿತರ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ತಾಲ್ಲೂಕಿನ ತುಪ್ಪದಹಳ್ಳಿ ಗ್ರಾಮಸ್ಥರು ಪಟ್ಟಣದಲ್ಲಿ ಬುಧವಾರ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ತುಪ್ಪದಹಳ್ಳಿ ಗ್ರಾಮದಲ್ಲಿ 250ಕ್ಕೂ ಹೆಚ್ಚು ಕುಟುಂಬಗಳಿದ್ದು, ಪಕ್ಕದ ಮರಿಕುಂಟೆ ಗ್ರಾಮದಿಂದ ಪ್ರತಿ ತಿಂಗಳು ಪಡಿತರವನ್ನು ಹೊತ್ತು ತರಬೇಕಾದ ಸ್ಥಿತಿ ಇದೆ. ಮರಿಕುಂಟೆ ಗ್ರಾಮದ 5 ಕಿ.ಮೀ ದೂರ ಇದ್ದು, ವೃದ್ಧರು, ಬಡವರು ನಡೆದೇ ಹೋಗಬೇಕಿದೆ. ಪಡಿತರ ತರಲು ಕೆಲವು ದಿನಗಳು ವಿಳಂಬವಾದಲ್ಲಿ ಖಾಲಿಯಾಗಿದೆ ಎಂದು ಮಾಲೀಕರು ಹಿಂದಕ್ಕೆ ಕಳಿಸುತ್ತಾರೆ ಇದರಿಂದ ಬಡ ಪಡಿತರದಾರರಿಗೆ ತೀವ್ರ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು.
ಕೊರೊನಾ ಸಂದರ್ಭದಲ್ಲಿ ಪಡಿತರಕ್ಕಾಗಿ ಇಡೀ ಗ್ರಾಮದ ಜನರು ಮತ್ತೊಂದು ಗ್ರಾಮಕ್ಕೆ ಹೋಗಿ ಬರುವುದು ಕಷ್ಟವಾಗುತ್ತದೆ. ಇದರಿಂದ ಸೋಂಕು ಹರಡುವ ಸಾಧ್ಯತೆ ಇದೆ. ಅಲ್ಲದೆ ಐದಾರು ಕಿ.ಮೀ ನಡೆದು ಹೋಗಿ ಸ್ಕ್ಯಾನರ್ ಗೆ ಹೆಬ್ಬೆಟ್ಟು ಒತ್ತಿ ಬಂದರೂ ನಾಲ್ಕು ದಿನಗಳ ನಂತರ ಪಡಿತರ ನೀಡುತ್ತಾರೆ. ಆದ್ದರಿಂದ ನೇರವಾಗಿ ಗ್ರಾಮಕ್ಕೆ ಬಂದು ಪಡಿತರ ವಿತರಿಸುವಂತೆ ಕೇಳಿಕೊಂಡರೂ ನ್ಯಾಯಬೆಲೆ ಅಂಗಡಿ ಮಾಲೀಕರು ಸ್ಪಂದಿಸುತ್ತಿಲ್ಲ. ತೂಕದಲ್ಲೂ ಪಡಿತರದಾರರಿಗೆ ವಂಚಿಸಲಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ಮುಖಂಡರಾದ ರವಿ, ಪೂಜಾರ್ , ಚಂದ್ರಪ್ಪ, ವೀರೇಶ್, ನಿಂಗಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.