ADVERTISEMENT

ಶಿಷ್ಯವೇತನ ನೀಡಲು ನಮ್ಮಿಂದಾಗದು: ಶಾಮನೂರು ಶಿವಶಂಕರಪ್ಪ

ಜೆಜೆಎಂ ವೈದ್ಯಕೀಯ ಕಾಲೇಜಿನ ಆಡಳಿತ ಮಂಡಳಿ ಗೌರವ ಕಾರ್ಯದರ್ಶಿ

​ಪ್ರಜಾವಾಣಿ ವಾರ್ತೆ
Published 8 ಜುಲೈ 2020, 8:27 IST
Last Updated 8 ಜುಲೈ 2020, 8:27 IST
ಶಾಮನೂರು ಶಿವಶಂಕರಪ್ಪ
ಶಾಮನೂರು ಶಿವಶಂಕರಪ್ಪ   

ದಾವಣಗೆರೆ: ಇಲ್ಲಿನ ಜೆ.ಜೆ.ಎಂ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಲು ನಮ್ಮಿಂದ ಆಗದು, ಸರ್ಕಾರವೇ ಶಿಷ್ಯವೇತನ ನೀಡಬೇಕು ಕಾಲೇಜಿನ ಆಡಳಿತ ಮಂಡಳಿ ಗೌರವ ಕಾರ್ಯದರ್ಶಿ, ಶಾಸಕ ಶಾಮನೂರು ಶಿವಶಂಕರಪ್ಪ ಸ್ಪಷ್ಟಪಡಿಸಿದ್ದಾರೆ.

ಬಾಕಿ ಇರುವ 16 ತಿಂಗಳ ಶಿಷ್ಯವೇತನಕ್ಕೆ ಆಗ್ರಹಿಸಿ ಇಲ್ಲಿನ ಜಯದೇವ ವೃತ್ತದಲ್ಲಿ 10 ದಿನಗಳಿಂದ ಧರಣಿ ಆರಂಭಿಸಿರುವ ವಿದ್ಯಾರ್ಥಿಗಳು ಬುಧವಾರ ಜಾಥಾದ ಮೂಲಕ ಶಾಮನೂರು ಶಂಕರಪ್ಪ ಅವರ ನಿವಾಸದಲ್ಲಿ ಭೇಟಿ ಮಾಡಿದ ವೇಳೆ ಮೇಲಿನಂತೆ ಉತ್ತರಿಸಿದರು.

‘ಇವರೆಲ್ಲಾ ಸರ್ಕಾರ ಆರಿಸಿರುವ ರ‍್ಯಾಂಕ್ ‍ಪಡೆದ ವಿದ್ಯಾರ್ಥಿಗಳು. ಸರ್ಕಾರವೇ ಅವರಿಗೆ ಶಿಷ್ಯವೇತನ ನೀಡಬೇಕು. ನಮ್ಮ ಕಾಲೇಜಿನ 80 ವೈದ್ಯರು ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ಸಂಬಳವನ್ನು ನಾವೇ ನೀಡುತ್ತಿದ್ದೇವೆ. ವೈದ್ಯಕೀಯ ಸೌಲಭ್ಯಗಳಿಗೆ ₹2 ಕೋಟಿ ನೀಡುತ್ತಿದ್ದೇವೆ. ಮೊದಲು ಸರ್ಕಾರವೇ ಶಿಷ್ಯವೇತನ ನೀಡುತ್ತಿತ್ತು. ಆದರೆ ಒಂದು ವರ್ಷದಿಂದ ನೀಡುವುದಿಲ್ಲ ಎಂದು ಹೇಳುತ್ತಿದೆ’ ಎಂದು ಆರೋಪಿಸಿದರು.

ADVERTISEMENT

‘ಮುಖ್ಯಮಂತ್ರಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರ ಜೊತೆ ಈಚೆಗೆ ನಡೆದ ಸಭೆಯಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಲು ಆಗುವುದಿಲ್ಲ ಎಂದು ಪತ್ರದ ಮೂಲಕ ತಿಳಿಸಿದ್ದೇನೆ. ಮತ್ತೆ ಸಭೆ ಕರೆದರೆ ಹೋಗುತ್ತೇನೆ. ಆಡಳಿತ ಮಂಡಳಿಯವರೇ ಕೊಡುತ್ತಾರೆ ಎಂದು ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ’ ಎಂದು ಆರೋಪಿಸಿದರು.

ಶಿಷ್ಯವೇತನ ಸಿಗುವ ತನಕ ಸರ್ಕಾರದ ವಿರುದ್ಧ ಹೋರಾಟ ಮಾಡಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.