ಬಂಧನ
(ಪ್ರಾತಿನಿಧಿಕ ಚಿತ್ರ)
ದಾವಣಗೆರೆ: ಪತಿಯನ್ನು ಕೊಂದು ಮನೆಯ ದೇವರ ಕೋಣೆಯಲ್ಲಿ ಹೂತು ಹಾಕಿದ್ದ ಪತ್ನಿ ಹಾಗೂ ಆಕೆಯ ಪ್ರಿಯಕರನಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ ₹ 55 ಸಾವಿರ ದಂಡ ವಿಧಿಸಿ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ.
ಹೊನ್ನಾಳಿ ತಾಲ್ಲೂಕಿನ ನೆಲಹೊನ್ನೆ ಗ್ರಾಮದ ಜಗದೀಶ (64) ಹಾಗೂ ಗಂಗಮ್ಮ (54) ಶಿಕ್ಷೆಗೆ ಗುರಿಯಾದ ಅಪರಾಧಿಗಳು. ಲಕ್ಷ್ಮಣ್ ಎಂಬುವವರನ್ನು ಅಪರಾಧಿಗಳು 2015ರ ಸೆ.8ರಂದು ಕೊಲೆ ಮಾಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಎಂ.ಎಚ್.ಅಣ್ಣಯ್ಯನವರ್ ಸೋಮವಾರ ಈ ಆದೇಶ ಪ್ರಕಟಿಸಿದರು.
ಲಕ್ಷ್ಮಣ್ ಹಾಗೂ ಗಂಗಮ್ಮ ದಂಪತಿಯ ಮನೆಗೆ ಜಗದೀಶ್ ಆಗಾಗ ಭೇಟಿ ನೀಡುತ್ತಿದ್ದನು. ಅನೈತಿಕ ಸಂಬಂಧ ಹೊಂದಿದ್ದ ಗಂಗಮ್ಮ ಮತ್ತು ಜಗದೀಶ್ ಏಕಾಏಕಿ ಲಕ್ಷ್ಮಣ್ ಮೇಲೆ ದಾಳಿ ನಡೆಸಿದ್ದರು. ಹಲ್ಲೆ ನಡೆಸಿದ ರೀತಿಗೆ ಲಕ್ಷ್ಮಣ್ ಸ್ಥಳದಲ್ಲೇ ಮೃತಪಟ್ಟಿದ್ದರು. ಅಪರಾಧಿಗಳು ಮನೆಯ ದೇವರ ಕೋಣೆಯಲ್ಲಿ ಗುಂಡಿ ತೆಗೆದು ಶವ ಹೂತುಹಾಕಿದ್ದರು. ಈ ಸಂಬಂಧ ಗಂಗಮ್ಮ ಮತ್ತು ಲಕ್ಷ್ಮಣ್ ದಂಪತಿಯ ಪುತ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣದ ತನಿಖೆ ನಡೆಸಿದ ಪೊಲೀಸ್ ಇನ್ಸ್ಪೆಕ್ಟರ್ ಗಜೇಂದ್ರಪ್ಪ, ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದರು. ವಕೀಲ ಸತೀಶ್ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.