ದಾವಣಗೆರೆ: ಸಕಾಲದಲ್ಲಿ ಆಮ್ಲಜನಕ ಬೆಡ್ ಸಿಗದೇ ಇರುವುದರಿಂದ ಇಲ್ಲಿನ ರಾಜೀವ್ ಗಾಂಧಿ ಬಡಾವಣೆ ನಿವಾಸಿ ದುಗ್ಗಮ್ಮ (64) ಸೋಮವಾರ ಮೃತಪಟ್ಟಿದ್ದಾರೆ.
ದುಗ್ಗಮ್ಮ ಅವರಿಗೆ ಜ್ವರ ಬಂದಿದ್ದರಿಂದ ಭಾನುವಾರ ಸ್ಥಳೀಯ ಖಾಸಗಿ ಕ್ಲಿನಿಕ್ಗೆ ಹೋಗಿದ್ದರು. ಅಲ್ಲಿ ಉಸಿರಾಟದ ಪ್ರಮಾಣ ಪರೀಕ್ಷಿಸಿದಾಗ 60 ಇದ್ದ ಕಾರಣ ಕೂಡಲೇ ಜಿಲ್ಲಾ ಆಸ್ಪತ್ರೆಗೆ ಅಥವಾ ಆಮ್ಲಜನಕ ಇರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲು ವೈದ್ಯರು ಸೂಚಿಸಿದ್ದರು.
ಕೋವಿಡ್ ವರದಿ ನೆಗೆಟಿವ್ ಆಗಿತ್ತು. ಜಿಲ್ಲಾ ಆಸ್ಪತ್ರೆಯು ಕೋವಿಡ್ ಆಸ್ಪತ್ರೆಯಾಗಿರುವುದರಿಂದ ಸೌಖ್ಯದ ಆಸ್ಪತ್ರೆ, ಬಾಪೂಜಿ, ಸುಕ್ಷೇಮ, ಆಶ್ರಯ, ಸಿಟಿ ಸೆಂಟ್ರಲ್ ಹೀಗೆ ಎಲ್ಲ ಕಡೆ ಸುತ್ತಾಡಿದರೂ ಬೆಡ್ ಸಿಕ್ಕಿರಲಿಲ್ಲ. ಕೊನೆಗೆ ಜಿಲ್ಲಾ ಆಸ್ಪತ್ರೆಗೆ ಬಂದರೂ ಆಮ್ಲಜನಕ ಬೆಡ್ ಸಿಗಲಿಲ್ಲ. ಸಾಮಾನ್ಯ ಬೆಡ್ಗೆ ದಾಖಲಿಸಬೇಕಿದ್ದರೂ ಕೊರೊನಾ ಸೋಂಕಿತರಾಗಿರಬೇಕು ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದರು. ಹಾಗಾಗಿ ಮನೆಗೆ ವಾಪಸಾದ ದುಗ್ಗಮ್ಮ ಸೋಮವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ.
ಖಂಡನೆ: ‘ನಾಲ್ಕಾರು ಮನೆ ಮುಸುರಿ ತಿಕ್ಕಿ, ಅನಾರೋಗ್ಯ ಪೀಡಿತ ಗಂಡನನ್ನು ನೋಡಿಕೊಳ್ಳುತ್ತಿದ್ದ,ನಿವೃತ್ತ ಅಸಂಘಟಿತ ಕಾರ್ಮಿಕರ ಯೂನಿಯನ್ ಸದಸ್ಯೆಯಾಗಿದ್ದ ದುಗ್ಗಮ್ಮ ಸಾವಿಗೆ ಯಾರು ಹೊಣೆ? ಬಡವರು, ಅಸಂಘಟಿತ ಕಾರ್ಮಿಕರ ಜೀವದ ಹೊಣೆ ಯಾರದ್ದು? ಆರೋಗ್ಯ ಇಲಾಖೆ ಜನರ ಜೀವದ ಜತೆ ಚೆಲ್ಲಾಟವಾಡುತ್ತಿದೆ. ಚಿಗಟೇರಿ ಆಸ್ಪತ್ರೆ ಕೋವಿಡ್ಗೆ ಮೀಸಲಾದರೆ, ಇತರ ರೋಗಿಗಳಿಗೆ ಅದರ ಪಕ್ಕದಲ್ಲೇ ಆಸ್ಪತ್ರೆಮಾಡಬೇಕು. ದುಗ್ಗಮ್ಮನ ಸಾವು ಆರೋಗ್ಯ ಇಲಾಖೆ ಹಾಗೂ ಜಿಲ್ಲಾ ಆಸ್ಪತ್ರೆಯೇ ಮಾಡಿದ ಕೊಲೆ’ ಎಂದು ನೆರಳು ಬೀಡಿ ಕಾರ್ಮಿಕರ ಯೂನಿಯನ್ ಅಧ್ಯಕ್ಷೆ ಜಬೀನಾ ಖಾನಂ ಆರೋಪಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.