ADVERTISEMENT

ಅಜ್ಜನಿಗೆ ಹನಿಟ್ರ್ಯಾಪ್ ಹಣ ವಸೂಲಿಗೆ ಬೇಡಿಕೆ: ಮಹಿಳೆ ಬಂಧನ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2022, 9:47 IST
Last Updated 9 ನವೆಂಬರ್ 2022, 9:47 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ದಾವಣಗೆರೆ: ಶಿವಕುಮಾರ ಸ್ವಾಮಿ ಬಡಾವಣೆಯ 79 ವರ್ಷದ ವೃದ್ಧನನ್ನು ಹನಿಟ್ರ್ಯಾಪ್‌ ಮಾಡಿ ಹಣ ವಸೂಲಿಗೆ ಬೇಡಿಕೆ ಇಟ್ಟಿದ್ದ ಆರೋಪ ಮೇರೆಗೆ ಮಹಿಳೆಯೊಬ್ಬರನ್ನು ಕೆಟಿಜೆ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಯಶೋಧ ಜಿ.ಕೆ. ಬಂಧಿತೆ. ಆರಂಭದಲ್ಲಿ ಅಜ್ಜನಿಗೆ ಪರಿಚಿತರಾದ ಯಶೋಧ, ಅಜ್ಜನ ಬಳಿ ₹ 85 ಸಾವಿರ ಸಾಲ ಪಡೆದಿದ್ದಳು.

ಸಾಲ ವಾಪಸ್ ಕೇಳಿದಾಗ ಹಣ ಕೊಡುವುದಾಗಿ ಮನೆಗೆ ಕರೆಸಿಕೊಂಡು ಜ್ಯೂಸ್‌ನಲ್ಲಿ ಮತ್ತು ಬರುವ ಔಷಧ ಹಾಕಿ ಅಜ್ಜನನ್ನು ನಗ್ನ ಸ್ಥಿತಿ ಮಾಡಿ ಅವರ ಜೊತೆ ಫೋಟೊ ಕ್ಲಿಕ್ಕಿಸಿ ₹ 15 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಳು. ಕೊಡದಿದ್ದರೆ ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ
ಬೆದರಿಕೆಯೊಡ್ಡಿದ್ದಳು.

ADVERTISEMENT

ಇದರಿಂದ ಭಯಗೊಂಡು ಅಜ್ಜ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

‘ದೂರಿನ ಹಿನ್ನೆಲೆಯಲ್ಲಿ ಮಹಿಳೆಯನ್ನು ಬಂಧಿಸಿದ್ದು, ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಕಳ್ಳತನ ಆರೋಪಿ ಬಂಧನ

ದಾವಣಗೆರೆ: ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸಿರುವ ಜಗಳೂರು ಪೊಲೀಸರು ಆರೋಪಿಯಿಂದ
₹ 3.52 ಲಕ್ಷ ಮೌಲ್ಯದ ಚಿನ್ನಾಭರಣ, ಒಂದು ಲಾಂಗ್ ಹಾಗೂ 3 ಜಿಂಕೆ ಕೋಡುಗಳನ್ನು ವಶಪಡಿಸಿಕೊಂಡಿದ್ದಾರೆ.

ಚನ್ನಗಿರಿ ತಾಲ್ಲೂಕಿನ ವಡ್ನಾಳ್ ರಾಜಣ್ಣ ಬಡಾವಣೆಯ ಚಾಂದ್‌ಪೀರ್ ಅಲಿಯಾಸ್ ಚಾಂದ್ (27) ಬಂಧಿತ. ಈತ
ನವೆಂಬರ್ 4ರಂದು ಸಂತೋಷ್ ಎಚ್.ಬಿ. ಅವರ ಮನೆಗೆ ನುಗ್ಗಿ ಬೀರುವಿನಲ್ಲಿಟ್ಟಿದ್ದ 132 ಗ್ರಾಂ ಬಂಗಾರದ ಆಭರಣಗಳು ಹಾಗೂ ₹ 50,000ವನ್ನು ಕಳ್ಳತನ ಮಾಡಿದ್ದ. ಈ ಕುರಿತು ಸಂತೋಷ್ ಚನ್ನಗಿರಿ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಚನ್ನಗಿರಿ ಉಪವಿಭಾಗದ ಡಿವೈಎಸ್‌ಪಿ ಡಾ. ಸಂತೋಷ್ ಕೆ.ಎಂ. ಅವರ ಮಾರ್ಗದರ್ಶನದಲ್ಲಿ ಚನ್ನಗಿರಿ ಠಾಣೆಯ ಪಿಐ ‌ಮಧು ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.

3 ಜಿಂಕೆಯ ಕೋಡುಗಳನ್ನು ಮುಂದಿನ ಕ್ರಮಕ್ಕಾಗಿ ಚನ್ನಗಿರಿ ಘಟಕದ ಅರಣ್ಯ ಸಂರಕ್ಷಣಾಧಿಕಾರಿಗಳ ವಶಕ್ಕೆ ನೀಡಲಾಗಿದೆ.

ನಕಲಿ ಬಂಗಾರ ನೀಡಿ ವಂಚನೆ: ಇಬ್ಬರ ಬಂಧನ

ದಾವಣಗೆರೆ: ನಕಲಿ ಬಂಗಾರದ ಬಿಲ್ಲೆಗಳನ್ನು ನೀಡಿ ವಂಚಿಸಿದ ಆರೋಪದ ಮೇರೆಗೆ ಇಬ್ಬರನ್ನು ಬಂಧಿಸಿರುವ ಜಗಳೂರು ಪೊಲೀಸರು ₹ 4 ಲಕ್ಷವನ್ನು ವಶಪಡಿಸಿಕೊಂಡಿದ್ದಾರೆ.

ಜಗಳೂರು ತಾಲ್ಲೂಕಿನ ಹುಚ್ಚವ್ವನಹಳ್ಳಿ ಕೊರಚರಹಟ್ಟಿ ಗ್ರಾಮದ ವಿಜಯ್ (41), ವಿಜಯನಗರ ಜಿಲ್ಲೆಯ ಕೂಡ್ಲಗಿ ತಾಲ್ಲೂಕಿನ ಭತ್ತನಹಳ್ಳಿ ಗ್ರಾಮದ ಹನುಮಂತಪ್ಪ ಅಲಿಯಾಸ್ ಮೇಲ್ಪಾಡಿ ಹನುಮಂತಪ್ಪ(44) ಬಂಧಿತರು. ಚನ್ನೈನ ಅಂಬತ್ತೂರಿನ ರಜನೀಕಾಂತ್ ಅವರು ಈ ಕುರಿತು ದೂರು ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.