ADVERTISEMENT

ರಥ ಎಳೆದು ಭಕ್ತಿ ಸಮರ್ಪಿಸಿದ ಮಹಿಳೆಯರು

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2020, 16:36 IST
Last Updated 13 ಡಿಸೆಂಬರ್ 2020, 16:36 IST
ದಾವಣಗೆರೆಯ ಯರಗುಂಟೆಯಲ್ಲಿ ಗುರುಕರಿಬಸವೇಶ್ವರ ರಥೋತ್ಸವ ಅಂಗವಾಗಿ ಸೇರಿದ್ದ ಮಹಿಳಾ ಭಕ್ತರು ರಥವನ್ನು ಎಳೆದರು. –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ದಾವಣಗೆರೆಯ ಯರಗುಂಟೆಯಲ್ಲಿ ಗುರುಕರಿಬಸವೇಶ್ವರ ರಥೋತ್ಸವ ಅಂಗವಾಗಿ ಸೇರಿದ್ದ ಮಹಿಳಾ ಭಕ್ತರು ರಥವನ್ನು ಎಳೆದರು. –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ದಾವಣಗೆರೆ: ನಗರದಹೊರವಲಯದ ಯರಗುಂಟೆ ಗ್ರಾಮದಲ್ಲಿ ಭಾನುವಾರ ಮಹಿಳೆಯರು ಗುರು ಕರಿಬಸವೇಶ್ವರ ಸ್ವಾಮಿ ರಥವನ್ನು ಎಳೆದು ಗಮನ ಸೆಳೆದರು.

ಗುರು ಕರಿಬಸವೇಶ್ವರ ಸ್ವಾಮಿ ಗದ್ದುಗೆ ಮಠ ಆಯೋಜಿಸಿದ್ದ ರಥೋತ್ಸವದಲ್ಲಿ ಬಿಸಿಲನ್ನು ಲೆಕ್ಕಿಸದೆ ಮಹಿಳೆಯರು ಹಾಗೂ ಯುವತಿಯರು ಹೂವಿನಿಂದ ಅಲಂಕೃತವಾದ ರಥಕ್ಕೆ ಕಟ್ಟಿದ್ದ ಹಗ್ಗ ಎಳೆದು ಭಕ್ತಿ ಸಮರ್ಪಿಸಿದರು.

ಕಲಾ ತಂಡಗಳು ಮೆರುಗು ನೀಡಿದರೆ, ದೇವರ ಪಟ, ತೆಂಗಿನಕಾಯಿ ಹರಾಜು ಪ್ರಕ್ರಿಯೆ ನಡೆಯಿತು. ನೂರಾರು ಭಕ್ತರು ರಥೋತ್ಸವ ಕಣ್ತುಂಬಿಕೊಂಡರು.

ADVERTISEMENT

ಬೆಳಿಗ್ಗೆ ನಡೆದ ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿದ್ದ ಕರಿಬಸವೇಶ್ವರ ಸ್ವಾಮಿ ಗದ್ದುಗೆ ಮಠದ ಪರಮೇಶ್ವರ ಸ್ವಾಮೀಜಿ, ‘ಸ್ತ್ರೀಯರಲ್ಲಿ ಕಂಡುಬರುವ ಶಾಂತಚಿತ್ತತೆ, ಸಮಾಧಾನ ಪುರುಷರಲ್ಲಿ ಇರುವುದಿಲ್ಲ. ಹೆಣ್ಣುಮಕ್ಕಳನ್ನು ಗೌರವಿಸಬೇಕು. ಅವರಿಗೆ ಹಕ್ಕುಗಳನ್ನು ನೀಡಬೇಕು. ಹೆತ್ತಮ್ಮನ ಋಣವನ್ನು ಪ್ರತಿಯೊಬ್ಬರೂ ತೀರಿಸಬೇಕು’ ಎಂದರು.

3 ವರ್ಷಗಳಿಂದ ಮುಸ್ಲಿಮರು ರಥೋತ್ಸವದ ಪ್ರಸಾದ ವ್ಯವಸ್ಥೆ ಮಾಡುತ್ತಿದ್ದಾರೆ. ಜಾತಿ, ಮತ, ಭೇದವಿಲ್ಲದ ಮಠವಾಗಿದೆ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಅರಕೆರೆಯ ಕರಿಸಿದ್ದೇಶ್ವರ ಸ್ವಾಮೀಜಿ, ‘ಕರಿಬಸವೇಶ್ವರ ಸ್ವಾಮಿ ಗದ್ದುಗೆ ಮಠ ಹಿಂದು-ಮುಸ್ಲಿಮರ ಭಾವೈಕ್ಯಕ್ಕೆ ಸಾಕ್ಷಿಯಾಗಿದೆ’ ಎಂದು ಹೇಳಿದರು.

ಪ್ರವಚನಕಾರ ಮಹಾಂತೇಶ ಶಾಸ್ತ್ರಿ, ವೀರೇಶ ಶಾಸ್ತ್ರಿ, ವಾಗೀಶ ಶಾಸ್ತ್ರಿ, ಚನ್ನಬಸವಯ್ಯ ಶಾಸ್ತ್ರಿ, ಪಾಲಿಕೆ ಸದಸ್ಯೆ ಎಚ್.ಸಿ.ಜಯಮ್ಮ, ಗಂಗಾವತಿಯ ಹಜರತ್ ಸೈಯದ್ ಖಾದರ್ ಷಾ ಖಾದ್ರಿ, ಬಯಲಾಟ ಅಕಾಡೆಮಿ ಸದಸ್ಯ ಎನ್.ಎಸ್.ರಾಜು, ಪ್ರಾಚಾರ್ಯ ಸಿದ್ದಪ್ಪ, ಎನ್.ಪಿ. ರಾಕೇಶ, ಎ.ಸಿ.ಕರಿಬಸಪ್ಪ, ಮಂಜುನಾಥ, ಬಸವರಾಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.