ದಾವಣಗೆರೆ: ಮದ್ಯ ಮಾರಾಟ ನಿಷೇಧಕ್ಕೆ ಕ್ರಮ ಕೈಗೊಳ್ಳಲು ಒತ್ತಾಯಿಸಿ ತಾಲ್ಲೂಕಿನ ಚಿಕ್ಕತೊಗಲೇರಿ ಗ್ರಾಮದ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ರೈತ ಮುಖಂಡರ ನೇತೃತ್ವದಲ್ಲಿ ಇಲ್ಲಿನ ದೇವರಾಜು ಅರಸು ಬಡಾವಣೆಯಲ್ಲಿರುವ ಅಬಕಾರಿ ಪೊಲೀಸ್ ಉಪ ಆಯುಕ್ತರ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಚಿಕ್ಕತೊಗಲೇರಿ ಗ್ರಾಮದಲ್ಲಿ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳೇ ಹೆಚ್ಚಾಗಿ ವಾಸವಾಗಿವೆ. ಆದರೆ, ಮದ್ಯ ಸೇವಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ದೊಡ್ಡವರು, ಚಿಕ್ಕವರು ಎನ್ನದೇ ಕುಡಿತದ ಚಟಕ್ಕೆ ದಾಸರಾಗುತ್ತಿದ್ದಾರೆ. ಇದರಿಂದ ಗ್ರಾಮದಲ್ಲಿ ಶಾಂತಿ, ನೆಮ್ಮದಿ ಇಲ್ಲದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮನವಿಗೆ ಸ್ಪಂದಿಸಿದ ಮಾಯಕೊಂಡ ಪೊಲೀಸರು ಮದ್ಯ ಮಾರಾಟಗಾರರಿಗೆ ಎಚ್ಚರಿಕೆ ನೀಡಿದ್ದರು. ಅದೇ ರೀತಿ ಗ್ರಾಮಕ್ಕೆ ಬಂದು ಮದ್ಯ ಮಾರಾಟ ಸಂಪೂರ್ಣ ನಿಷೇಧಿಸಲು ಅಬಕಾರಿ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಸಿದರು.
ಚಿಕ್ಕತೊಗಲೇರಿ ಗ್ರಾಮದಲ್ಲಿ ಮದ್ಯ ನಿಷೇದಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿಗೂ ಮನವಿ ಸಲ್ಲಿಸಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್, ಸಿ.ಎಚ್. ಕೆಂಚಪ್ಪ, ಪಿ.ಕೆ. ಅಶೋಕ್, ಜಿ.ಬಿ. ಮುರುಗೇಶ್, ಸಿ.ಎಚ್. ಸತೀಶ್, ಪಾರ್ವತಮ್ಮ, ಶ್ರೀದೇವಿ, ಲಕ್ಕಮ್ಮ, ಶಿವಮ್ಮ, ಆಶಾ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.