ADVERTISEMENT

ಹಳದಿ ನೀರು: ಪತ್ತೆಯಾಗದ ಕಾರಣ

ಶಿವನಗರಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅಧಿಕಾರಿಗಳು * ಪ್ರಯೋಗಾಲಯಕ್ಕೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2022, 4:30 IST
Last Updated 14 ಸೆಪ್ಟೆಂಬರ್ 2022, 4:30 IST
ಶಿವನಗರದಲ್ಲಿ ನೀರಿನ ಪೈಪ್‌ಲೈನ್‌ಗಳು ಇರುವ ಜಾಗವನ್ನು ಗುಂಡಿ ತೋಡಿ ಪರಿಶೀಲಿಸುತ್ತಿರುವ ದಾವಣಗೆರೆ ಮಹಾನಗರ ‍ಪಾಲಿಕೆ ಸಿಬ್ಬಂದಿ
ಶಿವನಗರದಲ್ಲಿ ನೀರಿನ ಪೈಪ್‌ಲೈನ್‌ಗಳು ಇರುವ ಜಾಗವನ್ನು ಗುಂಡಿ ತೋಡಿ ಪರಿಶೀಲಿಸುತ್ತಿರುವ ದಾವಣಗೆರೆ ಮಹಾನಗರ ‍ಪಾಲಿಕೆ ಸಿಬ್ಬಂದಿ   

ದಾವಣಗೆರೆ: ಶಿವನಗರದಲ್ಲಿ ಹಳದಿ ನೀರು ಬಂದ ಪ್ರದೇಶಗಳಿಗೆ ಮಹಾನಗರ ಪಾಲಿಕೆಯ ಅಧಿಕಾರಿಗಳು, ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನೀರನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಶಿವನಗರದ 4ನೇ ಕ್ರಾಸ್‌ ಮತ್ತು ಸುತ್ತಮುತ್ತಲ ಮನೆಗಳಿಗೆ ಪೂರೈಕೆಯಾಗಿದ್ದ ನೀರು ಹಳದಿಯಾಗಿತ್ತು. ಮಳೆಗಾಲದಲ್ಲಿ ಕೆಂಪು ನೀರು ಬರುವುದು ಸಹಜ. ಹಳದಿ ನೀರು ಕಂಡು ಜನರು ಕಂಗಾಲಾಗಿದ್ದರು. ಈ ಬಗ್ಗೆ ‘ಪ್ರಜಾವಾಣಿ’ ಬೆಳಕು ಚೆಲ್ಲಿತ್ತು. ಮಂಗಳವಾರ ಈ ಬಗ್ಗೆ ವಿಶೇಷ ವರದಿ ಪ್ರಕಟವಾಗುತ್ತಿದ್ದಂತೆ ಸ್ಥಳಕ್ಕೆ ಅಧಿಕಾರಿಗಳು, ಎಂಜಿನಿಯರ್‌, ಸಿಬ್ಬಂದಿ ಭೇಟಿ ನೀಡಿದರು.

‘ಚರಂಡಿಗಳ ನಡುವೆ ಸ್ವಚ್ಛತೆ ಇಲ್ಲದ ಕಡೆಗಳಲ್ಲಿಯೂ ನಲ್ಲಿ, ಪೈಪ್‌ಲೈನ್‌ ಇರುವುದು ಕಂಡು ಬಂದಿತ್ತು. ಆದರೆ ನೀರು ಹಳದಿ ಆಗಲು ಕಾರಣ ಏನು ಎಂಬುದು ಪತ್ತೆಯಾಗಿಲ್ಲ. ಚರಂಡಿ ನೀರು, ಶೌಚಾಲಯದ ನೀರು ಇದಕ್ಕೆ ಮಿಶ್ರಣ ಆದರೆ ವಾಸನೆ ಬರುತ್ತದೆ. ಆದರೆ ಈ ನೀರು ಯಾವ ವಾಸನೆಯೂ ಇರಲಿಲ್ಲ. ಹಲವು ಕಡೆಗಳಲ್ಲಿ ಪೈಪ್‌ಲೈನ್‌ ಹೋದ ಜಾಗಗಳನ್ನು ಅಗೆದು ಪರಿಶೀಲಿಸಲಾಯಿತು. ಕೊಳಚೆಯ ಬಳಿ ಇರುವ ನಲ್ಲಿಗಳನ್ನು ಬಂದ್ ಮಾಡಿಸಲಾಯಿತು. ಇವತ್ತು ನೀರು ಹರಿಸಿ ಪರೀಕ್ಷಿಸಿದಾಗ ಹಳದಿ ಬಣ್ಣವಿಲ್ಲದ ನೀರು ಬಂದಿದೆ’ ಎಂದು ಪಾಲಿಕೆಯ ಎಇಇ ವಿನಯ್‌ ತಿಳಿಸಿದರು.

ADVERTISEMENT

‘ಅಧಿಕಾರಿಗಳು ಬಂದು ಪರೀಕ್ಷೆ ನಡೆಸಿದರು. ಇನ್ನು ಮುಂದೆ ರಾತ್ರಿ ನೀರು ಬಿಡುವುದಿಲ್ಲ. ಹಗಲು ಹೊತ್ತಿನಲ್ಲೇ ನೀರು ಬಿಡುವುದಾಗಿ ಭರವಸೆ ನೀಡಿದರು’ ಎಂದು ಶಿವನಗರದ ಫಜ್ಲುನ್ನಿಸಾ ‘ಪ್ರಜಾವಾಣಿ’ಗೆ
ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.