ADVERTISEMENT

ಯುವತಿ ಶವಸುಟ್ಟ ಪ್ರಕರಣ: ಪೋಷಕರು, ಸಂಬಂಧಿಕರ ವಿರುದ್ಧ ಸುಮೊಟೊ ಪ್ರಕರಣ

​ಪ್ರಜಾವಾಣಿ ವಾರ್ತೆ
Published 13 ಮೇ 2021, 9:10 IST
Last Updated 13 ಮೇ 2021, 9:10 IST

ಹರಪನಹಳ್ಳಿ: ತಾಲ್ಲೂಕಿನ ಯಡಿಹಳ್ಳಿ ಗ್ರಾಮದಲ್ಲಿ ಮಗಳು ವಿಷಸೇವಿಸಿ ಮೃತಪಟ್ಟ ವಿಚಾರವನ್ನು ಬಹಿರಂಗಪಡಿಸದೇ, ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಆಕೆಯ ಶವವನ್ನು ಸುಟ್ಟು ಹಾಕಿರುವ ಘಟನೆಗೆ ಸಂಬಂಧಿಸಿದಂತೆ ಪೋಷಕರು, ಸಂಬಂಧಿಕರು ಸೇರಿ 6 ಜನರ ವಿರುದ್ಧ ಪೊಲೀಸರು ಬುಧವಾರ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.

ಪೂಜಾ (18) ಮೃತಪಟ್ಟವರು. ಯುವತಿಯ ತಂದೆ ಸುರೇಶ್, ತಾಯಿ ಅಂಜಿನಮ್ಮ,ಚಿಕ್ಕಪ್ಪಂದಿರಾದ ಅಂಜಿನಪ್ಪ, ನಾಗರಾಜ, ಸಂಬಂಧಿ
ಗಳಾದ ಭೀಮಪ್ಪ, ಹನುಮಂತ ವಿರುದ್ಧ ಪ್ರಕರಣ ದಾಖಲಾಗಿದೆ.

ಮೇ 10ರಂದು ರಾತ್ರಿ ಪೂಜಾ ಮನೆಯಲ್ಲಿ ವಿಷ ಸೇವಿಸಿ ಅಸ್ವಸ್ಥಗೊಂಡಿದ್ದಳು. ಆಕೆಯನ್ನು ತಂದೆ ಸುರೇಶ್ ಹಾಗೂ ಚಿಕ್ಕಪ್ಪಂದಿರು ವಾಹನದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗಮಧ್ಯೆ ಮೃತಪಟ್ಟಿದ್ದರು.

ADVERTISEMENT

ನಂತರ ಆರೋಪಿತರು ಈ ವಿಷಯವನ್ನು ತಮ್ಮ ಸಂಬಂಧಿಕ ವೈ.ಕೆ.ಬಿ. ದುರುಗಪ್ಪ ಹಾಗೂ ಇತರರಿಗೆ ತಿಳಿಸಿದ್ದಾರೆ. ಇವರೆಲ್ಲರೂ ಸೇರಿ ಪೂಜಾಳ ಮೃತ ದೇಹವನ್ನು ಆಸ್ಪತ್ರೆಗೆ ಸಾಗಿಸದೆ ಪೊಲೀಸರಿಗೂ ತಿಳಿಸಿದೇ ಗ್ರಾಮದ ಸ್ಮಶಾನದ ಬಳಿ ಸುಟ್ಟುಹಾಕಿದ್ದಾರೆ ಎನ್ನಲಾಗಿದೆ. ಇದೇ ಮಾಹಿತಿ ಆಧರಿಸಿ ಗಸ್ತು ತಿರುಗುತ್ತಿದ್ದ ಪೊಲೀಸ್ ಸಿಬ್ಬಂದಿ ಸೊನ್ನದ ರಾಜೇಂದ್ರ ದೂರು ಸಲ್ಲಿಸಿದ್ದರು. ಹಲುವಾಗಲು
ಸಬ್ ಇನ್‌ಸ್ಪೆಕ್ಟರ್ ಎಚ್.ಎಸ್. ಪ್ರಶಾಂತ ತನಿಖೆ ಕೈಗೊಂಡಿದ್ದಾರೆ.

ಸಾವಿನ ಹಿಂದೆ ಪ್ರೇಮಕಥೆ?: ಯುವತಿ ಮತ್ತು ಅನ್ಯ ಕೋಮಿನ ಯುವಕ ಪರಸ್ಪರ ಪ್ರೀತಿಸುತ್ತಿದ್ದರು. ನಾಲ್ಕು ದಿನಗಳ ಹಿಂದೆ ಮನೆಬಿಟ್ಟು ಓಡಿ ಹೋಗಿದ್ದರು. ಇವರು ತಂಗಿದ್ದ ಸ್ಥಳವನ್ನು ಹುಡುಗಿಯ ಪಾಲಕರು ಪತ್ತೆ ಹಚ್ಚಿದ್ದಾರೆ. ಹುಡುಗ ತಲೆಮರೆಸಿಕೊಂಡಿದ್ದಾನೆ. ಹುಡುಗಿಯ ಪಾಲಕರು ಆಕೆಯನ್ನು ಗ್ರಾಮಕ್ಕೆ ಕರೆತಂದು ವಿಷ ಉಣಿಸಿದ್ದಾರೆ ಎನ್ನುವ ಸುದ್ದಿ ಗ್ರಾಮದಲ್ಲಿ ಹರಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.