ADVERTISEMENT

ಯುವಜನತೆಗಾಗಿ ಅನುದಾನ ಬಳಸಿ, ಸ್ವಾರ್ಥಕ್ಕಲ್ಲ: ಶಾಸಕ ಕೆ.ಎಸ್.ಬಸವಂತಪ್ಪ

ಯುವ ಜನೋತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 5:19 IST
Last Updated 16 ಅಕ್ಟೋಬರ್ 2025, 5:19 IST
ದಾವಣಗೆರೆಯ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ನಡೆದ ಜಿಲ್ಲಾಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ‘ಬೆಳಕು’ ತಂಡದವರು ಜನಪದ ನೃತ್ಯ ಪ್ರಸ್ತುತಪಡಿಸಿದರು ಪ್ರಜಾವಾಣಿ ಚಿತ್ರಗಳು ಸತೀಶ್ ಬಡಿಗೇರ
ದಾವಣಗೆರೆಯ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ನಡೆದ ಜಿಲ್ಲಾಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ‘ಬೆಳಕು’ ತಂಡದವರು ಜನಪದ ನೃತ್ಯ ಪ್ರಸ್ತುತಪಡಿಸಿದರು ಪ್ರಜಾವಾಣಿ ಚಿತ್ರಗಳು ಸತೀಶ್ ಬಡಿಗೇರ   

ದಾವಣಗೆರೆ: ‘ಈ ಹಿಂದೆ ನಡೆದ ಯುವಜನೋತ್ಸವದಲ್ಲಿ ಕೆಲವು ಲೋಪದೋಷಗಳಾಗಿದ್ದವು. ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅನುದಾನ ದುರುಪಯೋಗವಾಗಿರುವುದು ನನ್ನ ಗಮನಕ್ಕೆ ಬಂದಿದೆ. ಯುವಜನೋತ್ಸವಕ್ಕೆ ನೀಡಿದ ಅನುದಾನವನ್ನು ಯುವಜನತೆಗಾಗಿ ಬಳಸಬೇಕು, ಸ್ವಾರ್ಥಕ್ಕಾಗಿ ಅಲ್ಲ’ ಎಂದು ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಹೇಳಿದರು. 

ಇಲ್ಲಿನ ದೃಶ್ಯ ಕಲಾ ಮಹಾವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಯುವ ಜನೋತ್ಸವ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

‘ಯುವಜನೋತ್ಸವ ಸಂಭ್ರಮದಲ್ಲಿ ಅಧಿಕಾರಿಗಳು ಲಾಭದ ನಿರೀಕ್ಷೆ ಇಟ್ಟುಕೊಂಡು ವ್ಯವಹಾರ ಮಾಡಿದರೆ, ಯುವಜನತೆಯ ಶಾಪ ತಟ್ಟುತ್ತದೆ. ನಾವು ಬದಲಾವಣೆಯಾಗದಿದ್ದರೆ, ಈ ದೇಶ ಪ್ರಗತಿ ಹೊಂದಲು ಸಾಧ್ಯವಿಲ್ಲ. ದುಡಿಯುವುದಕ್ಕೆ ಬೇರೆ ದಾರಿಗಳಿವೆ’ ಎಂದು ಹೇಳಿದರು. 

ADVERTISEMENT

‘ಜಿಲ್ಲಾ ಮಟ್ಟದ ಯುವಜನೋತ್ಸವ ನಗರ ಪ್ರದೇಶಕ್ಕೆ ಸೀಮಿತವಾಗದೆ, ಗ್ರಾಮೀಣ ಪ್ರದೇಶಕ್ಕೂ ವಿಸ್ತರಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಯುವಜನೋತ್ಸವ ಆಯೋಜಿಸಿದರೆ, ಸುತ್ತಮುತ್ತಲಿನ ಹಳ್ಳಿಗಳ ಜನರಿಗೂ ಕಾರ್ಯಕ್ರಮದ ಬಗ್ಗೆ ತಿಳಿಯುತ್ತದೆ. ಮುಂದಿನ ದಿನಗಳಲ್ಲಿ ಈ ಆಶಯ ಈಡೇರಲಿ’ ಎಂದರು. 

‘ಯುವ ಪೀಳಿಗೆಯು ಜನಪದ ಕಲೆಗಳನ್ನು ಉಳಿಸಿ ಬೆಳೆಸುವ ಕಾರ್ಯಕ್ಕೆ ಮುಂದಾಗಬೇಕು. ಜೊತೆಗೆ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು. 

‘ಸಾಂಸ್ಕೃತಿಕ ರಂಗದಲ್ಲಿ ಪ್ರತಿಭೆ ಪ್ರದರ್ಶಿಸಿ, ಉತ್ತಮವಾಗಿ ಮಾತನಾಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಉತ್ತಮ ಸಂವಹನ ಕಲೆಗೆ ಎಲ್ಲಾ ಕ್ಷೇತ್ರಗಳಲ್ಲೂ ಮನ್ನಣೆ ಇದೆ’ ಎಂದು ‘ಧೂಡಾ’ ಅಧ್ಯಕ್ಷ ದಿನೇಶ್ ಶೆಟ್ಟಿ ಹೇಳಿದರು. 

‘ಪ್ರತಿಭಾ ಪ್ರದರ್ಶನಕ್ಕೆ ಇದೊಂದು ಉತ್ತಮ ವೇದಿಕೆಯಾಗಿದೆ. ಸಾಧನೆಯ ಮೂಲಕ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಿ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತವಾಗಿ ತರಬೇತಿ ನೀಡಲು ‘ಸಂಕಲ್ಪ’ ಕೇಂದ್ರ ಆರಂಭಿಸಿದ್ದೇವೆ. ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಲಿ’ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಸಲಹೆ ನೀಡಿದರು. 

ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಡಿ. ಕುಂಬಾರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಎ. ಶ್ರೀಹರ್ಷ, ಮಾಗಾನಹಳ್ಳಿ ಮಂಜುನಾಥ್, ಸುನಿತಾ ಪ್ರಕಾಶ್, ಶೋಭಾ ಮಂಜುನಾಥ್ ವಂದಿಸಿದರು. 

‘ಅಹಲ್ಯ’ ತಂಡದ ಕಲಾವಿದರು ಡೊಳ್ಳು ಕುಣಿತ ಪ್ರಸ್ತುತಪಡಿಸಿದರು
ಹೊನ್ನಾಳಿಯ ಮೃತ್ಯುಂಜಯ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಕಂಸಾಳೆ ನೃತ್ಯ ಪ್ರಸ್ತುತಪಡಿಸಿದರು

Quote - ಗ್ರಾಮೀಣ ಪ್ರದೇಶಗಳಲ್ಲಿ ಯುವಜನೋತ್ಸವ ಆಯೋಜಿಸುವುದರಿಂದ ಕೋಲಾಟ ಬಯಲಾಟ ಸಣ್ಣಾಟ ದೊಡ್ಡಾಟ ಸೇರಿದಂತೆ ಜನಪದ ಕಲೆಗಳು ಅನಾವರಣಗೊಳ್ಳಲಿವೆ ಕೆ.ಎಸ್.ಬಸವಂತಪ್ಪ ಮಾಯಕೊಂಡ ಶಾಸಕ

Cut-off box - 7 ವಿಭಾಗಗಳಲ್ಲಿ ಸ್ಪರ್ಧೆ  ಯುವಜನೋತ್ಸವದಲ್ಲಿ 7 ವಿಭಾಗಗಳಲ್ಲಿ ಸ್ಪರ್ಧೆ ನಡೆದವು. ಜನಪದ ನೃತ್ಯ ಜನಪದ ಗೀತೆ ಘೋಷಣೆ ಬರೆಯುವುದು ಚಿತ್ರಕಲೆ ಕತೆ– ಕವನ ವಿಜ್ಞಾನ ಪ್ರದರ್ಶನ ವಿಭಾಗದಲ್ಲಿ ಪ್ರತ್ಯೇಕ ಸ್ಪರ್ಧೆ ನಡೆದವು.  ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ ನೆಹರು ಯುವ ಕೇಂದ್ರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಯುವಜನೋತ್ಸವ ಆಯೋಜಿಸಲಾಗಿತ್ತು.