ಧಾರವಾಡ: `ರಾಜ್ಯದಲ್ಲೇ ಅತಿ ದೊಡ್ಡದಾದ ಟ್ರಕ್ ಟರ್ಮಿನಲ್ ಹುಬ್ಬಳ್ಳಿ ತಾಲ್ಲೂಕಿನ ಅಂಚಟಗೇರಿ ಗ್ರಾಮದ ಬಳಿ ನಿರ್ಮಾಣವಾಗಲಿದ್ದು, ಯೋಜನೆ ಅನುಷ್ಠಾನಕ್ಕೆ 60 ಎಕರೆ ಸರ್ಕಾರಿ ಜಮೀನು ಗುರುತಿಸಲಾಗಿದೆ~ ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮಂಗಳವಾರ ತಿಳಿಸಿದರು.
ಇಲ್ಲಿಗೆ ಸಮೀಪದ ಬೇಲೂರು ಕೈಗಾರಿಕಾ ಕೇಂದ್ರದ ಬಳಿ ಡಿ.ದೇವರಾಜ ಅರಸ್ ಟ್ರಕ್ ಟರ್ಮಿನಲ್ಸ್ 7.82 ಕೋಟಿ ರೂಪಾಯಿ ವೆಚ್ಚದಲ್ಲಿ 7.26 ಎಕರೆ ಪ್ರದೇಶದಲ್ಲಿ ನಿರ್ಮಿಸಿರುವ ಟ್ರಕ್ ಟರ್ಮಿನಲ್ ಉದ್ಘಾಟಿಸಿ ಮಾತನಾಡಿದ ಅವರು, `ಅಂಚಟಗೇರಿಯಲ್ಲಿ ನೂತನ ಟರ್ಮಿನಲ್ ನಿರ್ಮಿಸುವ ಸಂಬಂಧ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದ್ದು, ಡಿಸೆಂಬರ್ 10ರ ಒಳಗಾಗಿ ಕಾಮಗಾರಿಗೆ ಚಾಲನೆ ನೀಡಲಾಗುವುದು.
ಮುಂದಿನ ಎರಡು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ~ ಎಂದು ವಿಶ್ವಾಸ ವ್ಯಕ್ತಪಡಿಸಿದರು.
`ಈಗಾಗಲೇ ಮೈಸೂರಿನಲ್ಲಿ 16 ಎಕರೆ ಹಾಗೂ ಬೆಂಗಳೂರಿನ ಯಶವಂತಪುರದಲ್ಲಿ 39 ಎಕರೆ ವಿಸ್ತಾರದಲ್ಲಿ ಎರಡು ಟರ್ಮಿನಲ್ಗಳು ನಿರ್ಮಾಣವಾಗಿವೆ. ಇಂತಹ ಟರ್ಮಿನಲ್ಗಳಿಂದ ಲಾರಿಗಳು ಹಗಲು ಹೊತ್ತಿನಲ್ಲಿ ನಗರ ಪ್ರವೇಶಿಸುವುದನ್ನು ನಿಯಂತ್ರಿಸಿ, ಅಪಘಾತಗಳನ್ನು ತಡೆಗಟ್ಟಬಹುದಾಗಿದೆ~ ಎಂದರು.
ಡಿ.ದೇವರಾಜ ಅರಸ್ ಟ್ರಕ್ ಟರ್ಮಿನಲ್ಸ್ ಅಧ್ಯಕ್ಷ, ಶಾಸಕ ಎಂ.ಸತೀಶ ರೆಡ್ಡಿ ಮಾತನಾಡಿ, ~ಈ ಟರ್ಮಿನಲ್ನಲ್ಲಿ ಕೇವಲ ರೂ 20 ಶುಲ್ಕದಲ್ಲಿ ಲಾರಿ, ಚಾಲಕರು ಹಾಗೂ ಕ್ಲೀನರ್ಗಳಿಗೆ ಉಳಿದುಕೊಳ್ಳಲು ವ್ಯವಸ್ಥೆ, ಸ್ನಾನ, ಶೌಚಾಲಯ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಬೇಲೂರು ಹಾಗೂ ಅಂಚಟಗೇರಿ ಬಳಿಯ ಟರ್ಮಿನಲ್ಗಳಿಂದ ಅವಳಿ ನಗರದಲ್ಲಿ ಲಾರಿಗಳ ದಟ್ಟಣೆ ನಿಯಂತ್ರಣಕ್ಕೆ ಬರಲಿದೆ~ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.