ADVERTISEMENT

ಅಣ್ಣಾ ನಿರಶನ ಬೆಂಬಲಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2013, 4:00 IST
Last Updated 14 ಡಿಸೆಂಬರ್ 2013, 4:00 IST

ಹುಬ್ಬಳ್ಳಿ: ಜನ ಲೋಕಪಾಲ್‌ ಮಸೂದೆ ಜಾರಿ ಆಗ್ರಹಿಸಿ ಅಣ್ಣಾ ಹಜಾರೆ ಆರಂಭಿಸಿರುವ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿ ಆಮ್‌ ಆದ್ಮಿ ಪಕ್ಷ (ಎಎಪಿ)ದ ಜಿಲ್ಲಾ ಘಟಕದ ಕಾರ್ಯ­ಕರ್ತರು ನಗರದ ಚನ್ನಮ್ಮ ವೃತ್ತದ ಬಳಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಅಣ್ಣಾ ಹಜಾರೆ ಬೆಂಬಲಿಸಿ ಮತ್ತು ಬಲಿಷ್ಠ ಜನ ಲೋಕಪಾಲ್‌ ಮಸೂದೆ ಜಾರಿಗೆ ಆಗ್ರಹಿಸಿ ಪ್ರತಿಭಟನೆಕಾರರು ಘೋಷಣೆ ಕೂಗಿದರು. ಸಂಚಾರ ಜಾಗೃತಿ ಆಂದೋಲನದ ಭಾಗವಾಗಿ ಜಾಥಾ ನಡೆಸುತ್ತಿದ್ದ ದೇಶಪಾಂಡೆ ಟ್ರಸ್ಟ್‌ನ ವಿದ್ಯಾರ್ಥಿಗಳು ಚನ್ನಮ್ಮ ವೃತ್ತದ ಬಳಿಗೆ ಬರುತ್ತಿದ್ದಂತೆ ಎಎಪಿ ಕಾರ್ಯಕರ್ತರು ಜನ ಲೋಕಪಾಲ ಮಸೂದೆ ಬೇಡಿಕೆಗೆ ಬೆಂಬಲ ಸೂಚಿಸುವಂತೆ ವಿನಂತಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎಎಪಿ ಜಿಲ್ಲಾ ಸಂಚಾಲಕ ಶೈಲೇಂದ್ರ­ಕುಮಾರ ಪಾಟೀಲ, ‘ದೇಶದಲ್ಲಿ ಆಳವಾಗಿ ಬೇರೂರಿರುವ ಭ್ರಷ್ಟಾಚಾರ­ವನ್ನು ಕಿತ್ತೆಸೆಯಲು ಮತ್ತು ಜನ ಲೋಕಪಾಲ್ ಮಸೂದೆ ಅನುಷ್ಠಾನಕ್ಕೆ ಯುವ ಸಮೂಹ  ಬೆಂಬಲ ನೀಡಬೇಕು’ ಎಂದು ಕೋರಿದರು.

ಎಎಪಿ ಜಿಲ್ಲಾ ಘಟಕದ ಕೋಶಾಧ್ಯಕ್ಷ ಅನಂತಕೃಷ್ಣ, ‘ಸಂಸತ್ತಿನಲ್ಲಿ ಚರ್ಚೆಗೆ ಎತ್ತಿಕೊಂಡಿರುವ ಲೋಕಪಾಲ್‌ ಮಸೂದೆ, ಅಣ್ಣಾ ಹಜಾರೆ ಅವರ ನಿರೀಕ್ಷೆಯ ಮಸೂದೆ ಅಲ್ಲ. ಅದರಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ನಮಗೆ ಬಲಿಷ್ಠವಾದ ಜನ ಲೋಕಪಾಲ್ ಮಸೂದೆ ಬೇಕು. ಆದರೆ ರಾಜಕೀಯ ಪಕ್ಷಗಳು ತಾವು ಬಯಸಿರುವ ಮಸೂದೆ ಮಂಡಿಸುವ ಮೂಲಕ ಕಣ್ಣೊರೆಸುವ ತಂತ್ರ ಮಾಡುತ್ತಿವೆ’ ಎಂದರು.

ಕಾಲೇಜು ಆಡಳಿತ ವಿರುದ್ಧ ಆರೋಪ: ‘ಎಎಪಿ ಹಮ್ಮಿಕೊಂಡ ಪ್ರತಿಭಟನೆಗೆ ನಗರ ವಿವಿಧ ಕಾಲೇಜುಗಳ 2000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಲು ಮುಂದಾಗಿದ್ದರು. ಆದರೆ ರಾಜಕಾರಣಿಗಳ ನಿಯಂತ್ರಣದಲ್ಲಿರುವ ಕೆಲವು ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ, ವಿದ್ಯಾರ್ಥಿಗಳು ಸಂಸ್ಥೆ ಬಿಟ್ಟು ಹೊರಕ್ಕೆ ಬಾರದಂತೆ ತಡೆದರು‘   ಎಂದು ಶೈಲೇಂದ್ರ ಕುಮಾರ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.