ಧಾರವಾಡ: ಇತಿಹಾಸದ ಪಾಠಗಳು ನಮ್ಮ ಜೀವನದಲ್ಲಿ ಉತ್ತಮ ಮಾರ್ಗದರ್ಶಕ ಸೂತ್ರಗಳಾಗುತ್ತವೆ. ಅವುಗಳಲ್ಲಿನ ಒಳ್ಳೆಯ ವಿಚಾರಗಳನ್ನು ಅಳವಡಿಸಿಕೊಂಡು ಬದುಕು ನಡೆಸಬೇಕು ಎಂದು ಕರ್ನಾಟಕ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಸ್.ಎಸ್.ಕಟ್ಟೀಮನಿ ಹೇಳಿದರು.
ಇಲ್ಲಿನ ಕರ್ನಾಟಕ ಕಲಾ ಮಹಾವಿದ್ಯಾಲಯದ ಇತಿಹಾಸ ವಿಭಾಗದಲ್ಲಿ ಇತ್ತೀಚೆಗೆ ನಡೆದ ಇಂದಿನ ಆಧುನಿಕ ಕರ್ನಾಟಕ ಕುರಿತ ಒಂದು ದಿನದ ವಿಚಾರಸಂಕಿರಣನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ. ಎಂ.ಶ್ರೀಶೈಲಪ್ಪನವರ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ದ್ವಿತೀಯ ಪಿಯುಸಿ ಪ್ರಮುಖ ಘಟ್ಟ. ಕಾರಣ ಸತತ ಅಧ್ಯಯನಶೀಲತೆಯನ್ನು ರೂಢಿಸಿಕೊಂಡು ಉತ್ತಮ ಅಂಕಗಳನ್ನು ಪಡೆದುಕೊಂಡು ತಮ್ಮ ಭವಿಷ್ಯವನ್ನು ಕಟ್ಟಿಕೊಳ್ಳಬೇಕು. ಈ ನಿಟ್ಟಿನಲ್ಲಿ ಈ ವಿಚಾರಸಂಕಿರಣ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕ ಎಂದರು.
ಉಪ ಪ್ರಾಚಾರ್ಯೆ ಡಾ. ರಾಜೇಶ್ವರಿ ಮಹೇಶ್ವರಯ್ಯ ಅಧ್ಯಕ್ಷತೆ ವಹಿಸಿ, ಇತಿಹಾಸದ ಅರಿವಿನಿಂದ ಭವಿಷ್ಯವನ್ನು ರೂಪಿಸಿಕೊಂಡರೆ ಬದುಕು ಉಜ್ವಲವಾಗುತ್ತದೆ, ಇತಿಹಾಸದಿಂದ ಸಾಮಾಜಿಕ ಬದ್ಧತೆಯನ್ನು ಕಲಿಯಬಹುದು ಎಂದು ಹೇಳಿದರು.
ಡಾ. ಬಸವರಾಜ ಅಕ್ಕಿ ಮೈಸೂರಿನ ಒಡೆಯರ ಕಾಲದ ಕರ್ನಾಟಕ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು. ರಾಷ್ಟ್ರೀಯ ಚಳುವಳಿಯಲ್ಲಿ ಕರ್ನಾಟಕದ ಪಾತ್ರ ಮತ್ತು ಕರ್ನಾಟಕದ ಏಕೀಕರಣ ವಿಷಯ ಕುರಿತು ಪ್ರೊ. ಪ್ರಕಾಶ ಸುಣಗಾರ ಉಪನ್ಯಾಸ ನೀಡಿದರು. ನಾಗವೀಣಾ ಮಡಿವಾಳರ ಪ್ರಾರ್ಥಿಸಿದರು. ಡಾ. ಮಹೇಶಕುಮಾರ ಪಾಟೀಲ ನಿರೂಪಿಸಿದರು.
ಆರೋಗ್ಯ ತಪಾಸಣೆ ಇಂದು
ಧಾರವಾಡ: ಮಹಾನಗರ ಜಿಲ್ಲಾ ರಾಜೀವಗಾಂಧಿ ಬ್ರಿಗೇಡ್ ಜ. 25 ರಂದು ಬೆಳಿಗ್ಗೆ 9.30ಕ್ಕೆ ಕೆಲಗೇರಿಯ ಗುಡ್ಡದಮಠ ಕಲ್ಯಾಣ ಮಂಟಪದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿದೆ.
ಡಾ. ಅಶೋಕ ಮಹಾದೇವಪ್ಪ, ಡಾ. ರಾಜಶೇಖರ ಪಾಳೇದವರ, ಡಾ. ಉಮೇಶ ಹಳ್ಳಿಕೇರಿ, ಡಾ. ಎಸ್. ವಿ. ಗರಗ, ಡಾ. ನೀತಾ ಬೀಳಗಿ, ಡಾ. ಅಕ್ತಾರ್ ಜಾನ್, ಡಾ. ಗಲಗಲಿ, ಬಿ.ಎಸ್.ಬಾದನಳ್ಳಿ ಭಾಗವಹಿಸುವರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.