
ಧಾರವಾಡ: ಧಾರವಾಡ ಆಕಾಶವಾಣಿ ಆರಂಭಗೊಂಡಾಗಿನಿಂದ ಇಲ್ಲಿಯವರೆಗೆ ಆಕಾಶವಾಣಿಗೆ ಭೇಟಿ ನೀಡಿದ ಸುಮಾರು 100 ಗಣ್ಯರು, ಕವಿ- ಕಲಾವಿದರು ಹಾಗೂ ಖ್ಯಾತ ಸಂಗೀತಗಾರರ ಛಾಯಾಚಿತ್ರಗಳನ್ನು ಆಕಾಶವಾಣಿ ಸಂಗ್ರಹಿಸಿ ಇರಿಸಿದೆ.
ಹೀಗೆ ಸಂಗ್ರಹಿತ ಅಪರೂಪದ ಛಾಯಾಚಿತ್ರಗಳನ್ನು ಮುದ್ರಿಸಿ ಆಕಾಶವಾಣಿಗೆ ಭೇಟಿ ನೀಡುವವರು ನೋಡಲು ಅನುಕೂಲವಾಗುವಂತೆ ಆಕಾಶವಾಣಿ ಸಭಾಂಗಣದಲ್ಲಿ ಛಾಯಾಚಿತ್ರಗಳಿಗೆ ಕಟ್ಟು ಹಾಕಿಸಿ ಪ್ರದರ್ಶಿಸಲಾಗಿದೆ. ಹೀಗೆ ಪ್ರದರ್ಶಿಸಿದ ಈ ಛಾಯಾಚಿತ್ರ ಭಂಡಾರವನ್ನು ಇದೇ ಜೂನ್ -17ರಂದು ಮಂಗಳವಾರ ಬೆಳಿಗ್ಗೆ 11ಕ್ಕೆ ಅದೇ ಸಭಾಂಗಣದಲ್ಲಿ ಉದ್ಛಾಟಸಲಾಗುವುದು ಎಂದು ನಿಲಯದ ನಿರ್ದೇಶಕ ಸಿ.ಯು.ಬೆಳ್ಳಕ್ಕಿ ತಿಳಿಸಿದ್ದಾರೆ.
ಛಾಯಾಚಿತ್ರ ಭಂಡಾರವನ್ನು ಲೇಖಕ ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ ಉದ್ಛಾಟಿಸಲಿದ್ದು, ಪತ್ರಕರ್ತ ಡಾ.ಸರಜೂ ಕಾಟಕರ್ ಮುಖ್ಯ ಅತಿಥಿಗಳಾಗಿ ಬರಲಿದ್ದಾರೆ. ಆರು ದಶಕಗಳಿಗೂ ಮಿಕ್ಕಿದ ಧಾರವಾಡ ಆಕಾಶವಾಣಿಯ ಸೇವೆಯಲ್ಲಿ ಅವಿಸ್ಮರಣೀಯ ಕ್ಷಣಗಳು ಅಸಂಖ್ಯ. ಧ್ವನಿರೂಪದಲ್ಲಿ ಸಂಗ್ರಹವಾದ ಮಾತು, ಸಂಗೀತಗಳ ಭಂಡಾರವೇ ಇದೆ. ಅಂತೆಯೇ ಆರಂಭದಿಂದ ಇಂದಿನವರೆಗಿನ ಅನೇಕ ಸಂದರ್ಭಗಳ ಭಾವಚಿತ್ರಗಳು ಕಾಲದ ಕತೆ ಹೇಳುತ್ತವೆ. ಸಾಗಿಬಂದ ಹಾದಿಯ ಮೈಲುಗಲ್ಲುಗಳಂತೆ ಗೋಚರಿಸುತ್ತವೆ. ಅಂತಹ ಅಪರೂಪದ ಭಾವಚಿತ್ರಗಳ ನಿತ್ಯ ದರ್ಶನಕ್ಕೆ ಈಗ ಅವಕಾಶ ಕಲ್ಪಿಸಲಾಗಿದೆ.
ತನ್ನ ಸುತ್ತಲಿನ ಪರಿಸರದ ಎಲ್ಲ ಪ್ರತಿಭೆಗಳಿಗೂ ಅಭಿವ್ಯಕ್ತಿಯ ಅವಕಾಶ ನೀಡಿದ ಆಕಾಶವಾಣಿಗೆ ಮಕ್ಕಳು, ಯುವಕರು, ವೃದ್ಧರು, ಪಂಡಿತರು ಜನಪದರು, ಜನನಾಯಕರು ಎಲ್ಲರೂ ಭೇಟಿ ನೀಡಿದ್ದಾರೆ. ನಾದತರಂಗ, ರಂಗತರಂಗ, ಸಾಹಿತ್ಯಸಾಂಗತ್ಯ ಮತ್ತು ಅವಿಸ್ಮರಣೀಯ ಗಳಿಗೆಗಳು ಹೀಗೆ ನಾಲ್ಕು ವಿಭಾಗಗಳಲ್ಲಿ ಸಂಯೋಜನೆಗೊಂಡ ಚಿತ್ರಭಿತ್ತಿ ನಾಡಿನ ಸಂಗೀತ ದಿಗ್ಗಜರ, ರಂಗಕಲಾವಿದರ, ಕವಿಪುಂಗವರ ನುಡಿಯನ್ನು ಸಮೃದ್ಧಗೊಳಿಸಿದ ಸಂಶೋ-ಧಕರ ಭಾವ ಸಂಪುಟದಂತೆ ಗೋಚರಿಸುತ್ತಿದೆ.
ಈ ಅಪರೂಪದ ಭಾವಚಿತ್ರ ಭಂಡಾರ ನಾಡಿನ ಸಾಂಸ್ಕೃತಿಕ ಲೋಕವನ್ನೇ ತೆರೆದಿಟ್ಟಂತಿದೆ. ಸಂಗೀತ ದಿಗ್ಗಜರಾದ ಪಂ.ಮಲ್ಲಿಕಾರ್ಜುನ ಮನಸೂರ, ಡಾ.ಗಂಗೂಬಾಯಿ ಹಾನಗಲ್, ಪಂ.ಬಸವರಾಜ ರಾಜಗುರು, ಪಂ.ಬಿಸ್ಮಿಲ್ಲಾಖಾನ್ ಮುಂತಾದವರ ವಿಭಿನ್ನ ನಾದಭಂಗಿಗಳು, ಸ್ವಾತಂತ್ರ್ಯ ಸೇನಾನಿ ನಾ.ಸು.ಹರ್ಡಿೀಕರ, ಸಂಶೋಧಕ ಶಂಭಾ ಜೋಶಿ, ಕವಿಗಳಾದ- ದ.ರಾ.ಬೇಂದ್ರೆ, ವಿ.ಕೃ.ಗೋಕಾಕ, ಡಿ.ಎಸ್.ಕರ್ಕಿ, ಚೆನ್ನವೀರ ಕಣವಿ, ಕಾದಂಬರಿಕಾರರಾದ ಶಿವರಾಮ ಕಾರಂತ, ಬಸವರಾಜ ಕಟ್ಟೀಮನಿ, ಸತ್ಯಕಾಮ, ನಾಟಕಕಾರ- ಗಿರೀಶ ಕಾರ್ನಾಡ್ ಹಾಗೂ ಚಂದ್ರಶೇಖರ ಕಂಬಾರ ಮೊದಲಾದವರ ಭಾವಭಂಗಿಗಳು ಚಿತ್ರಭಿತ್ತಿಯಲ್ಲಿ ಮೂಡಿಬಂದಿವೆ. ಆಕಾಶವಾಣಿಯ ಆಡಳಿತ ಕಚೇರಿ ಆವರಣದಲ್ಲಿರುವ ಆಕಾಶವಾಣಿ ಚಿತ್ರಭಂಡಾರಕ್ಕೆ ಭೇಟಿ ನೀಡುವ ಎಲ್ಲರಿಗೂ ಉಚಿತ ಪ್ರವೇಶವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.