ADVERTISEMENT

ಎಸ್‌ಡಿಎಂಸಿ ಸದಸ್ಯರ ಆಯ್ಕೆ ಕಸರತ್ತು

​ಪ್ರಜಾವಾಣಿ ವಾರ್ತೆ
Published 25 ಜನವರಿ 2012, 10:05 IST
Last Updated 25 ಜನವರಿ 2012, 10:05 IST

ಹುಬ್ಬಳ್ಳಿ: ಎಸ್‌ಡಿಎಂಸಿ ಸದಸ್ಯರ ಹಾಗೂ ಅಧ್ಯಕ್ಷರ ಆಯ್ಕೆ ಸಂಬಂಧ ಎರಡು ಗುಂಪುಗಳ ನಡುವೆ ನಡೆದ ಜಗಳ ವಿಕೋಪಕ್ಕೆ ಹೋಗಿ ಪರಸ್ಪರ ಹೊಡೆದಾಟ ನಡೆದು, 14 ಜನರು ಗಾಯಗೊಂಡ ಘಟನೆ ತಾಲ್ಲೂಕಿನ ಮಲ್ಲಿಗವಾಡದಲ್ಲಿ ಮಂಗಳವಾರ ನಡೆದಿದೆ.

ರಮೇಶ ಅಳಗವಾಡಿ, ಪ್ರಭು ಬಡಫಕೀರಪ್ಪನವರ, ಮುತ್ತು ಫಕೀರಪ್ಪನವರ, ಶಿವಾನಂದ ಫಕೀರಪ್ಪನವರ, ಗುರುನಾಥ ಫಕೀರಪ್ಪನವರ, ಮಲ್ಲೇಶ ಇನಾಮತಿ, ನಾಗರಾಜ ಛಬ್ಬಿ, ಮಂಜುನಾಥ ದನಮಿ, ಶರಣು ತಳವಾರ, ದುಂಡಪ್ಪ ಬಾವಿಕಟ್ಟಿ, ನಿಂಗಪ್ಪ ಬಾವಿಕಟ್ಟಿ, ಸೋಮು ಬಾವಿಕಟ್ಟಿ, ಈಶ್ವರಪ್ಪ ಬಾವಿಕಟ್ಟಿ ಹಾಗೂ ಗುರುಸಿದ್ಧಯ್ಯ ಹಿರೇಮಠ ಗಾಯಗೊಂಡವರು. ಎಲ್ಲರನ್ನು ನಗರದ ಕಿಮ್ಸಗೆ ದಾಖಲಿಸಲಾಗಿದೆ.

ಮಲ್ಲಿಗವಾಡದಲ್ಲಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿಗೆ ನೂತನ ಅಧ್ಯಕ್ಷ ಹಾಗೂ ಸದಸ್ಯರನ್ನು ಆಯ್ಕೆ ಮಾಡಬೇಕಿತ್ತು.

`ಎಸ್‌ಡಿಎಂಸಿ ಅಧ್ಯಕ್ಷರ ಹಾಗೂ ಸದಸ್ಯರ ಅವಧಿ 6 ತಿಂಗಳ ಹಿಂದೆ ಅಂತ್ಯಗೊಂಡಿತು. ನೂತನ ಸಮಿತಿ  ಆಯ್ಕೆಯಾಗಬೇಕಿತ್ತು. ಈ ವಿಷಯವನ್ನು ಶಾಲೆಯ ಮುಖ್ಯ ಶಿಕ್ಷಕ ಅರಕೇರಿಯವರು ಗ್ರಾಮ ಪಂಚಾಯಿತಿಗೆ ತಿಳಿಸಬೇಕಿತ್ತು. ಆದರೆ ಅವರು ವಿಳಂಬ ಮಾಡಿದರು. ಸದಸ್ಯರೆಲ್ಲ ಒತ್ತಾಯಿಸಿದ ಮೇಲೆ 2-3 ದಿನಗಳ ಹಿಂದಷ್ಟೇ ಪಂಚಾಯಿತಿಗೆ ತಿಳಿಸಿದರು. ಸಮಿತಿ ಸದಸ್ಯರ ಆಯ್ಕೆ ಸಂಬಂಧ ಮಂಗಳವಾರ ಸಭೆ ನಡೆಯಿತು.

ಆದರೆ ಸಭೆಯಲ್ಲಿ ಶಿವಾನಂದ ಫಕೀರಪ್ಪನವರ ತಾನೇ ಅಧ್ಯಕ್ಷನಾಗುತ್ತೇನೆಂದು ಹಟ ಹಿಡಿದರು. ಇದರಿಂದ ಜಗಳವಾಗಿ ಹಲ್ಲೆ ನಡೆಯಿತು~ ಎಂದು ಎಸ್‌ಡಿಎಂಸಿ ಸದಸ್ಯ ಪಂಚಾಕ್ಷರಯ್ಯ ಹಿರೇಮಠ ತಿಳಿಸಿದರು.

ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.

ಅಪಘಾತ: ವ್ಯಕ್ತಿಗೆ ಗಾಯ

ಹುಬ್ಬಳ್ಳಿ: ಖಾಸಗಿ ಬಸ್ಸೊಂದು ದ್ವಿಚಕ್ರ ವಾಹನಕ್ಕೆ ಅಪ್ಪಳಿಸಿದ್ದರಿಂದ ಅದರ ಸವಾರನೊಬ್ಬ ಗಾಯಗೊಂಡ ಘಟನೆ ಮಂಗಳವಾರ ಸಂಜೆ ನಗರದ ಹೊಸೂರು ಸರ್ಕಲ್‌ನಲ್ಲಿ ಸಂಭವಿಸಿದೆ. ಅಪಘಾತ ಸಂಭವಿಸಿದರೂ ನಿಲ್ಲದೆ ಹೊರಟಿದ್ದ ಬಸ್ಸನ್ನು ಬೆನ್ನಟ್ಟಿದ ಸಂಚಾರ ಪೊಲೀಸರು ಹೊಸ ಬಸ್ ನಿಲ್ದಾಣದ ಬಳಿ ಅದನ್ನು ತಡೆಗಟ್ಟಿದರು. ದ್ವಿಚಕ್ರ ವಾಹನ ಸವಾರ ದೂರು ನೀಡದ್ದರಿಂದ ಬಳಿಕ ಬಸ್ಸನ್ನು ಬಿಟ್ಟು ಕಳುಹಿಸಲಾಯಿತು. ಈ ಕುರಿತಂತೆ ಯಾವುದೇ ಪ್ರಕರಣ ದಾಖಲಾಗಿಲ್ಲ.

ರೈಲ್ವೆ ಸ್ಟೇಶನ್ ರಸ್ತೆಯಲ್ಲಿ ಅಪಘಾತ ಸಂಭವಿಸಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ ಎಂಬ ವದಂತಿ ಹರಡಿತ್ತು. ಆದರೆ, ಪೊಲೀಸ್ ಅಧಿಕಾರಿಗಳು ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು `ಪ್ರಜಾವಾಣಿ~ಗೆ ಸ್ಪಷ್ಟಪಡಿಸಿದರು.

ಬೈಕ್‌ಗಳ ಡಿಕ್ಕಿ: ಮೂವರಿಗೆ ಗಾಯ
ಧಾರವಾಡ: ನಗರದ ಆರ್‌ಎಲ್‌ಎಸ್ ಕಾಲೇಜು ಎದುರಿಗೆ ಎರಡು ಬೈಕ್‌ಗಳು ಮುಖಾಮುಖಿ ಡಿಕ್ಕಿ ಹೊಡೆದಿದ್ದರಿಂದ ಮೂವರು ತೀವ್ರವಾಗಿ ಗಾಯಗೊಂಡ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ.
ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.