ADVERTISEMENT

ಕಾಂಗ್ರೆಸ್‌ ಮುಕ್ತ ಭಾರತಕ್ಕೆ ಮೋದಿ ಅಗತ್ಯ: ಜೋಶಿ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2013, 9:38 IST
Last Updated 23 ಸೆಪ್ಟೆಂಬರ್ 2013, 9:38 IST

ಹುಬ್ಬಳ್ಳಿ: ‘ಕಾಂಗ್ರೆಸ್‌ ಆಡಳಿತದಿಂದಾಗಿ ದೇಶ ಈಗ ಸಂಕಷ್ಟದಲ್ಲಿದೆ. ಈಗ ಇರುವಂಥ ಪರಿಸ್ಥಿತಿ ದೇಶಕ್ಕೆ ಒಮ್ಮೆಯೂ ಎದುರಾಗಲಿಲ್ಲ. ಹೀಗಾಗಿ ಕಾಂಗ್ರೆಸ್‌ ಮುಕ್ತ ದೇಶಕ್ಕಾಗಿ ನರೇಂದ್ರ ಮೋದಿ ಅವರೇ ಪ್ರಧಾನಿಯಾಗಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ ಹೇಳಿದರು.

ನಗರದ ಆರ್‌.ಎನ್‌.ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಬಿಜೆಪಿ ಮಹಾನಗರ ಜಿಲ್ಲಾ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶದ ಜನರು ಈಗ ಪರಿವರ್ತನೆಗಾಗಿ ಕಾದಿದ್ದಾರೆ. ಈ ಆಸೆಯನ್ನು ಈಡೇರಿಸಲು ಪಕ್ಷದ ಕಾರ್ಯಕರ್ತರು ಶ್ರಮಿಸಬೇಕು ಎಂದು ಸಲಹೆ ನೀಡಿದರು.

‘ಸೋಲಿನಿಂದ ಧೃತಿಗೆಡಬೇಕಾಗಿಲ್ಲ. ಕಳೆದುಕೊಂಡದ್ದನ್ನು ಕಳೆದ ಜಾಗದಲ್ಲೇ ಹುಡುಕುವ ನೀತಿಯನ್ನು ಅನುಸರಿಸಬೇಕು. ಮತ್ತೆ ಪಕ್ಷವನ್ನು ಗೆಲುವಿನ ಹಾದಿಯಲ್ಲಿ ನಡೆಸಬೇಕು. ಮುಂದಿನ ಲೋಕಸಭಾ ಚುನಾವಣೆಯ ದೃಷ್ಟಿಯಲ್ಲಿ ಕಾರ್ಯಪ್ರವೃತ್ತರಾಗಬೇಕು’ ಎಂದು ಅವರು ಹೇಳಿದರು.
‘ಪಾಲಿಕೆ ಚುನಾವಣೆಯಲ್ಲಿ ನಿರೀಕ್ಷೆಗೆ ತಕ್ಕಂತೆ ಫಲ ಸಿಗಲಿಲ್ಲ. 24ನೇ ವಾರ್ಡಿನಲ್ಲಿ ಟಿಕೆಟ್‌ ನೀಡುವ ವಿಷಯದಲ್ಲಿ ತಪ್ಪು ಮಾಡಿದ್ದೇವೆ. ಆದರೆ ಅಲ್ಲಿ ಗೆದ್ದ ಅಭ್ಯರ್ಥಿ ಒಳ್ಳೆಯ ಉದ್ದೇಶದಿಂದ ಪಕ್ಷಕ್ಕೆ ಮರಳಿದ್ದಾರೆ. ಹೀಗಾಗಿ ಪಾಲಿಕೆ ಅಧಿಕಾರ ಬಿಜೆಪಿಗೇ ಸಿಗಲಿದೆ’ ಎಂದು ಅವರು ಭರವಸೆ ವ್ಯಕ್ತಪಡಿಸಿದರು.

‘ರಾಜ್ಯದಲ್ಲಿ ಕಾಂಗ್ರೆಸ್‌ ದ್ವೇಷದ ರಾಜಕೀಯ ಮಾಡುತ್ತಿದೆ. ಅಭಿವೃದ್ಧಿ ವಿಷಯದಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದೆ. ಅನ್ನಭಾಗ್ಯ, ಕ್ಷೀರ ಭಾಗ್ಯ ಮುಂತಾದ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೆ ತರಲು ಸರ್ಕಾರಕ್ಕೆ ಸಾಧ್ಯವಾಗಲಿಲ್ಲ’ ಎಂದರು.
‘ಅನ್ನಭಾಗ್ಯದಂಥ ಯೋಜನೆಯ ಕುರಿತು ವಸ್ತುಸ್ಥಿತಿ ವರದಿ ನೀಡಲು ಸರ್ಕಾರ ಮುಂದಾಗುತ್ತಿಲ್ಲ’ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಆರೋಪಿಸಿದರು.

ನಿಕಟಪೂರ್ವ ಅಧ್ಯಕ್ಷ ಮಹೇಶ ಟೆಂಗಿನಕಾಯಿ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಪಕ್ಷದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಸೋಮಣ್ಣ ಬೇವಿನಮರದ, ಮಾಜಿ ಶಾಸಕರಾದ ಸೀಮಾ ಮಸೂತಿ, ಕಳಕಪ್ಪ ಬಂಡಿ, ರಾಮಣ್ಣ ಲಮಾಣಿ, ಮುಖಂಡರಾದ ಭೋಜರಾಜ ಖರೋಜಿ, ಡಾ. ಪಾಂಡುರಂಗ ಪಾಟೀಲ, ಪ್ರದೀಪ ಶೆಟ್ಟರ್‌, ವೀರೇಶ ಅಂಚಟಗೇರಿ, ಪೂರ್ಣಾ ಪಾಟೀಲ, ವೀರಣ್ಣ ಸವಡಿ, ಸುಧೀರ ಸರಾಫ, ಮಲ್ಲಿಕಾರ್ಜುನ ಸಾವಕಾರ, ವಿಜಯಾನಂದ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಪದಾಧಿಕಾರಿಗಳು: ಘಟಕದ ಪ್ರಧಾನ ಕಾರ್ಯದರ್ಶಿಗಳಾಗಿ ರಂಗಾ ಬದ್ದಿ, ಪ್ರಕಾಶ ಗೋಡಬೋಲೆ, ಸಿದ್ದು ಮೊಗಲಿಶೆಟ್ಟರ; ಉಪಾಧ್ಯಕ್ಷರಾಗಿ ಜಿ.ಎನ್‌.ಹಿರೇಮಠ, ವಿನೋದ ರೇವಣಕರ, ಸಹದೇವ, ರಾಘವೇಂದ್ರ ರಾಮದುರ್ಗ, ಮೋಹನ, ರಾಧಾಬಾಯಿ ಸಫಾರೆ, ರೂಪಾ ಪಾಲನಕರ, ಶಾಂತಪ್ಪ ದೇವಕ್ಕಿ, ಗೀತಾ, ಪಿ.ಎಸ್‌.ಪಾಟೀಲ; ಕಾರ್ಯದರ್ಶಿಗಳಾಗಿ ಪ್ರಕಾಶ ಹಾವಣಗಿ, ಗೋಪಾಲ ಬದ್ದಿ, ಶಂಕರಪ್ಪ ಛಬ್ಬಿ, ರಂಗನಾಯಕ, ರಾಜೇಶ್ವರಿ ಅಧಿಕಾರ ವಹಿಸಿಕೊಂಡರು.

ಎಸ್‌ಸಿ ಮೋರ್ಚಾಗೆ ಭೀಮಶಿ, ಮಹಿಳಾ ಮೋರ್ಚಾಗೆ ಮೀನಾಕ್ಷಿ ವಂಟಮೂರಿ, ಯುವ ಮೋರ್ಚಾಗೆ ರಾಜು ಜರತಾರಘರ, ರೈತ ಮೋರ್ಚಾಗೆ ಚಂದ್ರಶೇಖರ ಮನಗುಂಡಿ, ಹಿಂದುಳಿದ ವೇದಿಕೆಗೆ ಕೃಷ್ಣ ಗಂಡಗಾಳೇಕರ, ಸ್ಲಂ ಮೋರ್ಚಾಗೆ ವೀರಣ್ಣ ಹಪ್ಪಳಿ, ಎಸ್‌ಟಿ ಮೋರ್ಚಾಗೆ ಅರುಣ ಕುಮಾರ ಗುದ್ದಲಿ ಅಧ್ಯಕ್ಷರಾಗಿ; ಐಟಿ ಘಟಕಕ್ಕೆ ಪ್ರಶಾಂತ ಜಾಧವ, ಉದ್ದಿಮೆದಾರರ ವೇದಿಕೆಗೆ ಕೆ.ಟಿ. ಪವಾರ ಸಂಚಾಲಕರಾಗಿ ಅಧಿಕಾರ ವಹಿಸಿಕೊಂಡರು.

ಮೊದಲ ಓವರ್‌ನಲ್ಲೇ ಸಿಕ್ಸರ್‌!
ಮಹಾನಗರ ಜಿಲ್ಲಾ ಬಿಜೆಪಿ ಘಟಕಕ್ಕೆ ಎರಡನೇ ಬಾರಿ ಅಧ್ಯಕ್ಷರಾಗಿ ಆಯ್ಕೆಯಾದ ಹುಡಾ ಮಾಜಿ ಅಧ್ಯಕ್ಷರೂ ಆಗಿರುವ ಲಿಂಗರಾಜ ಪಾಟೀಲ ಮೊದಲ ಓವರ್‌ನಲ್ಲೇ ಸಿಕ್ಸರ್‌ ಬಾರಿಸಿದ ಖುಷಿ ಅನುಭವಿಸಿದರು.

ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದು ಈಚೆಗೆ ಕೆಜೆಪಿ ಸೇರಿದ್ದ ಲಕ್ಷ್ಣಣ ಬೀಳಗಿ ಮತ್ತು ಮಾಜಿ ಮೇಯರ್‌ ವೆಂಕಟೇಶ ಮೇಸ್ತ್ರಿ ಅವರು ಲಿಂಗರಾಜ ಪಾಟೀಲರ ಪದಗ್ರಹಣ ಸಮಾರಂಭ­ದಲ್ಲಿ ಪಕ್ಷಕ್ಕೆ ವಾಪಸಾದರು.

ಜಗದೀಶ ಶೆಟ್ಟರ್‌ ಅವರಿಂದ ಶಾಲು ಪಡೆದು­ಕೊಂಡ ಮೇಸ್ತ್ರಿ ಅವರನ್ನು ಇತರ ನಾಯಕರು ಕ್ಯಾರೇ ಅನ್ನಲಿಲ್ಲ. ಲಕ್ಷ್ನಣ ಬೀಳಗಿ, ಶೆಟ್ಟರ್‌ ಅವರ ಕಾಲಿಗೆ ನಮಸ್ಕರಿಸಿದರು.

ಅನಂತಮೂರ್ತಿ ಆರೋಗ್ಯವಾಗಿರಲಿ’
‘ನರೇಂದ್ರ ಮೋದಿ ದೇಶದ ಪ್ರಧಾನಿ­ಯಾಗು­ವವರೆಗೂ ಸಾಹಿತಿ ಯು.ಆರ್‌. ಅನಂತಮೂರ್ತಿ­ಆರೋಗ್ಯವಾಗಿರ­ಬೇಕು ಎಂಬುದು ನಮ್ಮೆಲ್ಲರ ಆಶಯ. ಮೋದಿ ಆಡಳಿತ ನೋಡಲು ಅವರು ಇರಲೇ ಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ ಹೇಳಿದರು.

ನರೇಂದ್ರ ಮೋದಿ ಅವರನ್ನು ದೇಶದ ಪ್ರಧಾನಿ ಅಭ್ಯರ್ಥಿಯಾಗಿ ಘೋಷಣೆ ಮಾಡಿದ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ್ದ ಅನಂತಮೂರ್ತಿ, ಮೋದಿ ದೇಶದ ಆಡಳಿತ ಚುಕ್ಕಾಣಿ ಹಿಡಿದರೆ ಅದನ್ನು ನೋಡಲು ನಾನಿರಲಾರೆ ಎಂದು ಹೇಳಿದ್ದಕ್ಕೆ ಪ್ರತಿಕ್ರಿಯಿಸಿದ ಜೋಶಿ, ‘ಅನಂತಮೂರ್ತಿ ಆರೋಗ್ಯಕ್ಕೆ ತೊಂದರೆ ಏನೂ ಇಲ್ಲ. ಯಾವುದೇ ಪಕ್ಷದ ಆಡಳಿತ ಇದ್ದರೂ ಪ್ರಭಾವ ಬಳಸಿ ತಮಗೆ ಸಿಗಬೇಕಾದ ಸೌಲಭ್ಯಗಳನ್ನು ಪಡೆದುಕೊಂಡ ಅವರು ಚೆನ್ನಾಗಿಯೇ ಇದ್ದಾರೆ’ ಎಂದು ಲೇವಡಿ ಮಾಡಿದರು. ‘ರಾಜ್ಯದ ಎಲ್ಲ ಕಡೆಗಳಲ್ಲಿ ಪಕ್ಷದ ಪದಾಧಿಕಾರಿಗಳ ಆಯ್ಕೆ ನಡೆದಿದ್ದು ಬೆಂಗಳೂರು ಮತ್ತು ದಾವಣಗೆರೆ ಜಿಲ್ಲಾ ಘಟಕಗಳ ಅಧ್ಯಕ್ಷರನ್ನು 12 ದಿನಗಳೊಳಗೆ ಆರಿಸಲಾಗುವುದು’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.