ADVERTISEMENT

ಕೆಜೆಪಿ ಅಭ್ಯರ್ಥಿ ಪರ ಕಾಟವೆ, ಭಾರತಿ ಪ್ರಚಾರ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2013, 6:33 IST
Last Updated 26 ಏಪ್ರಿಲ್ 2013, 6:33 IST

ಧಾರವಾಡ: ಕರ್ನಾಟಕ ಜನತಾ ಪಕ್ಷದ ಹು-ಧಾ ಪಶ್ಚಿಮ ಮತಕ್ಷೇತ್ರದ ಅಭ್ಯರ್ಥಿ ಮೋಹನ ಲಿಂಬಿಕಾಯಿ ಪರವಾಗಿ ಕೆ.ಜೆ.ಪಿ. ರಾಜ್ಯ ಉಪಾಧ್ಯಕ್ಷ ಅಶೋಕ ಕಾಟವೆ 12 ಹಾಗೂ 21ನೇ ವಾರ್ಡ್‌ನಲ್ಲಿ ಮತಯಾಚನೆ ಮಾಡಿದರೆ, ಮಾಜಿ ಉಪಮೇಯರ್ ಭಾರತಿ ಪಾಟೀಲ 15 ವಾರ್ಡ್‌ನ ಚಪ್ಪರಬಂದ ಕಾಲೊನಿ, ರಾಮನಗರ, ಶಿವಾನಂದನಗರ ಮುಂತಾದ ಕಡೆ ಸಂಚರಿಸಿ ಪ್ರಚಾರ ಕೈಗೊಂಡರು.

22ನೇ ವಾರ್ಡ್‌ನ ಗಾಂಧಿನಗರದಿಂದ ಸಂಗೊಳ್ಳಿ ರಾಯಣ್ಣ ನಗರದವರೆಗೆ ಬುಧವಾರ ಪಾದಯಾತ್ರೆ ನಡೆಸಿದ ಮೋಹನ ಲಿಂಬಿಕಾಯಿ, ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರೈತರಿಗೆ, ಬಡವರಿಗೆ, ಕೃಷಿ ಕಾರ್ಮಿಕರಿಗೆ, ಮಹಿಳೆಯರಿಗೆ ದಿನ-ದಲಿತರಿಗೆ, ಅಲ್ಪಸಂಖ್ಯಾತರಿಗೆ ಹಾಗೂ ಸರ್ಕಾರಿ ನೌಕರರ ವರ್ಗಕ್ಕೆ ಅನೇಕ ಜನಪ್ರಿಯ ಯೊಜನೆಗಳನ್ನು ಜಾರಿಗೆ ತರುವಲ್ಲಿ ಯಶಸ್ವಿಯಾದರು.

ಅವರ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದನ್ನು ಕಂಡು ಪಕ್ಷದ ಒಳಗಿನ ಹಾಗೂ ವಿರೋಧ ಪಕ್ಷದವರು ನಿರಂತರ ಕಿರುಕುಳ ನೀಡಿದರು. ಭಾಗ್ಯಲಕ್ಷ್ಮೀ ಬಾಂಡ್, ಹೆಣ್ಣುಮಕ್ಕಳಿಗೆ ಸೈಕಲ್ ವಿತರಣೆ, ವಿಧುವಾ ವೇತನ, ಸಂಧ್ಯಾ ಸುರಕ್ಷಾ ಹೀಗೆ ಹತ್ತು ಹಲವು ಯೋಜನೆಗಳನ್ನು ತಮ್ಮ ಸರ್ಕಾರದಲ್ಲಿ ಮಹತ್ವದ ಯೋಜನೆಗಳನ್ನು ರೂಪಿಸಿದ್ದಾರೆ' ಎಂದರು. ನಗರ ಅಧ್ಯಕ್ಷ ಆರ್.ಬಿ.ಮೋಗಿ, ಜಿಲ್ಲಾ ಅಧ್ಯಕ್ಷ ಎನ್.ಎಸ್.ಬಿರಾದಾರ, ರಾಜ್ಯ ಕಾರ್ಯದರ್ಶಿ ಪ್ರಕಾಶ ಜಕಾತಿ, ಪ್ರಕಾಶ ಲಿಂಬಿಕಾಯಿ, ಡಾ.ಎಸ್.ಆರ್.ರಾಮನಗೌಡರ, ರಾಜೇಂದ್ರ ಸಾವಳಗಿ, ಧರಣೆಪ್ಪಗೌಡರ, ಭಾರತಿ ಪಾಟೀಲ, ಮಹ್ಮದ ಅಲಿ, ಪ್ರಭು ಭಜಂತ್ರಿ ಇತರರು ಇದ್ದರು.

ತಿಗಡಿ ಮತಯಾಚನೆ
ಧಾರವಾಡ:
ಹುಬ್ಬಳ್ಳಿ-ಧಾರವಾಡ ಪಶ್ವಿಮ ಕ್ಷೇತ್ರದ ಲೋಕಸತ್ತಾ ಪಕ್ಷದ ಅಭ್ಯರ್ಥಿ ನಾಗರಾಜ ತಿಗಡಿ ಗುರುವಾರ ನಗರದ ವಿವಿಧ ಭಾಗಗಳಲ್ಲಿ ಪಾದಯಾತ್ರೆ ಮೂಲಕ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ ನಾಗರಾಜ ಅವರಿಗೆ ಬೆಂಬಲ ಸೂಚಿಸಿತು. ನಗರದ ಉಳವಿ ಚೆನ್ನಬಸವೇಶ್ವರ ನಗರ, ನಾರಾಯಣಪುರ, ಪ್ರಶಾಂತನಗರ, ಸಾಧನಕೇರಿ, ಆರ್.ಸಿ.ನಗರ, ಅಮರಗೋಳ, ನವನಗರ, ಮುಂತಾದ ಕಡೆಗಳಲ್ಲಿ ತಿಗಡಿ ಪ್ರಚಾರ ಕೈಗೊಂಡರು. ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಬಿ.ಎಸ್.ಸೊಪ್ಪಿನ, ಆರ್.ಎಚ್.ಆಯಿ, ಬಿ.ಎನ್.ಪೂಜಾರಿ, ಬಿ.ಐ.ಈಳಿಗೇರ, ಎ.ಎಂ.ಖಾನ್, ಬಂಡಿವಾಡ, ವಿನಾಯಕ ಕುರುಬರ, ವಿಲಾಸ ಶೇರಖಾನ್, ಎನ್.ಎಂ.ಪಾಟೀಲ, ಬಿ.ಎಂ.ಹನಸಿ, ಎಸ್.ಬಿ.ಬಳಿಗಾರ, ವಿ.ಬಿ.ಮಾಗನೂರ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT