ADVERTISEMENT

ಕ್ಯಾಮರಾ ಕಣ್ಣಲ್ಲಿ ಕೆಪಿಎಸ್‌ಸಿ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2011, 7:30 IST
Last Updated 20 ಜೂನ್ 2011, 7:30 IST

ಹುಬ್ಬಳ್ಳಿ: `ಬೆಳಿಗ್ಗಿನ ಜನರಲ್ ನಾಲೆಜ್ ಪರೀಕ್ಷೆ ಪರ‌್ವಾಗಿರ‌್ಲಿಲ್ಲ. ಎಲ್ಲವೂ ಚೆನ್ನಾಗಿ ಮಾಡಿದ್ದೇನೆ. ಮಧ್ಯಾಹ್ನ ಸಾಮಾನ್ಯ ಕನ್ನಡ ಕಷ್ಟವಾಗಲಿಲ್ಲ....~ ಕೆಪಿಎಸ್‌ಸಿ, ಪ್ರಥಮ ದರ್ಜೆ ಸಹಾಯಕರ (ಎಫ್‌ಡಿಎ) ಹುದ್ದೆಗಾಗಿ ಭಾನುವಾರ ನಡೆಸಿದ ಪರೀಕ್ಷೆ ಬರೆದು ಹೊರಬಂದ ಧಾರವಾಡದ ಮಲ್ಲಿಕಾರ್ಜುನ ಅವರ ಮಾತಿಗೆ ದನಿಗೂಡಿಸಿದ ಅನೇಕರು ಸಂಜೆ ಪಿ.ಬಿ. ರಸ್ತೆಯಲ್ಲಿ ಸಿಕ್ಕಿದರು.

ಆಗ ತಾನೇ ಪದವಿ ಹಾಗೂ ಸ್ನಾತಕೋತ್ತರ ಪದವಿ ಮುಗಿಸಿದವರು, ಕೆಲಸ ಹುಡುಕಿ ಹೈರಾಣಾದ `ತಾಯಂದಿರು~ ಮುಂತಾಗಿ ಎಫ್‌ಡಿಸಿ ಹುದ್ದೆಗೆ ಭಾನುವಾರ ಪರೀಕ್ಷೆ ಬರೆದವರು ಸಾವಿರಾರು ಮಂದಿ.

ರಾಜ್ಯದಾದ್ಯಂತ ನಡೆದ ಪರೀಕ್ಷೆಯ ಬಿಸಿ ಅವಳಿ ನಗರದಲ್ಲೂ ದಿನವಿಡೀ ಉದ್ಯೋಗಾಕಾಂಕ್ಷಿಗಳ ಹೃದಯ ಬಡಿತ ಹೆಚ್ಚಿಸಿತ್ತು.  ಕೆಪಿಎಸ್‌ಸಿ ಪರೀಕ್ಷೆಯ ಜೊತೆಯಲ್ಲೇ ಧಾರವಾಡದ ಕೆ.ಇ. ಬೋರ್ಡ್ಸ್ ಶಾಲೆಯಲ್ಲಿ ಕೇಂದ್ರ ಸರ್ಕಾರದ ಸಿಬ್ಬಂದಿ ನೇಮಕಾತಿ ಮಂಡಳಿ (ಸ್ಟಾಫ್ ಸೆಲೆಕ್ಷನ್ ಕಮಿಷನ್)ಯ ಕಂಬೈನ್ಡ್ ಗ್ರಾಜುವೇಟ್ ಲೆವೆಲ್ ಟೆಸ್ಟ್  ಕೂಡ ನಡೆದಿತ್ತು. ಬೆಂಗಳೂರು ಬಿಟ್ಟರೆ ಈ ಪರೀಕ್ಷೆಗೆ ಕರ್ನಾಟಕದಲ್ಲಿ ಇದ್ದ ಪ್ರಮುಖ ಕೇಂದ್ರ ಧಾರವಾಡವಾಗಿದ್ದರಿಂದ ಅಲ್ಲೂ ಪರೀಕ್ಷೆಯ ಬಿಸಿ ಜೋರಾಗಿತ್ತು.

ಕೆಪಿಎಸ್‌ಸಿ ಇದೇ ಮೊದಲ ಬಾರಿ ಪರೀಕ್ಷೆ ಪ್ರಕ್ರಿಯೆಯ ವಿಡಿಯೊ ಚಿತ್ರೀಕರಣ ಮಾಡಿದ್ದು ಅವಳಿ ನಗರದ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಕ್ಯಾಮರಾ ಕಣ್ಣಿನಡಿ ಉದ್ಯೋಗಾಕಾಂಕ್ಷಿಗಳು ಪರೀಕ್ಷೆ ಬರೆದರು. `ಬೆಳಿಗ್ಗೆ ಟ್ರಜರಿ (ಕಪಾಟು)ಯಿಂದ ಪ್ರಶ್ನೆ ಪತ್ರಿಕೆ ತೆಗೆದುಕೊಂಡು ಬಂದು ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಹಂಚುವವರೆಗಿನ ಪ್ರಕ್ರಿಯೆಯನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯಲಾಗಿದೆ. ನಂತರ ಪರೀಕ್ಷಾ ಕೇಂದ್ರಗಳಲ್ಲಿ ವಿವಿಧ ಹಂತಗಳಲ್ಲಿ ಕ್ಯಾಮರಾ ಬಳಸಲಾಗಿದೆ~ ಎಂದು ಪರೀಕ್ಷೆಯ ಜಿಲ್ಲಾ ಸಂಯೋಜಕ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ  ವಿಷ್ಣು ಭಾಸ್ಕರ ಭಟ್ `ಪ್ರಜಾವಾಣಿ~ಗೆ ತಿಳಿಸಿದರು.

`ಪಾರದರ್ಶಕತೆಯನ್ನು ಕಾಪಾಡು ವುದಕ್ಕಾಗಿ ಪರೀಕ್ಷಾ ಕೊಠಡಿಯಲ್ಲಿ ಪ್ರಶ್ನೆ ಪತ್ರಿಕೆಯ ಕಟ್ಟನ್ನು ಬಿಚ್ಚುವುದನ್ನು ಚಿತ್ರೀಕರಿಸಲಾಗಿದೆ. ಪರೀಕ್ಷೆಯ ನಂತರ ಉತ್ತರ ಪತ್ರಿಕೆಗಳನ್ನು ಅಂಚೆ ಕಚೇರಿಗೆ ತಲುಪಿಸುವವರೆಗೂ ವಿಡಿಯೊ  ಚಿತ್ರೀಕರಣ ಮಾಡಲಾಗಿದೆ~ ಎಂದು ಅವರು ತಿಳಿಸಿದರು.

`ಅಂಚೆ ಕಚೇರಿ ಬಳಕೆ~
`ಕೆಪಿಎಸ್‌ಸಿ ಪ್ರಶ್ನೆ ಪತ್ರಿಕೆಗಳನ್ನು ಅಂಚೆ ಕಚೇರಿ ಮೂಲಕ ಸಾಗಿಸಿದ್ದು ಕೂಡ ಇದೇ ಮೊದಲು. ಈ ಹಿಂದೆ ಉತ್ತರ ಪತ್ರಿಕೆಗಳನ್ನು ಟ್ರಜರಿಯಲ್ಲಿರಿಸಿ ಕೆಪಿಎಸ್‌ಸಿಯ ವ್ಯಾನ್ ಮೂಲಕ ಸಾಗಿಸಲಾಗುತ್ತಿತ್ತು~ ಎಂದು ಅವರು ತಿಳಿಸಿದರು.

ಪರೀಕ್ಷೆಗೆ ಹುಬ್ಬಳ್ಳಿಯಲ್ಲಿ ಏಳು ಹಾಗೂ ಧಾರವಾಡದಲ್ಲಿ 27 ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಮೂರರಿಂದ ನಾಲ್ಕು ಕೇಂದ್ರಗಳಿ ಗೊಂದರಂತೆ ವಿಶೇಷ ವೀಕ್ಷಕರ ದಳವನ್ನು ನಿಯೋಜಿಸಲಾಗಿತ್ತು. ಪ್ರಶ್ನೆ ಪತ್ರಿಕೆ ಬಹಿರಂಗ, ಏಜೆಂಟರ ಕಾಟ ಮುಂತಾದ ವದಂತಿಗಳಿಂದ ಆತಂಕ ಕ್ಕೊಳಗಾಗಿದ್ದ ಉದ್ಯೋಗಾಕಾಂಕ್ಷಿಗಳು ಸಂಜೆ ಕೊನೆಗೂ ನಿಟ್ಟುಸಿರು ಬಿಟ್ಟಿದ್ದು ಉದ್ಯೋಗದ ಕನಸಿನೊಂದಿಗೆ `ತಾಪ~ದಿಂದ ಹೊರ ಬಂದಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.