ಹುಬ್ಬಳ್ಳಿ: ಒಡೆದ ಬಾಟಲಿ, ಕುಡಿದು ಬಿಸಾಡಿದ ಪಾನೀಯಗಳ ಡಬ್ಬಗಳು ಅಲ್ಲಿ ಪುಟ್ಟ ಹೂದಾನಿಗಳಾಗಿದ್ದವು. ರದ್ದಿಗೆ ಹಾಕುವ ಕಾಗದ, ರಟ್ಟು ಪುಟ್ಟ ಮನೆಗಳಾದ್ದವು. ಕಸವನ್ನು ರಸವನ್ನಾಗಿ ಪರಿವರ್ತಿಸುವ ಅನೇಕ ಮಾದರಿಗಳನ್ನು ಶಾಲಾ ವಿದ್ಯಾರ್ಥಿಗಳು ಪ್ರದರ್ಶಿಸಿದರು.
ಐಬಿಎಂಆರ್ ಕಾಲೇಜಿನಲ್ಲಿ ಶನಿವಾರ ತ್ಯಾಜ್ಯ ನಿರ್ವಹಣೆ ಕುರಿತ ವಿಚಾರ ಸಂಕಿರಣದ ಅಂಗವಾಗಿ ಆಯೋಜಿಸಿದ್ದ ವಸ್ತುಪ್ರದರ್ಶನದಲ್ಲಿ ವಿದ್ಯಾರ್ಥಿಗಳ ವಿಜ್ಞಾನ ಮಾದರಿಗಳು ಗಮನ ಸೆಳೆದವು. ಕೆಎಲ್ಇ ಇಂಗ್ಲಿಷ್ ಮಾಧ್ಯಮ ಶಾಲೆಯ ಕಾರ್ತಿಕ್ ಹಾಗೂ ಸಂಗಡಿಗರು ತ್ಯಾಜ್ಯಗಳನ್ನು ಬಳಸಿ ಸಬ್ಮರಿನ್ ಮಾದರಿಯನ್ನು ಸಿದ್ಧಪಡಿಸಿಕೊಂಡು ಬಂದಿದ್ದರು. ಖಾಲಿಯಾದ ಐದು ಲೀಟರ್ ಡಬ್ಬಕ್ಕೆ ಪ್ಲಾಸ್ಟಿಕ್ ತ್ಯಾಜ್ಯಗಳಿಂದ ರೆಕ್ಕೆ ಜೋಡಿಸಿ, ಪೈಪ್ ಮೂಲಕ ಗಾಳಿ ತೇಲಿಬಿಟ್ಟು ನೀರಿನ ಟಬ್ನೊಳಗೆ ತಮ್ಮ ಪ್ರಯೋಗ ತೋರಿಸಿದರು.
ಕೆಲವು ವಿದ್ಯಾರ್ಥಿಗಳು ಐಸ್ಕ್ರೀಮ್ ಕಡ್ಡಿಗಳಿಂದ ಪುಟ್ಟ ಬಾಕ್ಸ್, ಪ್ಲಾಸ್ಟಿಕ್ ಹಾಳೆಗಳಿಂದ ಸೂರ್ಯಕಾಂತಿ, ಹೂದಾನಿ, ಗೊಂಬೆ, ಚಿಟ್ಟೆ, ಮುಖವಾಡ ಮೊದಲಾದ ಮಾದರಿಗಳು ಗಮನ ಸೆಳೆದವು. ಇನ್ನೂ ಕೆಲವರು ತ್ಯಾಜ್ಯ ವಿಲೇವಾರಿ ಮತ್ತು ಸಂಪನ್ಮೂಲಗಳ ಸದ್ಬಳಕೆ ಕುರಿತು ಮಾದರಿಗಳನ್ನು ಪ್ರದರ್ಶಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.