ADVERTISEMENT

ತೋಟಗಾರಿಕಾ ಮೇಳ ನ. 22 ರಿಂದ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2011, 8:20 IST
Last Updated 4 ಅಕ್ಟೋಬರ್ 2011, 8:20 IST

ಹುಬ್ಬಳ್ಳಿ: `ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ನವೆಂಬರ್ 22 ರಿಂದ 24ರ ವರೆಗೆ ತೋಟಗಾರಿಕಾ ಮೇಳವನ್ನು ಏರ್ಪಡಿಸಲಾಗಿದೆ~ ಎಂದು ವಿವಿ ಕುಲಪತಿ ಡಾ.ಎಸ್.ಬಿ. ದಂಡಿನ ಸೋಮವಾರ ತಿಳಿಸಿದರು.

ನಗರದ ಇಂದಿರಾ ಗಾಜಿನ ಮನೆಯಲ್ಲಿ ಏರ್ಪಡಿಸಲಾಗಿದ್ದ ಫಲಪುಷ್ಪ ಪ್ರದರ್ಶನ ವೀಕ್ಷಿಸಿದ ನಂತರ ಅವರು `ಪ್ರಜಾವಾಣಿ~ಯೊಂದಿಗೆ ಮಾತನಾಡಿದರು. `ತೋಟಗಾರಿಕಾ ಮೇಳದಲ್ಲಿ ರಾಜ್ಯದ ಹಣ್ಣು, ಹೂವು ಹಾಗೂ ತರಕಾರಿ ಪ್ರದರ್ಶನವಿರುತ್ತದೆ. ಜೊತೆಗೆ ಬೆಳೆಗಾರರು ಭಾಗವಹಿಸಲಿದ್ದಾರೆ. ಅಲ್ಲದೇ ಅಲಂಕಾರಿಕ ಗಿಡಗಳ ಬೆಳೆಗಾರರು ಹಾಗೂ ಔಷಧೀಯ ಗಿಡಗಳ ಬೆಳೆಗಾರರು ಕೂಡಾ ಪಾಲ್ಗೊಳ್ಳುವರು~ ಎಂದು ಹೇಳಿದರು.

`ಮೇಳದಲ್ಲಿ ಪ್ರಗತಿಶೀಲ ರೈತರನ್ನು ಸನ್ಮಾನಿ ಸಲಾಗುತ್ತದೆ. ಜೊತೆಗೆ ತರಕಾರಿ, ಹಣ್ಣು ಹಾಗೂ ಹೂವಿನ ಬೀಜಗಳ ಪ್ರದರ್ಶನ ಮತ್ತು ಮಾರಾಟ ಸೌಲಭ್ಯ ಇರುತ್ತದೆ. ತೋಟಗಾರಿಕೆಗೆ ಸಂಬಂಧಿಸಿ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಇರುತ್ತದೆ. ಹೈಟೆಕ್ ತೋಟಗಾರಿಕೆಯ ಕುರಿತು ಮಾಹಿತಿ ನೀಡಲಾಗುತ್ತದೆ. ಜೊತೆಗೆ ತೋಟಗಾರಿಕೆಗೆ ಸಂಬಂಧಿಸಿ ಆಧುನಿಕ ಸಲಕರಣೆಗಳ ಪರಿಚಯವಿರುತ್ತದೆ~ ಎಂದರು.

`ಈ ಮೇಳದಲ್ಲಿ ರಾಜ್ಯದ ರೈತರಲ್ಲದೇ ವಿವಿಧ ರಾಜ್ಯದ ರೈತರು ಪಾಲ್ಗೊಳ್ಳುವರು. ತಜ್ಞರು ಹಾಗೂ ವಿಜ್ಞಾನಿಗಳೊಂದಿಗೆ ರೈತರು ಸಂವಾದ ನಡೆಸುತ್ತಾರೆ.

ಹಣ್ಣು ಮತ್ತು ತರಕಾರಿ ಬಲು ಬೇಗ ಕೆಡುವುದನ್ನು ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ನೂತನ ತಂತ್ರಜ್ಞಾನದ ಮಾಹಿತಿ ನೀಡಲಾಗುತ್ತದೆ. ಜೊತೆಗೆ ಹಣ್ಣು ಮತ್ತು ತರಕಾರಿಯನ್ನು ಸಂಸ್ಕರಿಸಿ ಹೊಸ ಹೊಸ ಪದಾರ್ಥಗಳನ್ನು ತಯಾರಿಸುವ ಕುರಿತು ಚರ್ಚಿಸಲಾಗುತ್ತದೆ~ ಎಂದು ಅವರು ವಿವರಿಸಿದರು.

`ತೋಟಗಾರಿಕೆ ಬೆಳೆಗಳಿಗೆ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲೂ ಮೇಳದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ.
ತೋಟಗಾರಿಕೆ ಬೆಳೆಗಾರರ ಜೊತೆಗೆ ಉದ್ಯಮಿಗಳು, ತಜ್ಞರು ಮೊದಲಾದವರನ್ನು ಒಂದೇ ವೇದಿಕೆಗೆ ತರುವ ಉದ್ದೇಶ ಕೂಡಾ ಈ ಮೇಳದ್ದಾಗಿದೆ~ ಎಂದು ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.