ADVERTISEMENT

ಧಾರವಾಡ: ಛಾಯಾಚಿತ್ರ ಪ್ರದರ್ಶನ ಆರಂಭ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2012, 5:25 IST
Last Updated 20 ಆಗಸ್ಟ್ 2012, 5:25 IST

ಧಾರವಾಡ: ವಿಶ್ವ ಛಾಯಾಚಿತ್ರ ದಿನಾಚರಣೆ ಅಂಗವಾಗಿ ಹವ್ಯಾಸಿ ಛಾಯಾಗ್ರಾಹಕರಾದ ಅನಿಲಕುಮಾರ ಕಿತ್ತೂರ, ವರ್ಷಾ ಸ್ಯಾಮುಯೆಲ್, ಅನುಪಮಾ ಢವಳೆ, ಭರತ್ ಯರಗಟ್ಟಿ, ಚೈತನ್ಯ ಷರೀಫ್ ಕುಲಕರ್ಣಿ, ರಾಜು ಹಿರೇಮಠ ಹಾಗೂ ಧ್ವನಿ ಫೌಂಡೇಶನ್‌ನವರ 165ಕ್ಕೂ ಅಧಿಕ ಛಾಯಾಚಿತ್ರಗಳ ಪ್ರದರ್ಶನ ಇಲ್ಲಿನ ಸರ್ಕಾರಿ ಚಿತ್ರಕಲಾ ಕಾಲೇಜಿನ ಆರ್ಟ್ ಗ್ಯಾಲರಿಯಲ್ಲಿ ಆರಂಭಗೊಂಡಿದ್ದು, ಜೆಎಸ್‌ಎಸ್ ಹಣಕಾಸು ಅಧಿಕಾರಿ ಡಾ.ಅಜಿತ್ ಪ್ರಸಾದ್ ಪ್ರದರ್ಶನ ಉದ್ಘಾಟಿಸಿದರು.

`ಛಾಯಾಚಿತ್ರಗಳು ಎಲ್ಲ ವ್ಯಕ್ತಿಗಳ ಭಾವನಾತ್ಮಕ ಸಂಬಂಧಗಳನ್ನು ಬಿಚ್ಚಿಡುವ ಕಲೆಗಳಾಗಿವೆ. ಈ ಕಲೆಯನ್ನು ಯುವಕರು ಕ್ರಿಯಾತ್ಮಕ ಕಾರ್ಯಗಳೊಂದಿಗೆ ಪೋಷಿಸಬೇಕು~ ಎಂದು ಸಲಹೆ ನೀಡಿದರು.
ಹಿರೇಮಲ್ಲೂರ ಈಶ್ವರನ್ ಕಾಲೇಜಿನ ಪ್ರಾಚಾರ್ಯ ಶಶಿಧರ ತೋಡಕರ, ಈ ಪ್ರದರ್ಶನ ಮಕ್ಕಳ ಹಾಗೂ ಯುವಕರಲ್ಲಿ ಛಾಯಾಚಿತ್ರಕಲೆಯ ಪ್ರೋತ್ಸಾಹಕ್ಕೆ ಮುನ್ನುಡಿಯಾಗಿದೆ ಎಂದು ಹೇಳಿದರು.
 

ಸರ್ಕಾರಿ ಚಿತ್ರಕಲಾ ಕಾಲೇಜಿನ ಪ್ರಾಚಾರ್ಯ ಎನ್.ಎಂ.ದಾಟನಾಳ, `ಚಿತ್ರಕಲೆ, ಶಿಲ್ಪಕಲೆ ಮತ್ತು ಛಾಯಾಚಿತ್ರಗಳು ನಮ್ಮ ಇತಿಹಾಸದ ಅಧ್ಯಯನದಲ್ಲಿ ತಮ್ಮದೇ ಆದ ಮಹತ್ತರ ಕೊಡುಗೆಯನ್ನು ನೀಡುತ್ತಿವೆ. ನಗರದಲ್ಲಿ ಸಾವಿರಾರು ಛಾಯಾಚಿತ್ರಕಾರರಿದ್ದು ಅವರ ಬೆಳವಣಿಗೆಗಾಗಿ ಛಾಯಾಚಿತ್ರ ಸಂಘವನ್ನು ಸ್ಥಾಪಿಸಬೇಕು~ ಎಂದರು. 

ಪ್ರಾಸ್ತಾವಿಕವಾಗಿ ಮಾತನಾಡಿದ ವರ್ಷಾ ಸ್ಯಾಮುಯೆಲ್, `ಪ್ರದರ್ಶನ ಮೂರು ದಿನಗಳ ಕಾಲ ನಡೆಯಲಿದ್ದು, ಶಾಲಾ ಮಕ್ಕಳು ಮತ್ತು ಯುವಕರು ಪಾಲ್ಗೊಂಡು, ರವೀಂದ್ರ ಪಾಟೀಲರು ಸಂಗ್ರಹಿಸಿರುವ 50ಕ್ಕೂ ಹೆಚ್ಚು ಮಾದರಿಯ ಕ್ಯಾಮೆರಾಗಳನ್ನು ವೀಕ್ಷಿಸಬೇಕು~ ಎಂದು ಕೋರಿದರು. ಅನುಪಮಾ ನಿರೂಪಿಸಿದರು. ಅರುಣ ಬಾಬು ಅಂಗಡಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT