ಕುಂದಗೋಳ: ಕಳೆದ ಮೂರು ದಿನಗಳಿಂದ ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ರೈತರ ಮೊಗದಲ್ಲಿ ಸಂತಸದ ವಾತಾವರಣ ಮೂಡುತ್ತಿದೆ. ಶೇಂಗಾ, ಬಿಳಿಜೋಳ ಮತ್ತು ಹತ್ತಿಬೆಳೆಗೆ ಮಳೆಯ ಅಗತ್ಯವಿದ್ದು, ಮಳೆಯಿಂದ ಅನುಕೂಲವಾಗಿದೆ. ಆದರೆ ಕೈಗೆ ಬಂದಿದ್ದ ಹೆಸರು, ಕೊತ್ತಂಬರಿ ಬೆಳೆಗೆ ಹಾನಿಯಾಗಿದೆ.
ಹೊಲಗಳಲ್ಲಿ ಮಳೆ ನೀರು ನಿಂತಿದೆ. ಕೆಲವು ಕೆರೆ ಕಟ್ಟೆಗಳು ತುಂಬಿವೆ. ಇದರಿಂದಾಗಿ ರೈತರಲ್ಲಿದ್ದ ಆತಂಕದ ವಾತಾವರಣ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಹೊಲಗಳಲ್ಲಿ ನೀರು ನಿಂತು ಕಾಲಿಡದಂತಾಗಿದೆ. ಬಿತ್ತಿದ ಬೆಳೆಗಳು ನಳನಳಿಸುವಂತಾಗಿವೆ.
ಗುಡುಗು ಮಿಂಚು ಸಹಿತ ಮಳೆ ಎಡೆಬಿಡದೆ ಸುರಿದ ಮಳೆಗೆ ತಾಲ್ಲೂಕಿನಲ್ಲಿ ಮಲೆನಾಡಿನ ವಾತಾವರಣ ನಿರ್ಮಾಣವಾಗಿದೆ. ಕೊಯ್ಲಿಗೆ ಬಂದಿದ್ದ ಹೆಸರು, ಹಲಸಂದಿ, ಕೊತ್ತಂಬರಿ ಬೆಳೆದ ಹೊಲದಲ್ಲಿ ನೀರು ನಿಂತು ಹಾಳಾಗಿವೆ. ಆದರೆ ಬಹುತೇಕ ರೈತರು ಮಳೆಗೆ ಮುನ್ನವೇ ಕೊಯ್ಲು ಮಾಡಿದ್ದರಿಂದ ನಷ್ಟದಿಂದ ಪಾರಾಗಿದ್ದಾರೆ.
ಇದಕ್ಕೆ ಪ್ರತಿಯಾಗಿ ಮಳೆಯಿಂದ ಹತ್ತಿ, ಬಿಳಿ ಜೋಳ ಮತ್ತು ಶೇಂಗಾ ಬೆಳೆಗೆ ಹೆಚ್ಚಿನ ಲಾಭವಾಗಿದೆ. ಒಣಗಿ ಹೋಗುತ್ತಿದ್ದ ಬೆಳೆಗಳಿಗೆ ಮಳೆ ಆಸರೆಯಾಗಿದೆ. ರೈತರಿಗೆ ಸಂತಸ ತಂದಿದೆ.
ಗುಡೇನಕಟ್ಟಿ, ಬೆನಕನಹಳ್ಳಿ, ಹಿರೇನರ್ತಿ, ಚಿಕ್ಕನತಿರ್, ಯರಗುಪ್ಪಿ, ಶಿರೂರು, ಸಂಶಿ, ಪಶುಪತಿಹಾಳ, ಗುಡಗೇರಿ, ಯಲಿವಾಳ, ಹೊಸಕಟ್ಟಿ, ಹಂಚಿನಾಳ, ಗುರುವಿನಹಳ್ಳಿ, ಮಳಲಿ, ಕುಂಕೂರು ಗ್ರಾಮಗಳಲ್ಲಿ ಮಳೆ ಹೆಚ್ಚಾಗಿದೆ.
ಬಂಗಾಳ ಕೊಲ್ಲಿಯಲ್ಲಿ ವಾಯು ಭಾರ ಕುಸಿತದಿಂದಾಗಿ ಮಳೆಯ ವಾತಾವರಣ ನಿರ್ಮಾಣವಾಗಿದೆ. ಇನ್ನೂ ಒಂದು ವಾರ ಮಳೆ ಸುರಿಯುವ ಸಾಧ್ಯತೆಗಳಿವೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವಾತಾವರಣ ಮುಂದುವರಿದರೆ ಬೆಳೆಗೆ ರೋಗ ಆವರಿಸಿಕೊಳ್ಳುವ ಆತಂಕವೂ ರೈತರನ್ನು ಕಾಡುತ್ತಿದೆ. ಮಳೆಯಿಂದಾಗಿ 12 ಮನೆಗಳು ಕುಸಿದಿವೆ. ಹಾನಿಗೆ ಪರಿಹಾರ ನೀಡುವಂತೆ ಸಂತ್ರಸ್ತರು ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.