ಹುಬ್ಬಳ್ಳಿ: ಮಂಗಳವಾರ ನಡೆಯಬೇಕಾಗಿದ್ದ ಗಣಿತ ಪರೀಕ್ಷೆಯ ಪ್ರಶ್ನೆಪತ್ರಿಕೆ ಬಹಿರಂಗವಾದುದಕ್ಕೆ ಹಾಗೂ ಪರೀಕ್ಷೆಯನ್ನು ಮುಂದೂಡಿದ್ದಕ್ಕೆ ನಗರದ ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದ್ದರೆ, ಪೋಷಕರು ಸರ್ಕಾರ-ಅಧಿಕಾರಿ ವರ್ಗ ಹಾಗೂ ಪರೀಕ್ಷಾ ಮಂಡಳಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಿಯುಸಿ ವಿಜ್ಞಾನ ವಿಭಾಗದ ಗಣಿತ ಪ್ರಶ್ನೆಪತ್ರಿಕೆ ಬಹಿರಂಗವಾಗಿದೆ ಎಂದು ಸೋಮವಾರ ರಾತ್ರಿ ತಿಳಿದು ಬಂದಿತ್ತು. ಬೆಳಿಗ್ಗೆ ಈ ಕುರಿತು ಟಿವಿ ವಾಹಿನಿ ಗಳಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆ ವಿದ್ಯಾರ್ಥಿಗಳು, ಪೋಷಕರು, ಕಾಲೇಜು ಆಡಳಿತ ಮಂಡಳಿ ಹಾಗೂ ಪಿಯು ಶಿಕ್ಷಣ ಇಲಾಖೆ ಅಧಿಕಾರಿಗಳು ಗೊಂದಲಕ್ಕೆ ಈಡಾದರು.
ಪ್ರಾಚಾರ್ಯರು ಮತ್ತು ಅಧ್ಯಾಪಕ ರಿಗೆ ವಿದ್ಯಾರ್ಥಿಗಳು ಹಾಗೂ ಪೋಷಕರು ದೂರ ವಾಣಿ ಕರೆ ಮಾಡಿ ವಿಚಾರಿಸತೊಡಗಿದರೆ ಕಾಲೇಜು ಆಡಳಿತದವರು ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ಪಡೆದುಕೊಂಡರು. ಕಾಲೇಜಿಗೆ ಬಂದು ಸರಿಯಾದ ಮಾಹಿತಿ ಪಡೆದು ಕೊಂಡು ಹೋಗುವಂತೆ ಕಾಲೇಜುಗಳ ಆಡಳಿತ ಮಂಡಳಿ ಯವರು ವಿದ್ಯಾರ್ಥಿಗಳಿಗೆ ಸೂಚಿಸಿದರು.
ಈ ಹಿನ್ನೆಲೆಯಲ್ಲಿ ಕಾಲೇಜಿಗೆ ಆಗಮಿಸಿದ ವಿದ್ಯಾರ್ಥಿಗಳು ಅಂತಿಮ ಮಾಹಿತಿ ಸಿಗುವವರೆಗೂ ಕಾದು ನಿಂತು ಕೊನೆಗೆ ಬೇಸರದಿಂದ ಮನೆಯತ್ತ ಸಾಗಿದರು. ಈ ಸಂದರ್ಭದಲ್ಲಿ `ಪ್ರಜಾವಾಣಿ~ ಜೊತೆ ಮಾತನಾಡಿದ ಕೆಲ ವಿದ್ಯಾರ್ಥಿಗಳು ಹಾಗೂ ಪೋಷಕರು ಅಸಮಾಧಾನ ವ್ಯಕ್ತಪಡಿಸಿದರು. ಅಧಿಕಾರಕ್ಕಾಗಿ `ರಾಜಕೀಯ~ ಮಾಡುತ್ತಿರುವವರು ಸಣ್ಣ ವಿಷಯಗಳ ಕಡೆಗೆ ಗಮನ ನೀಡದಿದ್ದರೆ ಇಂಥ ಅವಾಂತರಗಳಾಗುತ್ತವೆ ಎಂದು ಹೇಳಿದರು.
`ಎಲ್ಲ ಸಿದ್ಧತೆ ಮಾಡಿಕೊಂಡು ಬಂದಿದ್ದೆ. ಪರೀಕ್ಷೆ ಸುಲಭವಿರಬಹುದು ಎಂದು ಭಾವಿಸಿದ್ದೆ. ಆದರೆ ಪರೀಕ್ಷೆ ಮುಂದೂಡಿದ ವಿಷಯ ತಿಳಿದು ಬೇಸರ ವಾಯಿತು. ಪರೀಕ್ಷೆ ನಿಗದಿತ ದಿನದಲ್ಲೇ ನಡೆದರೆ ಮನಸ್ಸಿಗೆ ಸಮಾಧಾನವಿರುತ್ತದೆ. ಮುಂದೂಡಿದರೆ ಮತ್ತೊಮ್ಮೆ ಸಿದ್ಧತೆ ಮಾಡಿಕೊಳ್ಳ ಬೇಕಾಗುತ್ತದೆ.
ಪ್ರಶ್ನೆಪತ್ರಿಕೆ ಬಹಿರಂಗವಾಗು ವುದನ್ನು ತಡೆಯಲು ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕು~ ಎಂದು ಹೊಸೂರಿನ ರೋಷನ್ ಹೇಳಿದರು. `ಇಷ್ಟು ದಿನ ಓದಿಕೊಂಡು ಸಂಪೂರ್ಣ ಸಿದ್ಧವಾ ಗಿದ್ದೆ. ಉಳಿದ ಪರೀಕ್ಷೆಗಳಿಗೂ ಸಮಯ ಹೊಂದಿಸಿ ಕೊಂಡಿದ್ದೆ. ಈಗ ಶ್ರಮವೆಲ್ಲವೂ ನಿರರ್ಥಕವಾದಂತಾ ಯಿತು. ಆದರೂ ಬೇಸರವಿಲ್ಲ. ಮುಂದೂಡಿದ ದಿನವೂ ಪರೀಕ್ಷೆಯನ್ನು ಚೆನ್ನಾಗಿ ಮಾಡುವ ವಿಶ್ವಾಸವಿದೆ~ ಎಂದು ಕೇಶ್ವಾಪುರದ ಅಕ್ಷಯ ಪಾಟೀಲ ಹೇಳಿದರು.
ಪೋಷಕರಾದ ಕಿಶೋರ, `ಸಿದ್ಧತೆ ಮಾಡಿ ಕೊಂಡು ಹೋದ ವಿದ್ಯಾರ್ಥಿಗಳಿಗೆ ಪರೀಕ್ಷೆ ದಿಢೀರ್ ಮುಂದೂಡಿರುವ ವಿಷಯ ತಿಳಿದಾಗ ಬೇಸರವಾ ಗುತ್ತದೆ. ಸರ್ಕಾರ ನಡೆಸುವವರು ಅಧಿಕಾರಕ್ಕಾಗಿ ಪರಸ್ಪರ ಕಚ್ಚಾಡಿಕೊಂಡು ಕಾಲ ಕಳೆಯುತ್ತಿದ್ದಾರೆ, ಇಂಥ ಸೂಕ್ಷ್ಮ ವಿಷಯಗಳ ಬಗ್ಗೆ ಅವರಿಗೆ ಗಮನವಿಲ್ಲ~ ಎಂದು ಹೇಳಿದರು.
`ಕಾಪಿ ಹೊಡೆದವರನ್ನು ಹಿಡಿಯಲು, ಶಿಕ್ಷೆ ನೀಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಪರೀಕ್ಷಾ ಮಂಡಳಿಯವರು ಪ್ರಶ್ನೆಪತ್ರಿಕೆ ಬಹಿರಂಗವಾಗು ವುದನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳದಿ ರುವುದು ಬೇಸರದ ಸಂಗತಿ. ಕೋಟಿಗಳ `ವ್ಯವ ಹಾರ~ ಮಾಡುವ ರಾಜಕಾರಣಿಗಳು ಅಧಿಕಾರದ ದಾಹದಿಂದ ಪರಸ್ಪರ ಕೆಸರೆರಚುತ್ತಿದ್ದಾರೆ.
ಅಂಥವರು ಇಂಥ ವಿಷಯಗಳ ಕಡೆಗೂ ಗಮನ ನೀಡಬೇಕು~ ಎಂದು ಪೋಷಕ ಅರುಣ ಎ. ಮಾನ್ವಿ ಹೇಳಿದರು.`ಪರೀಕ್ಷೆ ಮುಂದೂಡಿದರೆ ವಿದ್ಯಾರ್ಥಿ ಗಳಲ್ಲಿ ಗೊಂದಲ ಉಂಟಾ ಗುತ್ತದೆ. ಮರು ಪರೀಕ್ಷೆಗೆ ಕಠಿಣ ಪ್ರಶ್ನೆಗಳನ್ನು ಸಿದ್ಧಪಡಿಸುತ್ತಾರೆ ಎಂಬ ಆತಂಕವಿರುತ್ತದೆ.
ಈಗ ಪ್ರಶ್ನೆಪತ್ರಿಕೆ ಬಹಿರಂಗವಾಗಿರುವುದರ ಹಿಂದೆ ಹಿರಿಯ ಅಧಿಕಾರಿಗಳ ಹೆಸರು ಕೆಡಿಸುವ ಹುನ್ನಾರ ಇದ್ದಿರಬಹುದು~ ಎಂದು ದ್ಯಾವಪ್ಪನವರ ವಳಸಂಗ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. ವಳಸಂಗ ಹಾಗೂ ಚೇತನಾ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ. ಇ.ವಿ. ಹುಡೇದ ಅಭಿಪ್ರಾಯಪಟ್ಟರು.
`ಪರೀಕ್ಷೆಯನ್ನು ಮುಂದೂಡಿರುವ ಬಗ್ಗೆ ಬೆಳಿಗ್ಗೆ ಇಲಾಖೆಯಿಂದ ಮಾಹಿತಿ ಬಂದಿದೆ. ಇದರ ಪ್ರಕಾರ ಎಲ್ಲ ಕಾಲೇಜುಗಳಿಗೂ ತಕ್ಷಣ ವಿಷಯ ತಿಳಿಸಲಾಗಿದೆ. ಮತ್ತೆ ಪರೀಕ್ಷೆ ನಡೆಯುವ ದಿನದ ಬಗ್ಗೆ ಬೆಂಗಳೂರಿನಿಂದ ಬರುವ ಸೂಚನೆಯ ಪ್ರಕಾರ ಅಗತ್ಯ ಕ್ರಮ ಕೈಗೊಳ್ಳಲಾಗುವುದು~ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರವೀಂದ್ರ ರಿತ್ತಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.