ADVERTISEMENT

ಬಾಬೂಜಿ ಅಧ್ಯಯನ ಕೇಂದ್ರ ಸ್ಥಾಪನೆಗೆ ಬೇಕಾಯಿತು 70 ವರ್ಷ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2017, 6:44 IST
Last Updated 14 ಅಕ್ಟೋಬರ್ 2017, 6:44 IST

ಧಾರವಾಡ: ‘ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಡಾ. ಬಾಬು ಜಗಜೀವನ್‌ರಾಂ ಅವರ ಕುರಿತ ಅಧ್ಯಯನ ಕೇಂದ್ರ ಸ್ಥಾಪನೆಗೆ 70 ವರ್ಷಗಳು ಬೇಕಾಯಿತು ಎಂಬುದು ಆಶ್ಚರ್ಯಕರ ಸಂಗತಿ’ ಎಂದು ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ಹೇಳಿದರು.

ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಡಾ. ಬಾಬು ಜಗಜೀವನರಾಂ ಅಧ್ಯಯನ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
‘ಡಾ. ಬಾಬೂಜಿ ಅವರ ಅಧ್ಯಯನ ಕೇಂದ್ರವು ಕರ್ನಾಟಕ ವಿವಿಯಲ್ಲಿ ಮಾತ್ರವಲ್ಲ, ರಾಜ್ಯದ ಎಲ್ಲಾ ವಿವಿಗಳಲ್ಲೂ ಇರಬೇಕು ಎಂದು ಈಗಾಗಲೇ ತೀರ್ಮಾನ ಕೈಗೊಳ್ಳಲಾಗಿದೆ. ಎಲ್ಲಾ ಕಡೆಯೂ ಒಂದೇ ಮಾದರಿಯ ಕಟ್ಟಡ ಇರಲಿದೆ. ನಿರ್ಮಾಣಕ್ಕೆ ₹ 2ಕೋಟಿ ಅನುದಾನವನ್ನೂ ನೀಡಲಾಗುವುದು’ ಎಂದರು ಹೇಳಿದರು.

ಕವಿವಿ ಕುಲಪತಿ ಡಾ. ಪ್ರಮೋದ ಗಾಯಿ ಅವರ ಕೋರಿಕೆ ಹಾಗೂ ಸಭೆಯಲ್ಲಿದ್ದ ವಿದ್ಯಾರ್ಥಿಗಳ ಕೂಗಿಗೆ ಸ್ಪಂದಿಸಿದ ಆಂಜನೇಯ, ‘ಕರ್ನಾಟಕ ವಿವಿಯಲ್ಲಿ ಓದುತ್ತಿರುವ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ವಿದ್ಯಾರ್ಥಿಗಳಿಗೆ ₹9 ಕೋಟಿ ಅನುದಾನ ನೀಡುವ ಭರವಸೆ ನೀಡಿದರು. ಇದರಲ್ಲಿ ವಿದ್ಯಾರ್ಥಿ ನಿಲಯ ಹಾಗೂ ವೇತನ, ವಿದೇಶ ಪ್ರವಾಸ, ಹೆಚ್ಚಿನ ವ್ಯಾಸಂಗ ಸೇರಿರುತ್ತದೆ. ಇಂದಿರಾ ಕ್ಯಾಂಟೀನ್‌ ನವೆಂಬರ್‌ನಿಂದ ಕಾರ್ಯಾರಂಭ ಮಾಡಲಿದೆ’ ಎಂದರು.

ADVERTISEMENT

ಡಾ. ಪಾಟೀಲ ಪುಟ್ಟಪ್ಪ ಮಾತನಾಡಿ, ‘ಬ್ರಿಟಿಷ್‌ ಸರ್ಕಾರದಲ್ಲಿದ್ದ ಡಾ. ಬಾಬಾಸಾಹೇಬ್‌ ಅಂಬೇಡ್ಕರ್‌ ಅವರನ್ನು ಸ್ವಾತಂತ್ರ್ಯದ ನಂತರ ರಚನೆಯಾದ ಭಾರತ ಸರ್ಕಾರದೊಳಗೆ ಸೇರಿಸಿಕೊಳ್ಳುವಲ್ಲಿ ಗಾಂಧೀಜಿ ಅವರ ಮೇಲೆ ಜಗಜೀವನರಾಂ ಅವರು ಪ್ರಭಾವ ಬೀರಿದರು. ಒಂದೊಮ್ಮೆ ಅದು ಸಾದ್ಯವಾಗದಿದ್ದರೆ, ಸಂವಿಧಾನ ರಚನಾ ಸಮಿತಿಯಲ್ಲಿ ಡಾ. ಅಂಬೇಡ್ಕರ್‌ ಇರುತ್ತಿರಲಿಲ್ಲ’ ಎಂದರು.

ಗಣಿ ಮತ್ತು ಭೂವಿಜ್ಞಾನ ಸಚಿವ ವಿನಯ ಕುಲಕರ್ಣಿ ಮಾತನಾಡಿದರು. ಮೀರಾ ಕುಮಾರ್ ಮಗಳು ಸ್ವಾತಿ ಕುಮಾರ್‌, ಡಾ. ಎನ್‌.ವೈ.ಮಟ್ಟಿಹಾಳ, ಪ್ರೊ. ಆರ್.ಹರೀಶ್‌, ಗೋನಾಳ ಭೀಮಪ್ಪ, ಡಾ. ಕೆ.ಸದಾಶಿವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.