ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆಯ ವೇಳೆ ಭದ್ರತೆಗಾಗಿ ಅರೆ ಸೇನಾ ಪಡೆಯ 10 ತುಕಡಿಗಳನ್ನು ನಿಯೋಜಿಸಲಾಗುತ್ತಿದೆ.
ಈಗಾಗಲೇ ಗಡಿಭದ್ರತಾ ಪಡೆ (ಬಿಎಸ್ಎಫ್) ಹಾಗೂ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್ನ) ತಲಾ ಒಂದು ತಂಡ ನಗರಕ್ಕೆ ಆಗಮಿಸಿದ್ದು, ಅವಳಿ ನಗರದ ಕಮೀಷನರೇಟ್ ವ್ಯಾಪ್ತಿಯಲ್ಲಿ ವಾಸ್ತವ್ಯ ಮಾಡಿವೆ.
ಚೆನ್ನೈನ ಆರ್ಮಿ ಬೇಸ್ನಿಂದ 90 ಯೋಧರು ಹಾಗೂ 12 ಅಧಿಕಾರಿಗಳ ತಂಡವಿರುವ ಬಿಎಸ್ಎಫ್ ತುಕಡಿ ಬೆಳಗಾವಿ ಮೂಲಕ ಬುಧವಾರ ಬೆಳಗಿನ ಜಾವ ಹುಬ್ಬಳ್ಳಿಗೆ ಆಗಮಿಸಿದೆ.
ಚುನಾವಣೆಗೆ ಭದ್ರತೆಗೆ ಜಿಲ್ಲೆಯಲ್ಲಿ ನಿಯೋಜಿಸಿರುವ 10 ತುಕಡಿಗಳಲ್ಲಿ ಬಿಎಸ್ಎಫ್, ಸಿಆರ್ಪಿಎಫ್ನೊಂದಿಗೆ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್ಎಫ್) ಯೋಧರು ಸೇರಿದ್ದಾರೆ. ಚುನಾವಣೆ ಶಾಂತಿಯುತವಾಗಿ ನಡೆಸಲು ಸ್ಥಳೀಯ ಪೊಲೀಸರಿಗೆ ನೆರವಾಗ ಲಿದ್ದಾರೆ ಎಂದು ಅವಳಿ ನಗರದ ಪೊಲೀಸ್ ಆಯುಕ್ತ ಬಿ.ಎ.ಪದ್ಮನಯನ `ಪ್ರಜಾವಾಣಿ'ಗೆ ತಿಳಿಸಿದರು.
ಹುಬ್ಬಳ್ಳಿ ಹಾಗೂ ಧಾರವಾಡದ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಯೋಧರು ಶೀಘ್ರ ಪಥಸಂಚಲನ ನಡೆಸಿ ಪರಿಸ್ಥಿತಿ ಅವಲೋಕನ ನಡೆಸಲಿದ್ದಾರೆ ಎಂದು ಅವರು ಹೇಳಿದರು.
`ಚುನಾವಣೆ ವೇಳೆ ಶಾಂತಿ-ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅವಳಿ ನಗರದಲ್ಲಿ ಈಗಾಗಲೇ 60 ಮಂದಿಯನ್ನು ಮುಂಜಾಗರೂಕತಾ ಕ್ರಮವಾಗಿ ವಶಕ್ಕೆ ಪಡೆದು ಆಯಾ ತಾಲ್ಲೂಕು ದಂಡಾಧಿಕಾರಿ (ತಹಶೀ ಲ್ದಾರ್) ನೇತೃತ್ವದಲ್ಲಿ ಬಾಂಡ್ ಬರೆಸಿ ಕೊಳ್ಳಲಾಗಿದೆ.
ಕಾನೂನು ಭಂಗ ಚಟುವಟಿಕೆ ಮುಂದುವರೆಸಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳ ಲಾಗುವುದು. ಅಗತ್ಯ ಬಿದ್ದಲ್ಲಿ ಗುಂಡಾ ಕಾಯ್ದೆ ಅಡಿ ಬಂಧಿಸ ಲಾಗುವುದು' ಎಂದು ಹೇಳಿದ ಪದ್ಮನಯನ, `ಒಟ್ಟಾರೆ ಶಾಂತಿಯುತ ವಾಗಿ ಚುನಾವಣೆ ನಡೆಯಲು ಅವಕಾಶ ಕಲ್ಪಿಸಲಾಗುವುದು' ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.