ADVERTISEMENT

ಭೌತಿಕ ವಿಜ್ಞಾನಕ್ಕೆ ಪ್ರಮುಖ ಸ್ಥಾನ: ಗ್ರೀರ್‌

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2013, 4:30 IST
Last Updated 18 ಡಿಸೆಂಬರ್ 2013, 4:30 IST
ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಡಾ.ಡಿ.ಸಿ.ಪಾವಟೆ ಸ್ಮಾರಕ ಫೌಂಡೇಶನ್ ಮಂಗಳವಾರ ಏರ್ಪಡಿಸಿದ್ದ ಡಾ.ಡಿ.ಸಿ.ಪಾವಟೆ ಸ್ಮಾರಕ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಇಂಗ್ಲೆಂಡ್‌ನ ಕೇಂಬ್ರಿಡ್ಜ್‌ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಎ.ಎಲ್.ಗ್ರೀರ್ ಮಾತನಾಡಿದರು. ಪ್ರೊ.ಜೇಮ್ಸ್ ಮಯಾಲ್, ಕುಲಪತಿ ಪ್ರೊ.ಎಚ್.ಬಿ.ವಾಲಿಕಾರ, ಕುಲಸಚಿವೆ ಡಾ. ಚಂದ್ರಮಾ ಕಣಗಲಿ ಇದ್ದಾರೆ.
ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಡಾ.ಡಿ.ಸಿ.ಪಾವಟೆ ಸ್ಮಾರಕ ಫೌಂಡೇಶನ್ ಮಂಗಳವಾರ ಏರ್ಪಡಿಸಿದ್ದ ಡಾ.ಡಿ.ಸಿ.ಪಾವಟೆ ಸ್ಮಾರಕ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಇಂಗ್ಲೆಂಡ್‌ನ ಕೇಂಬ್ರಿಡ್ಜ್‌ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಎ.ಎಲ್.ಗ್ರೀರ್ ಮಾತನಾಡಿದರು. ಪ್ರೊ.ಜೇಮ್ಸ್ ಮಯಾಲ್, ಕುಲಪತಿ ಪ್ರೊ.ಎಚ್.ಬಿ.ವಾಲಿಕಾರ, ಕುಲಸಚಿವೆ ಡಾ. ಚಂದ್ರಮಾ ಕಣಗಲಿ ಇದ್ದಾರೆ.   

ಧಾರವಾಡ: ‘ಜಾಗತಿಕ ತಾಪಮಾನ ನಿಯಂತ್ರಣ ಸೇರಿದಂತೆ ಜಗತ್ತಿನಲ್ಲಿ ವಿವಿಧ ರಂಗಗಳಲ್ಲಿ ಭೌತಿಕ ವಿಜ್ಞಾನ ಮುಂಬರುವ ದಿನಗಳಲ್ಲಿ ಬಹಳ ಪ್ರಮುಖ ಸ್ಥಾನ ಪಡೆಯಲಿದೆ’ ಎಂದು  ಇಂಗ್ಲೆಂಡ್‌ನ ಕೇಂಬ್ರಿಡ್ಜ್‌ ವಿಶ್ವವಿದ್ಯಾಲಯದ ಭೌತಿಕ ಹಾಗೂ ಲೋಹ ವಿಜ್ಞಾನ ಶಾಸ್ತ್ರದ ಪ್ರಾಧ್ಯಾಪಕ ಪ್ರೊ.ಎ.ಎಲ್.ಗ್ರೀರ್ ಹೇಳಿದರು.

ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಡಾ.ಡಿ.ಸಿ.ಪಾವಟೆ ಸ್ಮಾರಕ ಫೌಂಡೇಶನ್ ಆಶ್ರಯ­ದಲ್ಲಿ ಏರ್ಪಡಿಸಲಾಗಿದ್ದ ಡಾ.ಡಿ.ಸಿ.­ಪಾವಟೆ ಸ್ಮಾರಕ ವಿಶೇಷ ಉಪನ್ಯಾಸ ಕಾರ್ಯ­ಕ್ರಮದಲ್ಲಿ ‘ನಾಳೆಯನ್ನು ಬದಲಿಸುವ ಭೌತಿಕ ವಸ್ತುಗಳ ವಿಜ್ಞಾನ: ಕೇಂಬ್ರಿಡ್ಜ್‌ ಒಂದು ದೃಷ್ಟಿಕೋನ’ ಕುರಿತು ಮಾತನಾಡಿದ ಅವರು, ಕೇಂಬ್ರಿಡ್ಜ್‌ ವಿಶ್ವವಿದ್ಯಾಲಯದಲ್ಲಿ ಅನೇಕ ವಿಶ್ವದ ಸಂಶೋಧನಾ ಸಂಸ್ಥೆಗಳ ಸಹಯೋಗದಲ್ಲಿ ವಿವಿಧ  ಕ್ಷೇತ್ರಗಳಲ್ಲಿ ಸಂಶೋಧನೆ ನಡೆಯುತ್ತಿದೆ. ಗುಣಮಟ್ಟದ ವಸ್ತುಗಳ ಉತ್ಪಾದನೆ ಮೂಲಕ ಜಾಗತಿಕ ತಾಪಮಾನ ನಿಯಂತ್ರಣ, ಸೌರ ವಿದ್ಯುತ್ ಉತ್ಪಾದನೆ, ಆಕ್ಸಿಜನ್ ಗ್ಯಾಸ್ ಉತ್ಪಾದನೆ, ಭೌತಿಕ ವಿಜ್ಞಾನ, ವೈದ್ಯಕೀಯ, ಜೀವವಿಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಮುಂದು­ವರೆದಿರುವ ಸಂಶೋಧನೆಗಳನ್ನು ವಿವರಿಸಿದರು.

ಭೌತಿಕ ವಿಜ್ಞಾನದ ಸಂಶೋಧನೆಗಳು ಕಡಿಮೆ ವೆಚ್ಚ ಹಾಗೂ ಅಧಿಕ ಲಾಭ ಹೊಂದಿದ ಸಂಶೋಧನೆಗಳಾಗಿದ್ದು, ವಿಮಾನ, ಕಾರು ತಯಾರಿಕೆ ಗೃಹ ಉಪಯೋಗದಲ್ಲಿ ಇದರ ಪಾತ್ರ ಮುಖ್ಯವಾಗಿದೆ. ಅಲ್ಲದೇ ರಸಾಯನಿಕ ಮತ್ತು ಔಷಧಿ ವಿಜ್ಞಾನದಲ್ಲಿ ಸಂಶೋಧನೆ ನಡೆಯುತ್ತಿದ್ದು, ಭವಿಷ್ಯದ ದೃಷ್ಟಿಯಲ್ಲಿ ಪೂರಕ ತಂತ್ರಜ್ಞಾನ ಬಳಸಿ ಪೈಬರ್ ತಂತ್ರಜ್ಞಾನದ ಆವಿಷ್ಕಾರ ನಡೆದಿದೆ. ಕೇಂಬ್ರಿಡ್ಜ್‌ನ ಸಿಡ್ನಿ ಸೆಸಕ್ಸ್ ಕಾಲೇಜಿನ ಪ್ರಯೋಗಾಲವು ಐತಿಹಾಸಿಕ ಪರಂಪರೆ ಹೊಂದಿದ್ದು, ಅನೇಕ ಮಹಾನ್ ಸಂಶೋಧಕರು ಕೊಡುಗೆ ನೀಡಿದ್ದಾರೆ.

ಅಲ್ಲದೇ ತಯಾರಿಕಾ ಉದ್ಯಮಕ್ಕೆ ಭೌತಿಕ ವಿಜ್ಞಾನ ಮಹತ್ವದ ಕೋಡುಗೆ ನೀಡುವುದರ ಮೂಲಕ ಈ ಕ್ಷೇತ್ರವು ಹೊಸಬರಿಗೆ ಅವಕಾಶಗಳ ಆಗರವಾಗಿದೆ ಎಂದು ಹೇಳಿದರು. ಅಧ್ಯಕ್ಷತೆ ವಹಿ­ಸಿದ್ದ ಕುಲಪತಿ ಪ್ರೊ.ಎಚ್.ಬಿ.­ವಾಲಿಕಾರ, ‘ವಿದೇಶ­ಗಳಲ್ಲಿ ವಿವಿಗಳ ಸಂಶೋ­ಧನೆಗೆ ಉದ್ಯಮ ರಂಗ ಮುಂದೆ ಬಂದು ಪ್ರಾಯೋ­ಜ­ಕತ್ವ ನೀಡು­ತ್ತವೆ. ಭಾರತದಲ್ಲಿ ಶೈಕ್ಷಣಿಕ ಸಂಶೋಧನಗಳು ಕೇವಲ ಲೇಖನ ಪ್ರಕ­ಟಣೆಗೆ ಸೀಮಿತವಾಗಿ ನಡೆ­ಯುತ್ತವೆ. ಇದು ಬದಲಾಗಬೇಕು. ಸಮಾಜಕ್ಕೆ ಉಪ­ಯೋಗವಾಗಬಹುದಾದಂತಹ ವಿಷಯ­ಗಳ ಸಂಶೋಧನೆ ನಡೆಯಬೇಕು’ ಎಂದರು.

ಕಾವೇರಿ ಗಣಪತಿ ಹಾಗೂ ರಾಜೀವ ಎಸ್.ಜೋಶಿ ಅವರಿಗೆ ಪ್ರಸಕ್ತ ಸಾಲಿನ ಡಾ.ಡಿ.ಸಿ.ಪಾವಟೆ ಫೆಲೋಶಿಪ್‌ಗಳನ್ನು ಕುಲಪತಿ ವಿತರಿಸಿದರು. ಕುಲಸಚಿವೆ ಪ್ರೊ.ಚಂದ್ರಮಾ ಕಣಗಲಿ ಸ್ವಾಗತಿಸಿದರು. ಡಾ.ಬಿ.ಎಚ್.ನಾಗೂರ ಪರಿಚಯಿಸಿದರು. ಪ್ರಾಧ್ಯಾಪಕಿ ಶ್ಯಾಮಲಾ ರತ್ನಾಕರ ನಿರೂಪಿಸಿದರು. ಕವಿವಿ ಕಾನೂನು ವಿಭಾಗದ ಡೀನ್ ಪ್ರೊ.ಶರತ್ ಬಾಬು ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.